ಸಂವಿಧಾನ ದಿನದಂದು ಕಲಾಪ ಬಹಿಷ್ಕಾರಕ್ಕೆ ಪ್ರತಿಪಕ್ಷಗಳ ನಿರ್ಧಾರ
ನವದೆಹಲಿ, ನವೆಂಬರ್ 26: ಮಹಾರಾಷ್ಟ್ರ ರಾಜಕೀಯ ಗದ್ದಲಕ್ಕೆ ಮಂಗಳವಾರದ ಕಲಾಪವು ಬಲಿಯಾಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಮೈತ್ರಿಕೂಟ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಮಂಗಳವಾರದ ಕಲಾಪದಿಂದ ತಾತ್ಕಾಲಿಕವಾಗಿ ದೂರ ಇರಲು ನಿರ್ಧರಿಸಿದ್ದಾರೆ. ಸಂವಿಧಾನದ ದಿನವೇ ದೇಶದ ಪ್ರಜಾಪ್ರಭುತ್ವಕ್ಕೆ ಇಂತಹ ಸ್ಥಿತಿ ಬಂದಿದೆ. ಹೀಗಾಗಿ ಮಂಗಳವಾರದಂದು ಲೋಕಸಭೆ ಒಳಗೆ ಹಾಗೂ ಹೊರಗೆ ಗಲಾಟೆ ಎಬ್ಬಿಸಲು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯ ಪ್ರಹಸನದಲ್ಲಿ ಕೊನೆಗೆ ಗೆದ್ದಿದ್ದು ಕಾಂಗ್ರೆಸ್!
ಸೋಮವಾರದ ಕಲಾಪದ ಸಂದರ್ಭದಲ್ಲಿ ರಾಜ್ಯಸಭಾ ಹಾಗೂ ಲೋಕಸಭೆಯಲ್ಲಿ ತೀವ್ರ ಗದ್ದಲವಾಗಿತ್ತು. ಗದ್ದಲ ತಾರಕಕ್ಕೇರಿದ್ದಾಗ ಇಬ್ಬರು ಕಾಂಗ್ರೆಸ್ ಸದಸ್ಯರನ್ನು ತಾತ್ಕಾಲಿಕವಾಗಿ ಅಮಾನತು ಕೂಡ ಮಾಡಲಾಯಿತು.
ಇದರಿಂದ ಬೇಸತ್ತ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕರು ಸಂಸತ್ ಭವದೆದುರಿರುವ ಗಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಮಹಿಳಾ ಸಂಸದರ ಮೇಲೆ ಮಾರ್ಷಲ್ ಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹಾಗೆಯೇ ಪರಿಸ್ಥಿತಿ ಮುಂದುವರೆದ ಹಿನ್ನೆಲೆಯಲ್ಲಿ ಉಭಯ ಸದನವನ್ನು ಮಂಗಳವಾರ ಮಧ್ಯಾಹ್ನ ಎರಡು ಗಂಟೆವರೆಗೆ ಮುಂದೂಡಲಾಗಿತ್ತು.
ಮಂಗಳವಾರ ನವೆಂಬರ್ 26ರಂದ ಭಾರತದಲ್ಲಿ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಅಂದೇ ಪ್ರಜಾಪ್ರಭುತ್ವ ನಾಶವಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಧರಣಿ ನಡೆಸುವ ಸಾಧ್ಯತೆ ಇದೆ.
ಇನ್ನೊಂದೆಡೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಮುಂದಿನ ನಡೆ ನಿರ್ಧರಿಸಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಮೇಲೆ ಎಲ್ಲರ ಗಮನ ಇದೆ.