ಮೋದಿ ಹತ್ಯೆಗೆ ಸಂಚು, ವದಂತಿ ಹಿಂದೆ ಜನಪ್ರಿಯತೆಯ ತಂತ್ರ: ಕಾಂಗ್ರೆಸ್
ನವದೆಹಲಿ, ಜೂನ್ 08: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, 'ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದು ತಿಳಿದಾಗ ನರೇಂದ್ರ ಮೋದಿ ಅನುಸರಿಸುವ ಹಳೆ ತಂತ್ರ ಇದು' ಎಂದಿದ್ದಾರೆ.
"ಪ್ರಧಾನಿ ಮೋದಿ ಹತ್ಯೆಯ ಸಂಚಿನ ಸುದ್ದಿ ಸುಳ್ಳು ಎಂದು ನಾನು ಹೇಳಲಾರೆ. ಆದರೆ ಒಂದಂತೂ ಸತ್ಯ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜನಪ್ರಿಯತೆ ಕಡಿಮೆಯಾಗುತ್ತಿದೆ ಎನ್ನಿಸಿದಾಗ ಇಂಥ ಸುದ್ದಿಗಳನ್ನು ಹಬ್ಬಿಸುವ ತಂತ್ರ ಮಾಡುತ್ತಲೇ ಬಂದಿದ್ದಾರೆ. ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಇದನ್ನೇ ಮಾಡಿದ್ದಾರೆ. ಆದ್ದರಿಂದ ಈ ವದಂತಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ತನಿಖೆಯಿಂದ ತಿಳಿಯಬೇಕಿದೆ" ಎಂದು ಅವರು ಹೇಳಿದ್ದಾರೆ.
ರಾಜೀವ್ ಹತ್ಯೆ ಮಾದರಿಯಲ್ಲಿ ಪ್ರಧಾನಿ ಮೋದಿ ಹತ್ಯೆಗೆ ಮಾವೊವಾದಿಗಳ ಸಂಚು?
ಪ್ರಧಾನಿ ನರೇಂದ್ರ ಮೊದಿಯವರನ್ನು ರೋಡ್ ಶೋವೊಂದರಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿಯೇ ಕೊಲ್ಲಲು ಯತ್ನಿಸಲಾಗಿತ್ತು ಎಂಬ ಮಾಹಿತಿಯನ್ನೊಳಗೊಂಡ ಪತ್ರವೊಂದನ್ನು ಪುಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾವೋವಾದಿಗಳು ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ವಿಷಯ ದೇಶದಲ್ಲಿ ತಲ್ಲಣ ಮೂಡಿಸಿರುವಾಗ ಕಾಂಗ್ರೆಸ್ ಇಂಥ ನಾಯಕರು ಈ ರೀತಿ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸುವ ಲಕ್ಷಣವಿದೆ.