'ಅಂತರವನ್ನು ಮನದಟ್ಟು ಮಾಡಿಕೊಳ್ಳಿ': ಲಸಿಕೆ ದರದ ಬಗ್ಗೆ ರಾಹುಲ್ ಟ್ವೀಟ್
ನವದೆಹಲಿ, ಜು. 03: ಕೊರೊನಾ ಸೋಂಕಿಗೆ ನೀಡಲಾಗುವ ಲಸಿಕೆ ದರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗದ ಲಸಿಕೆ ದರದ ಗ್ರಾಫಿಕ್ ಅನ್ನು ಹಂಚಿಕೊಂಡ ಗಾಂಧಿ, ಸಾಂಕ್ರಾಮಿಕ ರೋಗದ ಮೂರನೇ ಅಲೆ ತಪ್ಪಿಸಲು ಭಾರತದ ನಿಜವಾದ ಕೋವಿಡ್ -19 ಲಸಿಕೆ ಗುರಿ ದರಕ್ಕಿಂತ ಪ್ರಸ್ತುತ ಶೇ. 27 ರಷ್ಟು ಕಡಿಮೆ ದರವಿದೆ ಎಂಬುದನ್ನು ಒತ್ತಿಹೇಳಿದ್ದಾರೆ.
ದೆಹಲಿ ಮೂಲದ ಸುದ್ದಿ ಸಂಸ್ಥೆ ಪ್ರಕಟಿಸಿದ ಮಾಹಿತಿಯ ಗ್ರಾಫಿಕ್ ಅನ್ನು ರಾಹುಲ್ ಗಾಂಧಿ ಟ್ವೀಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರತದಲ್ಲಿ ನಿಜವಾದ ಲಸಿಕೆ ದರ (ದಿನಕ್ಕೆ 50.8 ಲಕ್ಷ ಲಸಿಕೆ ಪ್ರಮಾಣ) ಹಾಗೂ ಮೂರನೇ ಅಲೆಯನ್ನು ತಪ್ಪಿಸಲು ಕೇಂದ್ರ ಸರ್ಕಾರವು ಉದ್ದೇಶಿಸಿರುವ ಲಸಿಕೆ ದರವನ್ನು (ದಿನಕ್ಕೆ 69.5 ಲಕ್ಷ ಪ್ರಮಾಣಗಳು) ಹೋಲಿಕೆ ಮಾಡಿದೆ.
ನಿಜವಾದ ಲಸಿಕೆ ದರ ಹಾಗೂ ಸರ್ಕಾರ ಉದ್ದೇಶಿಸಿದ್ದ ಲಸಿಕೆ ದರದ ನಡುವೆ ಶೇ.27 ರಷ್ಟು ಇದ್ದು ಇದನ್ನು ಗ್ರಾಫ್ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಗ್ರಾಫ್ನೊಂದಿಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಅಂತರವನ್ನು ಮನದಟ್ಟು ಮಾಡಿಕೊಳ್ಳಿ!" ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭವಾದ ಸಂದರ್ಭದಿಂದಲೂ ಕೇಂದ್ರ ಸರ್ಕಾರದ ಲಸಿಕೆ ನೀತಿಯ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಲ್ಲಿದ್ದಾರೆ. ದೇಶದಲ್ಲಿ ಲಸಿಕೆ ಪ್ರಮಾಣಗಳ ಕೊರತೆಯನ್ನು ಕೊನೆಗೊಳಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ರಾಹುಲ್ ತಂದಿದ್ದಾರೆ.
Mind the gap!#WhereAreVaccines pic.twitter.com/0VNhT6K8fn
— Rahul Gandhi (@RahulGandhi) July 3, 2021
ಕೇಂದ್ರ ಆರೋಗ್ಯ ಸಚಿವರು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿ ಕೊರೊನಾ ಲಸಿಕೆಗಳ ರವಾನೆ ಬಗ್ಗೆ ಮಾಹಿತಿ ನೀಡಿದ್ದರೂ ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ''ಜುಲೈ ತಿಂಗಳು ಬಂದಿದೆ, ಆದರೆ ಲಸಿಕೆ ಬಂದಿಲ್ಲ,'' ಎಂದು ಹೇಳಿದ್ದರು.
ಈ ವಿಚಾರದಲ್ಲಿ ರಾಹುಲ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ''ನಿನ್ನೆ, ನಾನು ಜುಲೈ ತಿಂಗಳ ಲಸಿಕೆ ಲಭ್ಯತೆಯ ಬಗ್ಗೆ ಸತ್ಯಾಂಶವನ್ನು ತಿಳಿಸಿದ್ದೇನೆ. ಹಾಗಿರುವಾಗ ರಾಹುಲ್ ಗಾಂಧಿ ಜಿ ಅವರ ಸಮಸ್ಯೆ ಏನು? ಅವರು ಓದುವುದಿಲ್ಲವೇ? ಅವರಿಗೆ ಅರ್ಥವಾಗುತ್ತಿಲ್ಲವೇ?,'' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ ''ದುರಹಂಕಾರ ಮತ್ತು ಅಜ್ಞಾನದ ವೈರಸ್ಗೆ ಲಸಿಕೆ ಇಲ್ಲ, ಕಾಂಗ್ರೆಸ್ ತನ್ನ ನಾಯಕತ್ವದ ಕೂಲಂಕುಷ ಪರೀಕ್ಷೆಯ ಬಗ್ಗೆ ಯೋಚಿಸಬೇಕು,'' ಎಂದು ಲೇವಡಿ ಮಾಡಿದ್ದರು.
ಆದರೆ ಈ ನಡುವೆ ದೇದೇಶದ ವಿವಿಧ ಭಾಗಗಳಲ್ಲಿ ತೀವ್ರವಾದ ಕೋವಿಡ್ ಲಸಿಕೆ ಕೊರತೆ ವರದಿಯಾಗಿದೆ. ಕೋವಿಶೀಲ್ಡ್ ಪ್ರಮಾಣಗಳ ಕೊರತೆಯಿಂದಾಗಿ ಒಡಿಶಾ ಸರ್ಕಾರ 16 ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಿದೆ. ಕಳೆದ 10 ದಿನಗಳಲ್ಲಿ ಕೇವಲ 16.63 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಅಸ್ಸಾಂ ಹೇಳಿದೆ. ಕೋವಿಡ್ -19 ಲಸಿಕೆಗಳ ಭಾರಿ ಕೊರತೆಯಿಂದಾಗಿ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಿಗದಿಪಡಿಸಿದ ಗುರಿಗಿಂತ ಸುಮಾರು ಶೇ.45 ಕಡಿಮೆ ಲಸಿಕೆ ದರವಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications