Video: "ಕೊರೊನಾವೈರಸ್ ಓಡಿಸಲು ಒಂದೇ ಒಂದು ಪೆಗ್ ಎಣ್ಣೆ ಸಾಕು"!
ನವದೆಹಲಿ, ಏಪ್ರಿಲ್ 19: "ಡಾಕ್ಟರ್ ನೀಡುವ ಲಸಿಕೆಯಿಂದ ಕೊರೊನಾವೈರಸ್ ಹೋಗೋದಿಲ್ಲ. ಕೊವಿಡ್-19 ಲಸಿಕೆಗೆ ಇಲ್ಲದ ಶಕ್ತಿ ಈ ಎಣ್ಣೆಗಿದೆ. ಪ್ರತಿದಿನ ಈ ಎಣ್ಣೆ ಕುಡಿಯದೇ ಬದುಕಿರಲು ಸಾಧ್ಯವೇ ಆಗೋದಿಲ್ಲ. ಈ ಎಣ್ಣೆ ಕುಡಿಯೋದ್ರಿಂದಾನೇ ನಂಗೆ ಕೊರೊನಾವೈರಸ್ ಸೋಂಕು ಬರುವುದಿಲ್ಲ" ಇದು ದೆಹಲಿ ಮದ್ಯದ ಅಂಗಡಿ ಎದುರಿನಲ್ಲಿ ಮದ್ಯ ಖರೀದಿಸುವುದಕ್ಕೆ ಸಾಲುಗಟ್ಟಿ ನಿಂತ ವೃದ್ಧೆ ಆಡಿದ ಮಾತು.
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆ ಮುಂದಿನ ಆರು ದಿನಗಳವರೆಗೂ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಲಾಕ್ಡೌನ್ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಲಾಕ್ಡೌನ್ ಘೋಷಣೆ ಹೊರ ಬೀಳುತ್ತಿದ್ದಂತೆ ನಗರದ ಮದ್ಯದ ಅಂಗಡಿಗಳ ಎದುರಿಗೆ ಜನಸಾಗರವೇ ನೆರೆಯಿತು. ಎಣ್ಣೆ ಅಂಗಡಿಗಳ ಮುಂದೆ ಜನರು ಸಾಲುಸಾಲಾಗಿ ಮದ್ಯ ಖರೀದಿಸುವುದಕ್ಕೆ ನಿಂತು ಬಿಟ್ಟಿದ್ದಾರೆ.
|
"ಮದ್ಯದಲ್ಲೇ ಕೊರೊನಾವೈರಸ್ ಸೋಂಕಿಗೂ ಮದ್ದು"
"ಕೊರೊನಾವೈರಸ್ ಸೋಂಕಿಗೆ ಲಸಿಕೆಯಿಂದ ಮದ್ದು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಸ್ವಾಮಿ. ನಮಗೆ ಈ ಎಣ್ಣೆಯನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ. ನಮಗೆ ಆರೋಗ್ಯ ಸಮಸ್ಯೆ ಬಂದರೆ ವೈದ್ಯರ ಬಳಿ ಹೋಗುವುದಿಲ್ಲ. ಬದಲಿಗೆ ಒಂದೆರೆಡು ಪೆಗ್ ಹಾಕಿಕೊಂಡರೆ ಮುಗೀತು. ಎಲ್ಲಾ ರೋಗವು ಹೋಗುತ್ತದೆ. ಅದಕ್ಕಾಗಿ ಈ ಎಣ್ಣೆಯನ್ನು ಖರೀದಿಸುವುದಕ್ಕೆ ಬಂದಿದ್ದೇನೆ" ಎಂದು ಶಿವಪುರಿ ಗೀತಾ ಕಾಲನಿ ನಿವಾಸಿಯೊಬ್ಬರು ಹೇಳಿದ್ದಾರೆ.

ದೆಹಲಿಯ ಎಣ್ಣೆ ಅಂಗಡಿಗಳ ಎದುರಿಗೆ ಜನವೋ ಜನ
ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಲಾಕ್ಡೌನ್ ಜಾರಿಗೊಳಿಸಿದ್ದೇ ತಡ ಜನರು ಎಣ್ಣೆ ಅಂಗಡಿಗಳ ಮುಂದೆ ಜಮಾಯಿಸೋಕು ಶುರು ಮಾಡಿದರು. ನವದೆಹಲಿಯಲ್ಲಿ ಕೊವಿಡ್-19 ಸೋಂಕಿನ ಭೀತಿ ನಡುವೆ ಜನರಿಗೆ ಎಣ್ಣೆ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ. ಖಾನ್ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಎಣ್ಣೆ ಖರೀದಿಸುವುದಕ್ಕೆ ಮುಗಿ ಬಿದ್ದ ದೃಶ್ಯವೇ ಸಾಕ್ಷಿಯಾಗಿ ಕಂಡು ಬಂತು.

ನವದೆಹಲಿಯಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಕುಸಿತ
ಪ್ರತಿನಿತ್ಯ ದಾಖಲೆ ಪ್ರಮಾಮದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಆದರೆ ಸಂಪೂರ್ಣ ಕುಸಿದಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ನಾನು ಯಾವಾಗಲೂ ಲಾಕ್ಡೌನ್ ವಿರೋಧಿಯಾಗಿದ್ದೇನೆ. ಲಾಕ್ಡೌನ್ ಜಾರಿಗೊಳಿಸುವುದರಿಂದ ರೋಗ ನಿಗ್ರಹಿಸುವುದಕ್ಕೆ ಆಗುವುದಿಲ್ಲ. ಆದರೆ ಸೋಂಕು ಹರಡುವಿಕೆ ಪ್ರಮಾಣವನ್ನು ನಿಯಂತ್ರಿಸುವುದಕ್ಕಾಗಿ ಈ ನಿರ್ಧಾರ ಅನಿವಾರ್ಯವಾಗಿದೆ. ಈಗ ಲಾಕ್ಡೌನ್ ಜಾರಿಗೊಳಿಸದಿದ್ದರೆ ಮುಂದೆ ದೊಡ್ಡ ಆಪತ್ತು ಎದುರಿಸಬೇಕಾಗುತ್ತದೆ ಎಂದು ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ನವದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 25462 ಮಂದಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದು, 24 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 853460ಕ್ಕೆ ಏರಿಕೆಯಾಗಿದ್ದು, ಈವರೆಗೂ ಮಹಾಮಾರಿಗೆ 12121 ಮಂದಿ ಪ್ರಾಣ ಬಿಟ್ಟಿದ್ದಾರೆ. ಉಳಿದಂತೆ ರಾಜ್ಯದಲ್ಲಿ 74941 ಕೊವಿಡ್-19 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ.












Click it and Unblock the Notifications