ಕಾಂಗ್ರೆಸ್ ಆಫರ್ಗೆ ಒಲವು ತೋರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ನವದೆಹಲಿ, ಮಾರ್ಚ್ 11: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಂಜಾಬ್ನ ಅಮೃತಸರದಿಂದ ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ.
ಆದರೆ ಈ ಬಗ್ಗೆ ಖುದ್ದು ಮನಮೋಹನ್ ಸಿಂಗ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಇರುವುದು ಕಾಂಗ್ರೆಸ್ಗೆ ನಿರಾಸೆ ಮೂಡಿಸಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಸಿಖ್ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಮನಮೋಹನ್ ಸಿಂಗ್ ಅವರು ಇವತ್ತಿನವರೆಗೂ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಬೇರೆ ಬೇರೆ ರಾಜ್ಯಗಳ ಮೂಲಕ ರಾಜ್ಯಸಭೆಗೆ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸಿಖ್ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮನಮೋಹನ್ ಸಿಂಗ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಅವರಿಗೆ ಮನವಿಯನ್ನೂ ಮಾಡಿದೆ ಎನ್ನಲಾಗಿದೆ. 86 ವರ್ಷದ ಮನಮೋಹನ್ ಸಿಂಗ್ ಈ ಬಗ್ಗೆ ಆಸಕ್ತಿಯನ್ನೂ ತೋರಿಲ್ಲ, ಈ ಬಗ್ಗೆ ಸ್ಪಷ್ಟ ಕಾರಣವನ್ನೂ ಕೂಡ ನೀಡುತ್ತಿಲ್ಲ. ಸೋಲಿನ ಆತಂಕವೂ ಇರಬಹುದು ಅಥವಾ ವಯಸ್ಸಿನ ಮಿತಿಯೂ ಇರಬಹುದು ಎಂದು ಹೇಳಲಾಗುತ್ತಿದೆ.
ಅದಾಗ್ಯೂ ಕಾಂಗ್ರೆಸ್ ನ ಹಿರಿಯ ನಾಯಕರು ಮನಮೋಹನ್ಸಿಂಗ್ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಯಲ್ಲಿ 2009ರ ಚುನಾವಣೆಯಲ್ಲೂ ಕೂಡ ಮನಮೋಹನ್ಸಿಂಗ್ ಅವರಿಗೆ ಆಫರ್ ನೀಡಲಾಗಿತ್ತು. ಆಗ ಅನಾರೋಗ್ಯದ ಕಾರಣವನ್ನು ಹೇಳಿ ಸ್ಪರ್ಧೆ ನಿರಾಕರಿಸಿದ್ದರು. ಮನಮೋಹನ್ಸಿಂಗ್ ಅವರು 1991ರಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಲೋಕಸಭಾ ಚುನಾವಣೆಯನ್ನು ಗೆದ್ದಿಲ್ಲ.