ದೀದಿಗೆ ಮುಖಭಂಗ: ವಿಚಾರಣೆಗೆ ಹಾಜರಾಗಲು ಕುಮಾರ್ ಗೆ ಸುಪ್ರೀಂ ಸೂಚನೆ
ಕೋಲ್ಕತ್ತಾ, ಫೆಬ್ರವರಿ 05: ಪಶ್ಚಿಮ ಬಂಗಾಳದಲ್ಲಿ ಸಿಬಿಐ ಮತ್ತು ಸರ್ಕಾರದ ನಡುವೆ ಎದ್ದಿರುವ ಹಗ್ಗಜಗ್ಗಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮಂಗಳವಾರ ನಡೆದ ವಿಚಾರಣೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ.
ಸಿಬಿಐ(ಕೇಂದ್ರ ತನಿಖಾ ದಳ) ಮುಂದೆ ತನಿಖೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್, ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಆದೇಶಿಸಿದೆ.
'ರಾಜೀವ್ ಕುಮಾರ್ ಅವರಿಗೆ ಸದ್ಯಕ್ಕೆ ಜೈಲಿಲ್ಲ, ಆದರೆ ತನಿಖೆಗೆ ಹಾಜರಾಗಬೇಕು' ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ದೀದಿ ಪಾಳೆಯದಲ್ಲಿ ಕೊಂಚ ನಿರಾಳವನ್ನುಂಟು ಮಾಡಿದೆಯಾದರೂ, ವಿಚಾರಣೆಗೆ ಹಾಜರಾಗಲೇಬೇಕು ಎಂದಿರುವುದು ತಲೆಬಿಸಿಗೆ ಕಾರಣವಾಗಿದೆ.
ರಾಜೀವ್ ಕುಮಾರ್ ಅವರು ಮೇಘಾಲಯದ ಶಿಲ್ಲಾಂಗ್ ನಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, "ರಾಜೀವ್ ಕುಮಾರ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಯಾವುದೇ ದಬ್ಬಾಳಿಕೆಯ ನಿರ್ಧಾರ ತೆಗೆದುಕೊಂಡಿಲ್ಲ. ಇದು ನೈತಿಕತೆಯ ಜನ ಎಂದು ನಾನು ಭಾವಿಸಿದ್ದೇನೆ. ನಮಗೆ ನ್ಯಾಯಾಂಗದ ಬಗ್ಗೆ ಅತೀವ ಗೌರವವಿದೆ. ಈ ಆದೇಶ ನಮಗೆ ತೃಪ್ತಿ ತಂದಿದೆ" ಎಂದಿದ್ದಾರೆ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು.
ಈ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳನ್ನು ತಡೆದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆದಿತ್ತು.
ತನಿಖೆಗೆ ಬಂದ ಸಿಬಿಐಯ ಈ ಕ್ರಮವನ್ನು ಖಂಡಿಸಿರುವ ದೀದಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದು, ಅದು ಮೂರನೇ ದಿನವೂ ಮುಂದುವರಿದಿದೆ.












Click it and Unblock the Notifications