ದೆಹಲಿ ಸಾಮೂಹಿಕ ಆತ್ಮಹತ್ಯೆ: ಮನೋರೋಗವೇ ಕಾರಣವೇ?
ನವದೆಹಲಿ, ಜುಲೈ 04: ದೆಹಲಿಯ ಬುರಾರಿ ಸಾಮೂಹಿಕ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನೇ ದಿನೇ ಹೊಸ ಹೊಸ ಶಂಕೆಗಳು ಹುಟ್ಟುತ್ತಿವೆ. ಈ ಕುಟುಂಬದ ಸದಸ್ಯರು 'shared psychosis' ಎಂಬ ಮನೋರೋಗದಿಂದ ಬಳಲುತ್ತಿದ್ದರು ಎಂದು ಇದೀಗ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Shared psychosis ಎಂದರೆ, ವ್ಯಕ್ತಿಯೊಬ್ಬ ತನ್ನ ಭ್ರಮೆಗಳನ್ನು, ತನ್ನ ನಂಬಿಕೆಗಳನ್ನು ಇತರರಿಗೆ ವರ್ಗಾಯಿಸುವುದು. ಈ ಪ್ರಕರಣದಲ್ಲಿ ಮನೆಯ ಯಜಮಾನ ಮತ್ತು ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ರೂವಾರಿ ಎನ್ನಲಾಗುತ್ತಿರುವ ಲಲಿತ್ ಭಾಟಿಯಾ ತಮ್ಮ ನಂಬಿಕೆಗಳನ್ನು ಕುಟುಂಬದ ಇತರ ಸದಸ್ಯರಿಗೆ ವರ್ಗಾಯಿಸಿದ್ದಾರೆ.
ಲಲಿತ್ ಭಾಟಿಯಾ ತಂದೆ ನಿಧನರಾಗಿ ಹತ್ತು ವರ್ಷಗಳಾಗಿದ್ದರೂ, ಲಲಿತ್ ಭಾಟಿಯಾ ಇಂದಿಗೂ ತಮ್ಮ ತಂದೆಯೊಂದಿಗೆ ಸಂವಹನ ನಡೆಸುತ್ತೇನೆ ಎಂದು ಕುಟುಂಬದ ಸದಸ್ಯರೊಂದಿಗೆ ಹೇಳುತ್ತಿದ್ದರು. ಮತ್ತು ಆಗಾಗ, ತಂದೆ ಈ ರೀತಿ ಸೂಚಿಸಿದ್ದಾರೆ ಎಂದು ಕೆಲವು ಆಚರಣೆಗಳನ್ನು ಪಾಲಿಸುತ್ತಿದ್ದರು. ನಿಧಾನವಾಗಿ ಅವರು ತಮ್ಮ ಭ್ರಮೆಗಳನ್ನು ಕುಟುಂಬದ ಇತರ ಸದಸ್ಯರಿಗೆ ವರ್ಗಾಯಿಸುತ್ತಿದ್ದರು. ಸಾಮೂಹಿಕ ಆತ್ಮಹತ್ಯೆಗೆ ಇದೇ ಮುಖ್ಯ ಕಾರಣವಿದ್ದಿರಬಹುದು ಎಂದು ಪೊಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುಟುಂಬದ ಬಗ್ಗೆ ಅಕ್ಕ ಪಕ್ಕದ ಮನೆಯವರಿಗೆಲ್ಲರಿಗೂ ಉತ್ತಮ ಭಾವನೆ ಇತ್ತು. ಈ ಕುಟುಂಬದ ಎಲ್ಲರೂ ನೆರೆಹೊರೆಯವರ ನೆರವಿಗೆ ಬರುತ್ತಿದ್ದರು. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ತಮ್ಮ ಖಾಸಗಿ ವಿಷಯವನ್ನು, ಕುಟುಂಬದ ವಿಷಯವನ್ನು ಮಾತ್ರ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ ಎಂದು ನೆರೆ ಹೊರೆಯವರು ಪೊಲಿಸರಿಗೆ ತಿಳಿಸಿದ್ದಾರೆ.
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.
ಈ ಪ್ರಕರಣ ದೇಶದಾದ್ಯಂತ ಆತಂಕ ಮತ್ತು ಕುತೂಹಲ ಕೆರಳಿಸಿರುವುದಕ್ಕೆ ಕಾರಣ ಈ ಮನೆಯಲ್ಲಿ ಸಿಕ್ಕ ಡೈರಿಯೊಂದರಲ್ಲಿ ಸಿಕ್ಕ ವಿಚಿತ್ರ ಸಂಕೇತಗಳು. ಇದೊಂದು ಪೂರ್ವನಿರ್ಧರಿತ ಪ್ರಕರಣ ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ. ಆದರೆ ಈ ರೀತಿಯ ಸಾಮೂಹಿಕ ಆತ್ಮಹತ್ಯೆ ಕಾರಣವೇನು ಎಂಬುದೇ ಈಗ ಬಗೆಹರಿಯದ ವಿಷಯವಾಗಿ ಉಳಿದಿದೆ.












Click it and Unblock the Notifications