ನಿರ್ಭಯ ಪ್ರಕರಣ ; ಗಲ್ಲನ್ನು ಜೀವಾವಧಿಯಾಗಿ ಬದಲಾಯಿಸಲು ಅರ್ಜಿ
ನವದೆಹಲಿ, ಫೆಬ್ರವರಿ 12: ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯೊಬ್ಬ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಬದಲಾವಣೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.
26 ವರ್ಷದ ವಿನಯ್ ಕುಮಾರ್ ಶರ್ಮಾ ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಫೆಬ್ರವರಿ 1ರಂದು ತಿರಸ್ಕರಿಸಿದ್ದರು.
ನಿರ್ಭಯಾ ತೀರ್ಪು : ವಾದ-ಪ್ರತಿವಾದ ಹೇಗಿತ್ತು?
ವಿನಯ್ ಕುಮಾರ್ ಶರ್ಮಾ ಪರ ವಕೀಲರು ಇದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಜನವರಿ 31ರಂದು ಮುಂದಿನ ಆದೇಶದ ತನಕ ಅಪರಾಧಿಗಳನ್ನು ಗಲ್ಲಿಗೇರಿಸಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ.
ನಿರ್ಭಯ ಹಂತಕರಿಗೆ ಫೆ.11ರ ತನಕ ಗಲ್ಲು ಶಿಕ್ಷೆ ಇಲ್ಲ
ನಿರ್ಭಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಮುಕೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31) ಅಪರಾಧಿಗಳು ಎಲ್ಲರೂ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ನಿರ್ಭಯ ಪ್ರಕರಣ; ಮತ್ತೆ ಸುಪ್ರೀಂ ಮೆಟ್ಟಿಲೇರಿದ ಕೇಂದ್ರ ಸರ್ಕಾರ
ಸುಪ್ರೀಂಕೋರ್ಟ್ ಮುಂದೆ ಅರ್ಜಿ
ನಿರ್ಭಯ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಎರಡು ಬಾರಿ ಗಲ್ಲು ಶಿಕ್ಷೆ ಜಾರಿಗೆ ದಿನಾಂಕ ನಿಗದಿ ಮಾಡಿ ಅದನ್ನು ಮುಂದೂಡಲಾಗಿದೆ. ಜನವರಿ 31ರಂದು ನ್ಯಾಯಾಲಯ ಮುಂದಿನ ಆದೇಶದ ತನಕ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು ಎಂದು ಹೇಳಿದೆ. ಸುಪ್ರೀಂಕೋರ್ಟ್ ಮುಂದೆ ಪ್ರಕರಣದ ವಿವಿಧ ಅರ್ಜಿಗಳು ಬಾಕಿ ಇವೆ.
ಪವನ್ ಗುಪ್ತಾ ಅರ್ಜಿ ಸಲ್ಲಿಸಿಲ್ಲ
ನಿರ್ಭಯ ಪ್ರಕರಣದಲ್ಲಿ ಅಪರಾಧಿಯಾಗಿರುವ ಪವನ್ ಗುಪ್ತಾ ಇನ್ನು ರಾಷ್ಟ್ರಪತಿಗಳ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ. ದೆಹಲಿಯ ತಿಹಾರ್ ಜೈಲಿನಲ್ಲಿರುವ ಅಪರಾಧಿ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿ ಅದು ಇಥ್ಯರ್ಥವಾಗುವ ತನಕ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ.
ಪ್ರತ್ಯೇಕವಾಗಿ ಗಲ್ಲು ಶಿಕ್ಷೆ
ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬಾರದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಈ ಆದೇಶವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿವೆ. ಈ ಅರ್ಜಿಯ ವಿಚಾರಣೆ ಇನ್ನೂ ನ್ಯಾಯಾಲಯ ಮುಂದೆ ಬಾಕಿ ಇದೆ.
ಕ್ಷಮಾದಾನ ಅರ್ಜಿ ತಿರಸ್ಕಾರ
ನಿರ್ಭಯ ಪ್ರಕರಣದ ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್, ಮುಕೇಶ್ ಸಿಂಗ್ ಮತ್ತು ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ತಿರಸ್ಕರಿಸಿದ್ದಾರೆ. ಒಬ್ಬ ಅಪರಾಧಿ ಪವನ್ ಗುಪ್ತಾ ಇನ್ನೂ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿಲ್ಲ.