ವಿದೇಶಕ್ಕೆ ತೆರಳದಂತೆ ಎನ್ಡಿಟಿವಿ ಸಂಸ್ಥಾಪಕರಿಗೆ ನಿರ್ಬಂಧ
ನವದೆಹಲಿ, ಆಗಸ್ಟ್ 10: ವಿದೇಶಕ್ಕೆ ಹೊರಟಿದ್ದ ಎನ್ಡಿಟಿವಿ ಸಹ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರನ್ನು ವಿದೇಶಕ್ಕೆ ತೆರಳದಂತೆ ಶುಕ್ರವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ.
ಸಿಬಿಐ ಮಾಡಿದ ಮನವಿಯ ಮೇರೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ರಾಯ್ ದಂಪತಿಗೆ ವಿದೇಶಕ್ಕೆ ತೆರಳಲು ನಿರ್ಬಂಧ ವಿಧಿಸಿದ್ದಾರೆ ಎನ್ನಲಾಗಿದೆ.
ಸಾಲ ಮರುಪಾವತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಬಿಐ, ಪ್ರಣಯ್ ಮತ್ತು ರಾಧಿಕಾ ಅವರ ವಿರುದ್ಧ ತನಿಖೆ ನಡೆಸುತ್ತಿದೆ.

ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಎನ್ಡಿಟಿವಿ, ಇದು ಮಾಧ್ಯಮ ಸ್ವಾತಂತ್ರ್ಯದ ಸಂಪೂರ್ಣ ಹರಣ ಎಂದು ಆರೋಪಿಸಿದೆ. ಎನ್ಡಿಟಿವಿ ಸಂಸ್ಥಾಪಕರನ್ನು ವಿದೇಶಕ್ಕೆ ತೆರಳದಂತೆ ನಿರ್ಬಂಧಿಸಲಾಗಿದೆ. ಇದು ಮೂಲಭೂತ ಹಕ್ಕುಗಳ ಮೇಲಿನ ಪ್ರಹಾರ ಎಂದು ಅದು ಸರಣಿ ಟ್ವೀಟ್ಗಳಲ್ಲಿ ಆರೋಪಿಸಿದೆ.
ರಾಯ್ ದಂಪತಿ ವಿರುದ್ಧ ಸಿಬಿಐ ಲುಕ್ ಔಟ್ ನೋಟಿಸ್ ಹೊರಡಿಸಿತ್ತು. ಐಸಿಐಸಿಐ ಬ್ಯಾಂಕ್ 48 ಕೋಟಿ ರೂಪಾಯಿ ನಷ್ಟ ಉಂಟಾಗುವಂತೆ ಮಾಡಿದ ಆರೋಪದಲ್ಲಿ 2017ರಲ್ಲಿ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಇಬ್ಬರೂ ಕೀನ್ಯಾದ ನೈರೋಬಿಗೆ ಹೊರಟಿದ್ದರು. ಅವರ ಜತೆ ಇನ್ನೂ ಕೆಲವು ಮಂದಿ ತೆರಳುತ್ತಿದ್ದರು.
ಇಬ್ಬರೂ ಆಗಸ್ಟ್ 15ರಂದು ಭಾರತಕ್ಕೆ ಮರಳಲಿದ್ದರು. ಅದಕ್ಕಾಗಿ ಟಿಕೆಟ್ ಕೂಡ ಬುಕ್ ಮಾಡಿಕೊಂಡಿದ್ದರು. ಸುಳ್ಳು ಮತ್ತು ಆಧಾರ ರಹಿತ ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಅದಕ್ಕೆ ಇಬ್ಬರೂ ಸಹಕರಿಸುತ್ತಿದ್ದಾರೆ. ಇಂದಿನ ಕೃತ್ಯ, ಮಾಧ್ಯಮ ಮಾಲೀಕರ ಮೇಲಿನ ದಾಳಿಗಳು ಹೇಳಿದಂತೆ ಕೇಳಬೇಕು, ಇಲ್ಲದಿದ್ದರೆ ಅನುಭವಿಸಬೇಕು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದಂತಿದೆ ಎಂದು ಎನ್ಡಿಟಿವಿ ಆರೋಪಿಸಿದೆ.












Click it and Unblock the Notifications