ಅಭಿಜಿತ್ ಬ್ಯಾನರ್ಜಿ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ: ಮೋದಿ
ನವದೆಹಲಿ, ಅಕ್ಟೋಬರ್ 22: ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಸಕ್ತ ಸಾಲಿನ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿರುವ ಭಾರತ ಮೂಲಕ ಅಭಿಜಿತ್ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಜಾಗತಿಕ ಬಡತನ ನಿರ್ಮೂಲನೆಗಾಗಿ ಕೈಗೊಂಡ ಪ್ರಾಯೋಗಿಕ ಅಧ್ಯಯನಕ್ಕಾಗಿ ಅಭಿಜಿತ್ ಬ್ಯಾನರ್ಜಿ ಅವರು ಪತ್ನಿ ಎಸ್ತರ್ ಡುಪ್ಲೋ ಮತ್ತು ಅರ್ಥಶಾಸ್ತ್ರಜ್ಞ ಮಿಷಲ್ ಕ್ರೆಮರ್ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದವರಾದ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ.
ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದು, ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗಿನ ಅದ್ಭುತ ಭೇಟಿ ಎಂದು ಹೇಳಿಕೊಂಡಿದ್ದಾರೆ. ಅಭಿಜಿತ್ ಬ್ಯಾನರ್ಜಿ ವಿರುದ್ಧ ಕೇಂದ್ರ ಸಚಿವರ ಟೀಕಾಪ್ರಹಾರದ ಬಳಿಕ ಈ ಭೇಟಿ ನಡೆದಿದೆ.

'ಮಾನವ ಸಬಲೀಕರಣದೆಡೆಗಿನ ಅಭಿಜಿತ್ ಬ್ಯಾನರ್ಜಿ ಅವರ ತುಡಿತ ಬಹಳ ಸ್ಪಷ್ಟವಾಗಿ ಕಾಣುತ್ತದೆ. ವಿವಿಧ ವಿಷಯಗಳ ಕುರಿತು ನಾವು ಆರೋಗ್ಯಕರ ಮತ್ತು ವಿವರವಾದ ಸಂವಾದ ನಡೆಸಿದೆವು. ಅವರ ಸಾಧನೆಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಅವರ ಭವಿಷ್ಯದ ಯೋಜನೆಗಳಿಗೆ ಒಳಿತಾಗಲಿ ಎಂದು ಆಶಿಸುತ್ತೇನೆ' ಎಂಬುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
Recommended Video
ಅಭಿಜಿತ್ ಅವರು ಎನ್ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ತೆಗೆದುಕೊಂಡಿದ್ದ ನೋಟ್ ಬ್ಯಾನ್ ರದ್ದತಿಯ ನಿರ್ಧಾರವನ್ನು ಟೀಕಿಸಿದ್ದರು. ಜತೆಗೆ ಕಾಂಗ್ರೆಸ್ ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 'ನ್ಯಾಯ್' ಯೋಜನೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮನ್ನು ಎಡಪಂಥೀಯ ಎಂದೇ ಕರೆದುಕೊಂಡಿರುವ ಅವರು ಬಲಪಂಥೀಯ ನಿಲುವುಗಳನ್ನು ಕಟುವಾಗಿ ವಿರೋಧಿಸಿದ್ದಾರೆ.
ಅಭಿಜಿತ್ ಅವರನ್ನು ಟೀಕಿಸಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್, ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರು ಎಡಪಂಥೀಯ ವಿಚಾರಧಾರೆ ಹೊಂದಿರುವುದು ನಿಮಗೆಲ್ಲಾ ತಿಳಿದಿದೆ. ಅವರನ್ನು ನ್ಯಾಯ್ ಯೋಜನೆಗಾಗಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಆದರೆ ಜನತೆ ಅದನ್ನು ತಿರಸ್ಕರಿಸಿದ್ದರು. ಅಭಿಜಿತ್ ಬ್ಯಾನರ್ಜಿ ಅವರಲ್ಲಿ ವೃತ್ತಿಪರತೆ ಇಲ್ಲ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬ್ಯಾನರ್ಜಿ, ಕಾಂಗ್ರೆಸ್ ಪಕ್ಷದಂತೆಯೇ ಬಿಜೆಪಿ ಸರ್ಕಾರ ಕೂಡ ಒಂದು ನಿರ್ದಿಷ್ಟ ಆದಾಯದ ಅಡಿಯಲ್ಲಿರುವ ಜನರ ಸಂಖ್ಯೆ ಎಷ್ಟು ಎಂದು ಕೇಳಿದ್ದರೆ ನಾನು ಅವರಿಗೆ ಸತ್ಯ ಹೇಳುತ್ತಿರಲಿಲ್ಲವೇ? ಅವರಿಗೆ ನಿಖರವಾಗಿ ತಿಳಿಸಲು ನಾನು ಸಿದ್ಧನಿದ್ದೆ. ನಾನು ಎಲ್ಲರೊಂದಿಗೆ ವೃತ್ತಿಪರನಾಗಿರಲು ಬಯಸುತ್ತೇನೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂದು ಸಂದರ್ಶನವೊಂದಲ್ಲಿ ಹೇಳಿದ್ದರು.












Click it and Unblock the Notifications