ಜೈಲಲ್ಲಿ ದಿಂಬಿಲ್ಲ, ಚೇರಿಲ್ಲ ಎಂದ ಚಿದು ಗೋಳು ಬಿಚ್ಚಿಟ್ಟ ಸಿಂಘ್ವಿ
ನವದೆಹಲಿ, ಸೆ. 19: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಗುರುವಾರದಂದು ವಿಶೇಷ ನ್ಯಾಯಾಲಯದಲ್ಲಿ ಶುಭ ಸುದ್ದಿ ಸಿಕ್ಕಿಲ್ಲ. ಮತ್ತೊಮ್ಮೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದ್ದು, ಅಕ್ಟೋಬರ್ 03ರ ತನಕ ತಿಹಾರ್ ಜೈಲಿನಲ್ಲಿರಬೇಕಾಗುತ್ತದೆ.
ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಚಿದಂಬರಂಗೆ ನಿರಾಶೆಯಾಗಿತ್ತು. ನಂತರ ನಮಗೆ ನ್ಯಾಯಾಂಗ ಬಂಧನ ಬೇಡ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗತನಾಗಲು ನನ್ನ ಕಕ್ಷಿದಾರ ಸಿದ್ಧ, ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನ ಅನುಭವಿಸಿದ್ದಾರೆ" ಎಂದು ಕೋರ್ಟ್ ಮುಂದೆ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದ್ದರು. ಆದರೆ, ಕಪಿಲ್ ವಾದಕ್ಕೆ ಮನ್ನಣೆ ಸಿಕ್ಕಿಲ್ಲ. ಸೆ. 23ರಂದು ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ನಂತರ, ತಿಹಾರ್ ಜೈಲು, ಚಿದಂಬರಂ ಇರುವ ಸೆಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಚಿದಂಬರಂ ಪರ ವಕೀಲ ಅಭಿಶೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಚಿದಂಬರಂ ಅವರಿರುವ ಸೆಲ್ ನಲ್ಲಿ ಕೂರಲು ಚೇರಿಲ್ಲ. ತಲೆಗೆ ದಿಂಬಿಲ್ಲ ನನ್ನ ಕಕ್ಷಿದಾರರಿಗೆ 74 ವರ್ಷ ವಯಸ್ಸಾಗಿದೆ ಎಂದು ವಾದಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರ ಪರ ವಕೀಲ ತುಷಾರ್ ಮೆಹ್ತಾ, ಈ ಸೆಲ್ ಗಳಲ್ಲಿ ಚೇರ್ ಈ ಹಿಂದೆಯೂ ಇರಲಿಲ್ಲ. ಇದೊಂದು ಸಣ್ಣ ವಿಚಾರ, ಸುಮ್ಮನೆ ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದರು.
"ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಕಪಿಲ್ ಸಿಬಾಲ್ ಈ ಮುಂಚೆ ವಾದಿಸಿದ್ದರು. "ಆದರೆ ಗೃಹ ಬಂಧನವನ್ನು ರಾಜಕೀಯ ಕೈದಿಗಳಿಗೆ ಬಳಸುವ ವಿಧಾನವಾಗಿದೆ, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು, ಚಿದಂಬರಂ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ, ಚಿದಂಬರಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದು, ಅರ್ಜಿ ತಿರಸ್ಕಾರಗೊಂಡಿದೆ.












Click it and Unblock the Notifications