ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ನರೇಂದ್ರ ಮೋದಿ ಸರಣಿ ಟ್ವೀಟ್
ನವದೆಹಲಿ, ಡಿಸೆಂಬರ್ 16: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗಳು ಹೆಚ್ಚಾದ ಬೆನ್ನಲ್ಲೇ ನರೇಂದ್ರ ಮೋದಿ ಅವರು ಇಂದು ಪೌರತ್ವ ಕಾಯ್ದೆ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನೆಗಳು ಹಿಂಸಾರೂಪ ತಳೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೋದಿ, ಚರ್ಚೆ, ಭಿನ್ನಾಬಿಪ್ರಾಯ ಪ್ರಜಾಪ್ರಭುತ್ವದ ಪ್ರಮುಖ ಅಂಗ. ಆದರೆ ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿ ಹಾಳು ಮಾಡುವುದು, ದೈನಿಕ ಜೀವನವನ್ನು ಹಾಳು ಮಾಡುವಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪೌರತ್ವ ಮಸೂದೆಯು ಎರಡೂ ಸದನಗಳಲ್ಲಿ ಬಹುಮತದೊಂದಿಗೆ ಒಪ್ಪಿತವಾಗಿ ಕಾನೂನಾಗಿ ಜಾರಿ ಆಗಿದೆ. ಈ ಕಾಯ್ದೆಯು ಭಾರತದ ಪುರಾತನ ಆದರ್ಶವಾದ ಒಪ್ಪಿಕೊಳ್ಳುವಿಕೆ, ನೆರವು ನೀಡುವಿಕೆ, ಸ್ವಾಗತಿಸುವಿಕೆ, ಆದರಗಳನ್ನು ಎತ್ತಿ ಹಿಡಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಪೌರತ್ವ ಕಾಯ್ದೆ ಬಗ್ಗೆ ಯಾವ ಭಾರತೀಯನೂ ಚಿಂತೆ ಮಾಡಬೇಕಿಲ್ಲ. ಭಾರತದ ಯಾವ ಧರ್ಮದವರ ನಾಗರೀಕತೆಯೂ ನಷ್ಟವಾಗುವುದಿಲ್ಲ, ಈ ಕಾಯ್ದೆಯು ವಿದೇಶೀಯರಿಗೆ ಮಾತ್ರವೇ ಅನ್ವಯವಾಗುತ್ತದೆ. ಯಾರು ಹಲವು ವರ್ಷಗಳಿಂದ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಹೋಗುವುದು ಬಿಟ್ಟು ಬೇರೆ ಮಾರ್ಗವೇ ಇಲ್ಲ ಎಂದುಕೊಂಡಿದ್ದರು ಅವರಿಗಾಗಿ ಈ ಕಾಯ್ದೆ ಮಾಡಲಾಗಿದೆ ಎಂದಿದ್ದಾರೆ ಮೋದಿ.
ಬಡವರ ಏಳಿಗಾಗಿ ದುಡಿಯುವುದು, ಭಾರತದ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಈ ಹೊತ್ತಿನ ಅಗತ್ಯವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ನಮ್ಮನ್ನು ಇಬ್ಭಾಗ ಮಾಡಲು ನಾವು ಬಿಡಬಾರದು ಎಂದು ಪ್ರತಿಭಟನೆಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿರಬೇಕು, ಭ್ರಾತೃತ್ವವನ್ನು ಎತ್ತಿ ತೋರಬೇಕು, ಶಾಂತಿಯನ್ನು ಕಾಪಾಡುವುದು ಈ ಸಮಯದ ಆದ್ಯತೆ ಆಗಬೇಕು. ಎಲ್ಲರೂ ಸುಳ್ಳು ಸುದ್ದಿ, ದಾರಿ ತಪ್ಪಿಸುವ ಮಾತುಗಳಿಂದ ದೂರವಿರಿ ಎಂಬುದು ನಾನು ನೀಡುವ ಕರೆ ಎಂದು ಅವರು ಹೇಳಿದ್ದಾರೆ.












Click it and Unblock the Notifications