21ನೇ ಶತಮಾನದ ಜಗತ್ತಿನ ಅದ್ಭುತ ನಟ ಭಾರತದವರು: ಮೋದಿ ಬಗ್ಗೆ ವ್ಯಂಗ್ಯ
ನವದೆಹಲಿ, ಜನವರಿ 5 : ಮಹಾರಾಷ್ಟ್ರದಲ್ಲಿ ದಲಿತರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಗುಜರಾತ್ ನ ಶಾಸಕ ಜಿಗ್ನೇಶ್ ಮೇವಾನಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಥ ಘಟನೆಗಳ ಬಗ್ಗೆ ಮೋದಿ ಅವರ ನಿಲುವೇನು ಎಂದು ಬಹಿರಂಗಪಡಿಸಬೇಕು ಎಂಬ ಒತ್ತಾಯ ಕೂಡ ಮಾಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಪ್ರಧಾನಿ ಮೋದಿ ಮಾತನಾಡಿ, ನೀವು ಶೂಟ್ ಮಾಡಬೇಕೆಂದಿದ್ದರೆ ನನಗೆ ಮಾಡಿ, ನನ್ನ ದಲಿತ ಸಹೋದರರಿಗಲ್ಲ ಎಂದಿದ್ದರು. ತಮಗೆ ದಲಿತರ ಮೇಲೆ ಕಾಳಜಿ ಇರುವುದನ್ನು ತುಂಬ ತೀಕ್ಷ್ಣವಾದ ಮಾತುಗಳಿಂದ ಹೊರಗೆ ಹಾಕಿದ್ದರು ನರೇಂದ್ರ ಮೋದಿ.
ಮುಂಬೈ ಗಲಭೆ: ಜಿಗ್ನೇಶ್ ಮೆವಾನಿ, ಉಮರ್ ಖಲೀದ್ ವಿರುದ್ಧ ಎಫ್ ಐಆರ್
ಗುಜರಾತ್ ನ ಶಾಸಕರಾದ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದು, "ಇಪ್ಪತ್ತೊಂದನೇ ಶತಮಾನದಲ್ಲಿ ಜಗತ್ತಿನ ಅತ್ಯುತ್ತಮ ನಟ ಭಾರತದಿಂದ ಬರುತ್ತಾರೆ ಎಂದು ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದರು" ಎಂದು ವ್ಯಂಗ್ಯವಾಡಿದ್ದಾರೆ.
ಈಚೆಗೆ ಮಹಾರಾಷ್ಟ್ರದಲ್ಲಿ ನಡೆ ಭೀಮಾ ಕೋರೆಗಾಂವ್ ಗಲಭೆಗೆ ಸಂಬಂಧಿಸಿದಂತೆ ಸಂಭಾಜಿ ಭಿಡೆ ಮತ್ತು ಮಿಲಿಂದ್ ಏಕ್ಬೊಟೆ ಎಂಬಿಬ್ಬರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ದಲಿತರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಂದ್ ಗೆ ಕೂಡ ಕರೆ ನೀಡಲಾಗಿತ್ತು.