ಪುರುಷರ ಬಗ್ಗೆ ಮನೇಕಾ ಗಾಂಧಿ ಹೇಳಿಕೆಗೆ ತೀವ್ರ ವಿರೋಧ
ನವದೆಹಲಿ, ಸೆ. 15: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು 'ಎಲ್ಲ ಹಿಂಸೆಗಳಿಗೂ ಪುರುಷರೇ ಕಾರಣ' ಎಂದು ಹೇಳಿರುವುದು ಪುರುಷರ ಹಕ್ಕು ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ.
ಲಿಂಗ ಸಂವೇದನಾಶೀಲತೆಯಲ್ಲಿ ಪುರುಷರ ಪಾತ್ರವು ನಿರ್ಣಾಯಕವಾಗಿದೆ.ಶಾಲೆಗಳಲ್ಲಿ 'ಜೆಂಡರ್ ಚಾಂಪಿಯನ್ 'ಎಂಬ ಪರಿಕಲ್ಪನೆಯನ್ನು ನಾವು ಪರಿಚಯಿಸಿದ್ದು, ಇದರಡಿ ಹೆಣ್ಣುಮಕ್ಕಳನ್ನು ಗೌರವಿಸುವ ಮತ್ತು ಅವರಿಗೆ ನೆರವಾಗುವ ಹುಡುಗರಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಮನೇಕಾ ಗಾಂಧಿ ಹೇಳಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕಳೆದ ಜೂನ್ ತಿಂಗಳಿನಲ್ಲಿ 'ನಂ.100 ಮಹಿಳೆಯರು' ಅಭಿಯಾನ ಆರಂಭಿಸಿತ್ತು. ಇದರ ಅಂಗವಾಗಿ ಫೇಸ್ಬುಕ್ ಬಳಕೆದಾರರೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವೆ ಮನೇಕಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮೇಲ್ಕಂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಅದರೆ, ಸಚಿವೆ ನೀಡಿದ ಉತ್ತರ ಅಸಮಾನತೆಯನ್ನು ಎತ್ತಿ ಹಿಡಿದ್ದಂತೆ ಇದೆ. ಸಚಿವೆ ಮನೇಕಾ ಅವರು ಕ್ಷಮೆಯಾಚಿಸಬೇಕು ಎಂದು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ (ಎಸ್ ಐಎಫ್ ಎಫ್) ಆಗ್ರಹಿಸಿದೆ.
ಸಚಿವೆಯ ಹೇಳಿಕೆ ಪರೋಕ್ಷವಾಗಿ ಮಹಿಳೆಯರಿಂದಾಗುವ ದೌರ್ಜನ್ಯವನ್ನು ಪ್ರೋತ್ಸಾಹಿಸಿದ್ದಂತಾಗುತ್ತದೆ. ಪ್ರತಿ 8 ನಿಮಿಷಕ್ಕೊಮ್ಮೆ ವಿವಾಹಿತ ಪುರುಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಇದಕ್ಕೆ ಮಹಿಳೆಯಿಂದಾಗುವ ಕಿರುಕುಳವೇ ಕಾರಣ. ಈ ಬಗ್ಗೆ ಹೇಳಿಕೆ ನೀಡುವ ಮೊದಲು ಸಚಿವೆ ಮನೇಕಾ ಅಂಕಿ ಅಂಶಗಳನ್ನು ಪರಿಶೀಲಿಸಲಿ ಎಂದು ಸಂಸ್ಥೆ ಆಗ್ರಹಿಸಿದೆ.
ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆ, ಮಹಿಳೆಯರ ವಿರುದ್ಧ ಅಪರಾಧಗಳು ಮತ್ತು ಇತರ ರಾಜಕೀಯ ವಿಷಯಗಳ ಕುರಿತು ಪ್ರಶ್ನೆಗಳು ತೂರಿ ಬಂದಿದ್ದವಾದರೂ ಸಚಿವೆ ಕೆಲವೇ ಪ್ರಶ್ನೆಗಳಿಗೆ ಉತ್ತರಿಸಿದರು.
ಮಹಿಳೆಯರಿಗೆ ಪುರುಷರನ್ನು ಕೊಲ್ಲುವ ಹಕ್ಕು ಇದೆಯೆ?
ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಷನ್ ನ ವಕ್ತಾರರಾದ ಜ್ಯೋತಿ ತಿವಾರಿ ಅವರು ಪ್ರತಿಕ್ರಿಯಿಸಿ, ಸಚಿವೆಯ ಹೇಳಿಕೆಯಿಂದ ಕ್ರಿಮಿನಲ್ ಮನಸ್ಸುಳ್ಳ ಮಹಿಳೆಯರಿಗೆ ಲೈಸನ್ಸ್ ಸಿಕ್ಕಿದ್ದಂತಾಗುತ್ತದೆ. ಪುರುಷರನ್ನು ಕೊಲ್ಲುವ ಹಕ್ಕು ಮಹಿಳೆಯರಿಗೆ ಇದೆ ಎಂಬ ಭಾವನೆ ಬರುತ್ತದೆ. ಬಾಲಕಿಯರು ಬಾಲಕರಿಗೆ ಹೊಡೆದರೆ ಏನು ಮಾಡುವುದು. ಎಲ್ಲಾ ಹುಡುಗರು ಕ್ರಿಮಿನಲ್ ಗಳು, ಹುಡುಗಿಯರು ಸಂತರು ಎಂದು ಸಚಿವೆ ಹೇಗೆ ಭಾವಿಸಿದರು? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications