ನಿರ್ಭಯಾ; ನಾನು ಬಾಲಾಪರಾಧಿ ಎಂದವನಿಗೆ ಹೈಕೋರ್ಟ್ ಏನಂತು?
ನವದೆಹಲಿ, ಡಿಸೆಂಬರ್ 18; 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಪವನ ಗುಪ್ತಾ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
2012 ರ ಡಿಸೆಂಬರ್ನಲ್ಲಿ ನಿರ್ಭಯಾ ಅಪರಾಧದ ಸಮಯದಲ್ಲಿ ತಾನು ಬಾಲಾಪರಾಧಿ, ಹಾಗಾಗಿ ನನ್ನನ್ನು ಗಲ್ಲು ಶಿಕ್ಷೆಯಿಂದ ಹೊರಕ್ಕೆ ಇಡಬೇಕು ಎಂದು ಪವನ ಗುಪ್ತಾ ದೆಹಲಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದ. ಅಪರಾಧಿ ಪವನ್ ಕುಮಾರ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ವಿಚಾರಣೆ ಸಮಯದಲ್ಲಿ, ಪವನ ಗುಪ್ತಾ ತಾನು ಬಾಲಾಪರಾಧಿಯಾಗಿದ್ದೆ ಎಂಬುದನ್ನು ಸಾಬೀತುಪಡಿಸಲು ವಿಫಲನಾಗಿದ್ದಾನೆ. ಹಾಗಾಗಿ ಮನವಿಯನ್ನು ವಜಾ ಮಾಡುತ್ತೇವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಲು ರೆಡಿ ಆಗ್ತಿದೆ ನೇಣು ಕುಣಿಕೆ
ಡಿಸೆಂಬರ್ 16, 2012 ರಂದು ನಡುರಾತ್ರಿಯಲ್ಲಿ ದೆಹಲಿಯಲ್ಲಿ ಮುಖೇಶ್ ಸಿಂಗ್, ವಿನಯ ಶರ್ಮಾ, ಮಹಮ್ಮದ್ ಅಪ್ರೋಜ್, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಹಾಗೂ ಒಬ್ಬ ಬಾಲಾಪರಾಧಿ ನಿರ್ಭಯಾಳನ್ನು ಅಪಹರಿಸಿ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ನಿರ್ಭಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಇದರ ವಿರುದ್ಧ ದೇಶದ್ಯಾಂತ ಭಾರೀ ಪ್ರತಿಭಟನೆಗಳು ಜರುಗಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಿತ್ತು. ಒಬ್ಬ ಬಾಲಾಪರಾಧಿ ಬಿಡುಗಡೆಯಾಗಿದ್ದ. ಇನ್ನೊಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೂ ನಾಲ್ವರು ಸದ್ಯ ತಿಹಾರ್ ಜೈಲಿನಲ್ಲಿ ಕೊನೆ ದಿನಗಳನ್ನು ಎಣಿಸುತ್ತಿದ್ದಾರೆ.