ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ; ಮುನಾವರ್ ಫಾರುಕಿಗೆ ಮಧ್ಯಂತರ ಜಾಮೀನು
ನವದೆಹಲಿ, ಫೆಬ್ರುವರಿ 05: ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಣಾರ್ಹ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಜೈಲು ಸೇರಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಕಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಈ ಮಧ್ಯಂತರ ಜಾಮೀನು ತಾತ್ಕಾಲಿಕ ಜಾಮೀನಾಗಿದ್ದು, ಆರೋಪಿಯು ಈ ಅವಧಿಯಲ್ಲಿ ನಿರೀಕ್ಷಿತ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ.
ಮಧ್ಯ ಪ್ರದೇಶದ ಮೊನ್ರೋ ಕೆಫೆಯಲ್ಲಿ ಜನವರಿ 1ರಂದು ಮುನಾವರ್ ಹಾಸ್ಯ ಕಾರ್ಯಕ್ರಮ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಹಾಸ್ಯದ ನೆಪದಲ್ಲಿ ಫಾರುಖ್ ಹಿಂದೂ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳನ್ನು ಅವಮಾನಿಸಿದ್ದಾರೆ. ಗೃಹ ಸಚಿವ ಅಮಿತ್ ಶಾಗೂ ಅವಮಾನ ಮಾಡಿದ್ದಾರೆ ಎಂದು ಇಂದೋರ್ ನ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಮಗ ಏಕಲವ್ಯ ಗೌರ್ ದೂರು ದಾಖಲಿಸಿದ್ದರು. ಆನಂತರ ಇಂದೋರ್ ಪೊಲೀಸರು ಹಾಸ್ಯ ಕಲಾವಿದ ಫಾರುಕಿ ಹಾಗೂ ಎಡ್ವಿನ್ ಆಂಥೊನಿ, ಪ್ರಖರ್ ವ್ಯಾಸ್, ಪ್ರಿಯಂ ವ್ಯಾಸ್, ನಳಿನ್ ಯಾದವ್ ಅವರನ್ನು ಜನವರಿ 2ರಂದು ಬಂಧಿಸಿದ್ದರು.

ಎರಡು ಬಾರಿ ಫಾರುಕಿ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಜನವರಿ 28ರಂದು ಈ ಬಗ್ಗೆ ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಇಂದೋರ್ ನ್ಯಾಯಪೀಠ, ದೇಶದಲ್ಲಿ ಸಾಮರಸ್ಯ ಹಾಗೂ ಸಹೋದರತ್ವವನ್ನು ಉತ್ತೇಜಿಸುವುದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಕರ್ತವ್ಯ ಎಂದು ಹೇಳಿ ಫಾರುಕಿಗೆ ಮೂರನೇ ಬಾರಿಯೂ ಜಾಮೀನು ನಿರಾಕರಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ಮುನಾವರ್ ಫಾರುಕಿಗೆ ಮಧ್ಯಂತರ ಜಾಮೀನು ನೀಡಿದೆ.












Click it and Unblock the Notifications