ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದಾಖಲಾಯ್ತು ಹೊಸ ಕೇಸ್
ಕರ್ನಾಟಕ ಇಂಧನ ಸಚಿನ ಡಿಕೆ ಶಿವಕುಮಾರ್ ವಿರುದ್ಧ ಹೊಸ ದೂರು ದಾಖಲು. ಬಿಡದಿಯ ಗುರುಪ್ರಸಾದ್ ಎಂಬುವರಿಂದ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲು.
ಬೆಂಗಳೂರು, ಆಗಸ್ಟ್ 3: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಯ ರೈಡ್ ಆಗಿರುವ ಈ ಹೊತ್ತಿನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ತನಿಖೆ ನಡೆಸುವ ಜಾರಿ ನಿರ್ದೇಶನಾಲಯಕ್ಕೆ ಡಿಕೆಶಿ ವಿರುದ್ಧ ಹೊಸದಾಗಿ ದೂರೊಂದು ದಾಖಲಾಗಿದೆ.
ಬಿಡದಿಯ ಗುರುಪ್ರಸಾದ್ ಎಂಬುವರು ಈ ದೂರನ್ನು ದಾಖಲಿಸಿದ್ದು, ಇದರಲ್ಲಿ ಡಿಕೆಶಿ ಅವರು, ತಾವು ಸಂಪಾದಿಸಿದ ಅಕ್ರಮ ಹಣವನ್ನು ವಿವಿಧ ಕಡೆಗಳಲ್ಲಿ ತೊಡಗಿಸಿರುವುದು ಹಾಗೂ

ದೂರಿನಲ್ಲಿ ಈ ಕೆಳಗಿನ ಆರೋಪಗಳನ್ನು ಮಾಡಲಾಗಿದೆ.
- ಅಪನಗದೀಕರಣದ ಕಾಲಘಟ್ಟದಲ್ಲಿ ರಾಜ್ಯದ ಹಲವಾರು ಜನಪ್ರತಿನಿಧಿಗಳ ಬಳಿಯಿದ್ದ ಕಪ್ಪು ಹಣವನ್ನು ಬಿಳಿಯಾಗಿಸಲು ಡಿಕೆಶಿ ಸಹಕಾರ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಸಚಿನ್ ನಾರಾಯಣ್ ಎಂಬುವರ ಕಡೆಯಿಂದ ಈ ಕೆಲಸ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 2 ಸಾವಿರ ಕೋಟಿ ರು.ಗಳಷ್ಟು ಅವ್ಯವಹಾರವಾಗಿದೆ ಎಂದು ಹೇಳಲಾಗಿದೆ.
- ವಿಧಾನಸಭೆಯಲ್ಲಿರುವ ಎಲ್ಲಾ ಜನಪ್ರತಿನಿಧಿಗಳೂ ತಲಾ 2 ಲಕ್ಷ ರು. ಕೊಟ್ಟು ಅದನ್ನು ಬಿಳಿಯಾಗಿಸಿಕೊಂಡಿದ್ದಾರೆಂಬ ಆರೋಪ ಈ ದೂರಿನಲ್ಲಿದೆ.
- ಕಪ್ಪು ಹಣವನ್ನು ಬಿಳಿಯಾಗಿಸುವ ವೇಳೆಯಲ್ಲಿ, ಖುದ್ದು ಡಿಕೆಶಿ ಅವರೇ ಬೆಂಗಳೂರಿನ ಆರ್ ಬಿಐ ಹಾಗೂ ಹುಬ್ಬಳ್ಳಿಯಲ್ಲಿರುವ ಆರ್ ಬಿಐ ಕಚೇರಿಗಳಿಗೆ ಮಾರು ವೇಷದಲ್ಲಿ ಹೋಗಿ ತಮ್ಮ ಕೆಲಸದ ಪ್ರಗತಿಯನ್ನು ಪರಿಶೀಲಿಸಿಕೊಂಡು ಬಂದಿರುವುದು ಆಯಾ ಕಚೇರಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.
- ಅಕ್ರಮವಾಗಿ ಸಂಪಾದಿಸಿದ ಕೋಟಿಗಟ್ಟಲೆ ಹಣವನ್ನು ಡಿಕೆ ಶಿವಕುಮಾರ್ ಅವರ ಆಪ್ತ ಹಾಗೂ ಜ್ಯೋತಿಷಿಯೆಂದು ಹೇಳಿಕೊಳ್ಳುವ ದ್ವಾರಕನಾಥ್ ಅವರು ಹವಾಲಾ ಮಾರ್ಗಗಳಿಂದ ದುಬೈ ಹಾಗೂ ಇತರ ಯೂರೋಪ್ ರಾಷ್ಟ್ರಗಳಲ್ಲಿನ ಹಲವಾರು ಬ್ಯಾಂಕ್ ಗಳ ಖಾತೆಗೆ ರವಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
- ಅಲ್ಲದೆ, ಇದೇ ದ್ವಾರಕಾನಾಥ್ ಅವರು, ನ್ಯಾಯಾಲಯಗಳಲ್ಲಿ ಡಿಕೆಶಿ ಆಪ್ತರು ಹಾಗೂ ರಿಯಲ್ ಎಸ್ಟೇಟ್ ಉದ್ಯೋಗಸ್ಥರ ವಿರುದ್ಧದ ಕೇಸ್ ಗಳನ್ನು ಹಾಗೂ ಖುದ್ದು ಡಿಕೆಶಿ ಅವರ ಕೇಸ್ ಗಳು ಯಾರ ರೀತಿಯಲ್ಲಿ ವಿಚಾರಣೆಗೆ ತೆಗೆದುಕೊಳ್ಳಬೇಕು, ಯಾವ ರೀತಿ ನ್ಯಾಯಪೀಠದಿಂದ ತಿರಸ್ಕೃತಗೊಳ್ಳಬೇಕು ಎಂಬುದನ್ನು ನೋಡಿಕೊಳ್ಳುತ್ತಿದ್ದರು. ಇದಲ್ಲದೆ, ಹಲವಾರು ಡೀಲ್ ಗಳನ್ನು ಡಿಕೆಶಿ ಅವರ ಅನುಪಸ್ಥಿತಿಯಲ್ಲಿ ನಿರ್ವಹಿಸಿದ್ದಾರೆ ಎಂದೂ ಹೇಳಲಾಗಿದೆ.
- ಇಂಧನ ಇಲಾಖೆಯ ಸಾವಿರಾರು ಕೋಟಿ ರು. ಮೌಲ್ಯದ ಹಲವಾರು ಗುತ್ತಿಗೆಗಳನ್ನು ಏಷ್ಯನ್ ಫ್ಯಾಬ್ ಟೆಕ್ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆಯ ಮಾಲೀಕ ಪುಟ್ಟಸ್ವಾಮಿ ಗೌಡ ಎಂಬುವರಾಗಿದ್ದು, ಅವರು ಡಿಕೆಶಿ ಅವರಿಗೆ ತೀರಾ ಆಪ್ತರೆಂದು ಹೇಳಲಾಗಿದೆ. ಕಳೆದ ಜನವರಿಯಲ್ಲಿ ಇದೇ ಪುಟ್ಟಸ್ವಾಮಿ ಗೌಡರ ಮನೆ ಮೇಲೆ ಐಟಿ ದಾಳಿಯಾದಾಗ, ಅಲ್ಲಿ ಅವರ ಹಾಗೂ ಡಿಕೆಶಿ ನಡುವಿನ ವ್ಯವಹಾರಗಳಿಗೆ ಹಲವಾರು ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
- ಇನ್ನು, ಪಾವಗಡದ ಮೆಗಾ ಸೋಲಾರ್ ಪವರ್ ಪ್ಲಾಂಟ್ ಹಗರಣದಲ್ಲಿ ಸುಮಾರು 6 ಸಾವಿರ ಕೋಟಿ ರು. ಅವ್ಯವಹಾರವಾಗಿದೆ. ರೈತರಿಂದ ಬಲವಂತವಾಗಿ ಭೂಮಿಯನ್ನು ಪಡೆದು ಅದನ್ನು ಶಿವಕುಮಾರ್ ಅವರ ಆಪ್ತರ ಹೆಸರಿನಲ್ಲಿ ಬೇನಾಮಿ ಆಸ್ತಿಯನ್ನಾಗಿ ಬದಲಾಯಿಸಲಾಗಿದೆ. ಆನಂತರ, ಇದೇ ಭೂಮಿಯನ್ನು ಸೋಲಾರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ (ಎಸ್ಇಸಿಐ) ಗುತ್ತಿಗೆ ನೀಡಿ, ಇದರಿಂದ ದೊಡ್ಡ ಮೊತ್ತವನ್ನು ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
- ಡಿಕೆಶಿಯವರ ಈ ಎಲ್ಲಾ ಅಕ್ರಮಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ನೆರವಾಗಿರುವ ಸಚಿನ್ ನಾರಾಯಣ್ (ಉದ್ಯಮಿ), ದ್ವಾರಕಾನಾಥ್ (ಜ್ಯೋತಿಷಿ), ಪುಟ್ಟಸ್ವಾಮಿ ಗೌಡ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್), ಜಿವಿ ಬಲರಾಂ (ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ), ಶ್ರೀಧರ್ (ಇಂಧನ ಸಚಿವರ ಆಪ್ತ ಕಾರ್ಯದರ್ಶಿ) ಅವರನ್ನು ಸಹ ಆರೋಪಿಗಳಾಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications