ಉತ್ತರಪ್ರದೇಶ ಮುಖ್ಯಮಂತ್ರಿ ಆಯ್ಕೆ, ಮುಂದುವರಿದ ಕುತೂಹಲ
ಉತ್ತರಪ್ರದೇಶಕ್ಕೆ ಮುಖ್ಯಮಂತ್ರಿ ಆಯ್ಕೆ ಮಾಡುವ ವಿಚಾರದಲ್ಲಿ ಬಿಜೆಪಿ ಅಳೆದು ತೂಗುವ ಪ್ರಕ್ರಿಯೆಯಲ್ಲಿ ತೊಡಗಿದೆ. ಏಕೆಂದರೆ 2019ರ ಲೋಕಸಭೆ ಚುನಾವಣೆಗೂ ಈ ಆಯ್ಕೆ ಬಹಳ ಮುಖ್ಯವಾದ್ದರಿಂದ ತೀರಾ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಿದೆ
ನವದೆಹಲಿ, ಮಾರ್ಚ್ 16: ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಿರುವ ಬಿಜೆಪಿ ಹಲವು ಅಂಶಗಳನ್ನು ಪರಿಗಣಿಸಬೇಕಿದೆ. ಹಲವಾರು ಹೆಸರುಗಳು ಗಿರಕಿ ಹೊಡೆಯುತ್ತಿದ್ದು, ಪಕ್ಷದ ಎಲ್ಲ ಶಾಸಕರು ದೆಹಲಿಯಲ್ಲಿರುವ ಉತ್ತರ ಪ್ರದೇಶ್ ಭವನದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸದ್ಯಕ್ಕೆ ಉತ್ತರಪ್ರದೇಶದಲ್ಲಿ ಪ್ರಮಾಣ ವಚನ ಸ್ವೀಕಾರ ಮಾರ್ಚ್ 17ಕ್ಕೆ ಎಂದು ಈಗಾಗಲೇ ಬಿಜೆಪಿ ಘೋಷಿಸಿಯಾಗಿದೆ. ಆದರೆ ಅದಿನ್ನೂ ನಿಧಾನವಾಗುವ ಸಾಧ್ಯತೆ ಇದೆ. ಮಣಿಪುರ ಹಾಗೂ ಗೋವಾದಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ನಂತರವಷ್ಟೇ ಉತ್ತರಪ್ರದೇಶದ ಕಡೆಗೆ ನೋಡುತ್ತಾರೆ.[ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್?]
ಇದರರ್ಥ ಏನೆಂದರೆ ಮುಖ್ಯಮಂತ್ರಿ ನೇಮಕದ ವಿಚಾರ ಇನ್ನೂ ಒಂದು ವಾರ ಮುಂದಕ್ಕೆ ಹೋಗುತ್ತದೆ ಎಂದು ಮೂಲಗಳು ತಿಳಿಸಿವೆ. ಎಲ್ಲ ನಿರೀಕ್ಷೆಗಿಂತ ಅತ್ಯುತ್ತಮವಾದ ಆಯ್ಕೆ ಉತ್ತರಪ್ರದೇಶದಲ್ಲಿ ಆಗಬೇಕು ಎಂಬುದು ಅಮಿತ್ ಷಾ ಹಾಗೂ ಪ್ರಧಾನಿ ಮೋದಿಯ ಇರಾದೆ. ಏಕೆಂದರೆ 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದ ಗೆಲುವು ಪಡೆಯಬೇಕಿದೆ.[ಯುಪಿಯಲ್ಲಿ ಯಾರಿಗೆ ಒಲಿಯಲಿದೆ ಮುಖ್ಯಮಂತ್ರಿ ಪಟ್ಟ?]
ಬಿಜೆಪಿಯಲ್ಲಿ ಹಲವರಿ ರಾಜ್ ನಾಥ್ ಸಿಂಗ್ ಉ.ಪ್ರ. ಮುಖ್ಯಮಂತ್ರಿ ಆಗಬೇಕು ಎಂದಿದೆ. ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಅವರ ಹೆಸರು ಗಿರಕಿ ಹೊಡೆಯುವುದು ಮಾತ್ರ ನಿಂತಿಲ್ಲ. ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಒಬ್ಬರು ಮೇಲ್ಜಾತಿ ಹಾಗೂ ಇನ್ನೊಬ್ಬರು ಹಿಂದುಳಿದ ಜಾತಿಯವರು ಉಪಮುಖ್ಯಮಂತ್ರಿ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.