ಮೋದಿ ಸರ್ಕಾರದ್ದು ಜನರ ಜೇಬು ಬರಿದು ಮಾಡುವ ಮಹತ್ತರ ಕೆಲಸ; ರಾಹುಲ್ ಟೀಕೆ
ನವದೆಹಲಿ, ಫೆಬ್ರವರಿ 22: ದೇಶದಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಕೇಂದ್ರ ಸರ್ಕಾರ, ತಮ್ಮ ಸ್ನೇಹಿತರ ಜೇಬು ತುಂಬಿಸಲು ಸಾಮಾನ್ಯ ಜನರ ಜೇಬು ಬರಿದು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ಸುಂಕ ವಿಧಿಸಿ ಜನರಿಂದ ಲೂಟಿ ಮಾಡುತ್ತಿದೆ. ಅಧಿಕ ಬೆಲೆಯನ್ನು ಹಿಂತೆಗೆದುಕೊಂಡು ಜನರಿಗೆ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
"ಕಚ್ಚಾ ತೈಲ ಬೆಲೆ ಏರಿಕೆ ತಗ್ಗಿದೆ. ಹೀಗಿದ್ದೂ ಇಂಧನ ಬೆಲೆಯನ್ನು ಹೆಚ್ಚು ಮಾಡಲಾಗಿದೆ. ಪೆಟ್ರೋಲ್ ಬೆಲೆ ಈಗ 100ರೂಗೆ ಬಂದು ಮುಟ್ಟಿದೆ. ನಿಮ್ಮ ಜೇಬನ್ನು ಖಾಲಿ ಮಾಡುವ ಮಹತ್ವದ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಇಂಧನ ಬೆಲೆ ಏರಿಕೆ ಖಂಡಿಸಿ "FuelLootByBJP" ಎಂದು ಹ್ಯಾಷ್ ಟ್ಯಾಗ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾನುವಾರವಷ್ಟೇ ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ, ಪ್ರತಿದಿನವೂ ಹೆಚ್ಚುತ್ತಿರುವ ತೈಲ ಬೆಲೆ ಜನಸಾಮಾನ್ಯರಿಗೆ ಮಾರಕವಾಗಿದೆ. ಅಬಕಾರಿ ಸುಂಕದಲ್ಲಿ ಕಡಿತ ಮಾಡುವ ಮೂಲಕ ರಾಜಧರ್ಮ ಪಾಲಿಸಿ ಎಂದು ಸಲಹೆ ನೀಡಿದ್ದರು. 'ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ತೈಲ ಬೆಲೆಯಲ್ಲಿ ಯಾಕೆ ಇಷ್ಟು ಏರಿಕೆಯಾಗುತ್ತಿದೆ ಎನ್ನುವುದು ದಿಗ್ಭ್ರಮೆಗೊಳಿಸಿದೆ ಎಂದು ಪ್ರಶ್ನಿಸಿದ್ದರು.












Click it and Unblock the Notifications