ನೋಟು ರದ್ಧತಿ ದೇಶದ ಬಹುದೊಡ್ಡ ಹಗರಣ: ರಾಹುಲ್ ಗಾಂಧಿ ಆರೋಪ
ನವದೆಹಲಿ, ಆಗಸ್ಟ್ 30: ಮೋದಿ ಅವರು ತಮ್ಮ ಭ್ರಷ್ಟ ಶ್ರೀಮಂತ ಗೆಳೆಯರಿಗೆ ಸಹಾಯ ಮಾಡಲೆಂದು ನೋಟು ಅಮಾನ್ಯೀಕರಣ (ಡಿಮಾನಟೈಸೇಷನ್) ಮಾಡಿದ್ದರು ಎಂದು ಬಹುದೊಡ್ಡ ಆರೋಪವನ್ನು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪುಹಣದ ವಿರುದ್ಧ ಹೋರಾಡಲು ನೋಟು ರದ್ಧತಿ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಆರ್ಬಿಐ ಪ್ರಕಾರ ಬಹುತೇಕ ಎಲ್ಲಾ ನೋಟುಗಳು ಆರ್ಬಿಐಗೆ ವಾಪಸ್ ಬಂದಿವೆ ಹಾಗಿದ್ದರೆ ಕಪ್ಪುಹಣ ಎಲ್ಲಿ ಹೋಯಿತು ಎಂದು ಅವರು ಮೌಲಿಕವಾದ ಪ್ರಶ್ನೇಯನ್ನೇ ಕೇಳಿದರು.
ಮೋದಿ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಅವರು, ನೋಟು ಅಮಾನ್ಯೀಕರಣ ಭಾರತದ ಅತಿ ದೊಡ್ಡ ಹಗರಣ ಎಂದರು. ಆರ್ಬಿಐ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ವರದಿಯಲ್ಲಿ 99.60% ನೋಟುಗಳು ವಾಪಸ್ ಬಂದಿದ್ದಾಗಿ ವರದಿ ನೀಡಿದೆ. ಹಾಗಾಗಿ ರಾಹುಲ್ ಅವರು ಇಂದು ಸುದ್ದಿಗೋಷ್ಠಿ ಕರೆದು ನೋಟು ರದ್ಧತಿಯನ್ನು ಟೀಕಿಸಿದರು.

ಅಮಿತ್ ಶಾ ಬ್ಯಾಂಕಿನಲ್ಲಿ 700 ಕೋಟಿ ಬದಲು
ನೋಟು ರದ್ಧತಿ ಭಾರತದ ಅತಿದೊಡ್ಡ ಹಗರಣ ಎಂದ ರಾಹುಲ್ ಗಾಂಧಿ, ಮೋದಿ ಅವರ ಕೆಲವು ಶ್ರೀಮಂತ ಸ್ನೇಹಿತರ ಕಪ್ಪುಹಣವನ್ನು ಬಿಳಿ ಮಾಡಲು ನೋಟು ರದ್ಧತಿ ಮಾಡಲಾಗಿತ್ತು ಎಂದರು ಇದಕ್ಕೆ ಉದಾಹರಣೆಯಾಗಿ ಗುಜರಾತ್ನ ಅಲಹಾಬಾದ್ನಲ್ಲಿ ಅಮಿತ್ ಶಾ ನಿರ್ದೇಶಕರಾಗಿರುವ ಸಣ್ಣ ಸಹಕಾರಿ ಬ್ಯಾಂಕ್ನಲ್ಲಿ 700 ಕೋಟಿ ಹಣ ಬದಲಾವಣೆಯಾಗಿದ್ದ ಘಟನೆಯನ್ನು ನೀಡಿದರು.

ಮೋದಿಯ ಭ್ರಷ್ಟ ಶ್ರೀಮಂತ ಗೆಳೆಯರಿಗಾಗಿ ಅಮಾನ್ಯೀಕರಣ
ಮೋದಿ ಅವರ ಕೆಲವು ಭ್ರಷ್ಟ ಶ್ರೀಮಂತ ಗೆಳೆಯರ ಜೇಬಿಗೆ ಹಣ ತುಂಬಿಸಲು ಮೋದಿ ಅವರು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಬೆನ್ನು ಮೂಳೆ ಮುರಿದರು, ಲಕ್ಷಾಂತರ ಉದ್ಯೋಗಗಳು ಕಳೆದುಕೊಳ್ಳುವಂತೆ ಮಾಡಿದರು. ಭಾರತ ತನ್ನ 2% ಜಿಡಿಪಿ ಕಳೆದುಕೊಳ್ಳುವಂತಾಯಿತು ಎಂದು ಹೇಳಿದರು.

ಮೋದಿ ಪ್ರಚಾರಕ್ಕೆ ಹಣ ಕೊಡುವವರಿಗೆ ಹಣ ಕೊಟ್ಟರು ಮೋದಿ
ಮೋದಿ ನೋಟು ರದ್ಧತಿಯನ್ನು ಮಾಡಿದ್ದು ಗೊತ್ತಿಲ್ಲದೆ ಅಲ್ಲ, ಅದನ್ನು ಅವರು ಬೇಕೆಂದೇ ಮಾಡಿದ್ದರು. 'ನೋಟು ರದ್ಧತಿ ಒಂದು ತಪ್ಪಲ್ಲ, ಅಪರಾಧ' ಎಂದ ಅವರು, ಮೋದಿ ಅವರ ಪ್ರಚಾರಕ್ಕೆ ಹಣ ಕೊಡುವ ಅವರ ಶ್ರೀಮಂತರ ಜೇಬನ್ನು ಅವರು ತುಂಬಿಸಬೇಕಾಗಿತ್ತು ಹಾಗಾಗಿಯೇ ಅವರು ನೋಟು ರದ್ಧತಿ ಮಾಡಿ ಬಡ ಜನರ ಹಣ ಕಿತ್ತುಕೊಂಡು ಶ್ರೀಮಂತರಿಗೆ ನೀಡಿದರು ಎಂದರು.

ನೋಟು ರದ್ಧತಿ ಹಗರಣದ ಬಗ್ಗೆ ಸಾಕ್ಷ್ಯಗಳು ಬರುತ್ತವೆ
ನೋಟು ಅಮಾನ್ಯೀಕರಣ ಒಂದು ಬಹುದೊಡ್ಡ ಹಗರಣ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಒಂದೊಂದಾಗಿ ಸಾಕ್ಷಿಗಳು ಹೊರಬರಲಿವೆ ಎಂದ ರಾಹುಲ್ ಗಾಂಧಿ. ಅಮೆಜಾನ್ ನಂತಹಾ ದೊಡ್ಡ ಸಂಸ್ಥೆಗಳು ದೇಶವನ್ನು ಸುಲಭವಾಗಿ ಪ್ರವೇಶಿಸಲು ಮಾಡಿದ ಹುನ್ನಾರ ಇದು ಎಂದು ಆರೋಪಿಸಿದರು.

ಬಿಜೆಪಿಯು ಆರ್ಥಿಕತೆಗೆ ಪೆಟ್ಟು ಕೊಟ್ಟಿದೆ
ಬಿಜೆಪಿಯು ದೇಶದ ಆರ್ಥಿಕೆಗೆ ಭಾರಿ ಪೆಟ್ಟು ನೀಡಿದೆ ಎಂದ ಅವರು ಮನಮೋಹನ್ ಸಿಂಗ್ ಕಾಲದ ದೇಶದ ಆರ್ಥಿಕತೆಯ ಅಂಕಿ-ಅಂಶ ಮತ್ತು ಈಗಿನ ಅಂಕಿ-ಅಂಶವನ್ನು ನೀಡಿದರು. ನೋಟು ರದ್ಧತಿಯಿಂದ ದೇಶ ತನ್ನ 2% ಜಿಡಿಪಿ ಕಳೆದುಕೊಂಡಿತು ಎಂದ ರಾಹುಲ್ ಗಾಂಧಿ ನಮ್ಮ ಕಾಲದಲ್ಲಿ ಕಡಿಮೆ ಇದ್ದ ನಾನ್ ಪರ್ಮಾರ್ಮಿಂಗ್ ಅಸೆಟ್ ಈಗ 12 ಲಕ್ಷ ಕೋಟಿ ನಾನ್ ಪರ್ಮಾರ್ಮಿಂಗ್ ಅಸ್ಸೆಟ್ ಆಗಿದೆ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದರು.

ಮೋದಿ ಅವರು ಜಂಟಿ ಹೇಳಿಕೆ ಓದಿದ ರಾಹುಲ್
ರಫೇಲ್ ಡೀಲ್ ಬಗ್ಗೆಯೂ ಮಾತನಾಡಿ ಅವರು, ಮೋದಿ ಅವರು ಫ್ರಾನ್ಸ್ಗೆ ಹೋಗಿದ್ದಾಗ ಬಿಡುಗಡೆ ಮಾಡಿದ್ದ ಜಂಟಿ ಹೇಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಓದಿ, ಮೋದಿ ಒಬ್ಬ ಸುಳ್ಳುಗಾರ ಎಂದು ಆರೋಪಿಸಿದರು. ಸಂಸದೀಯ ಸಮಿತಿಯೊಂದನ್ನು ಈ ಕುರಿತು ರಚಿಸಿ ತನಿಖೆ, ಚರ್ಚೆ ನಡೆಸಲಿ ಎಂದು ಅವರು ಸವಾಲು ಎಸೆದರು.

ಜೀವನದಲ್ಲಿ ವಿಮಾನವೇ ತಯಾರಿಸದ ಅನಿಲ್ ಅಂಬಾನಿ
ಜೀವನದಲ್ಲಿ ಈ ವರೆಗೆ ವಿಮಾನವನ್ನೇ ತಯಾರಿಸಿರದ ಅನಿಲ್ ಅಂಬಾನಿಗೆ ರಫೇಲ್ ವಿಮಾನ ತಯಾರಿಸುವ ಒಪ್ಪಂದ ನೀಡಿದ್ದು ಏಕೆ, ರಫೇಲ್ ಖರೀದಿ ಮೊತ್ತದ ಬಗ್ಗೆ ಸುಮ್ಮನಾಗಿರುವುದು ಏಕೆ, ಅನುಭವಿ ಸಂಸ್ಥೆ ಎಚ್ಎಎಲ್ನಿಂದ ವಿಮಾನ ತಯಾರಿಕಾ ಒಪ್ಪಂದವನ್ನು ಕಿತ್ತುಕೊಂಡಿದ್ದು ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನೆಗಳನ್ನು ಎತ್ತಿದರು.












Click it and Unblock the Notifications