ಕೊರೊನಾ ನಿಯಂತ್ರಣಕ್ಕೆ ನಿಯಮ ಜಾರಿ: ಮದುವೆಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ
ನವದೆಹಲಿ, ನವೆಂಬರ್ 18: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದ್ದು, ದೆಹಲಿಯಲ್ಲಿ ಸೋಂಕು ಹೆಚ್ಚಳ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಅನೇಕ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ರಾಜಧಾನಿಯಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಈ ಮುಂಚೆ 200 ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಈಗ ಗರಿಷ್ಠ ಮಿತಿಯನ್ನು 50ಕ್ಕೆ ಇಳಿಸಲಾಗಿದೆ. ದೆಹಲಿ ಸರ್ಕಾರದ ಈ ಹೊಸ ನಿಯಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಜಾಜ್ ಬುಧವಾರ ಅನುಮೋದನೆ ನೀಡಿದ್ದಾರೆ.
ದೆಹಲಿಯ ಪ್ರಮುಖ ಮಾರುಕಟ್ಟೆಗಳನ್ನು ಮುಚ್ಚಲು ಅನುಮತಿ ನೀಡಿ: ಕೇಜ್ರಿವಾಲ್
ಮಂಗಳವಾರ ದೆಹಲಿ ಸರ್ಕಾರ ಮದುವೆ ಸಮಾರಂಭಗಳಲ್ಲಿ ಗರಿಷ್ಠ 200 ಅತಿಥಿಗಳಿಗೆ ನೀಡಿದ್ದ ಅವಕಾಶವನ್ನು ಹಿಂದಕ್ಕೆ ಪಡೆದಿತ್ತು. ಅಲ್ಲದೆ ರಾಜಧಾನಿಯಲ್ಲಿ ಜನದಟ್ಟಣೆ ಹೆಚ್ಚಿರುವ ಮಾರುಕಟ್ಟೆಗಳನ್ನು ಸಹ ದೆಹಲಿ ಸರ್ಕಾರ ಮುಚ್ಚುವಂತೆ ಆದೇಶಿಸಿದೆ.
'ದೆಹಲಿಯಲ್ಲಿ ಕೆಲವು ವಾರಗಳ ಹಿಂದೆ ಕೋವಿಡ್ ಸನ್ನಿವೇಶ ಸುಧಾರಣೆಯಾಗಿತ್ತು. ಹೀಗಾಗಿ ಮದುವೆ ಸಮಾರಂಭಗಳಿಗೆ ಹಾಜರಾಗುವ ಅತಿಥಿಗಳ ಗರಿಷ್ಠ ಸಂಖ್ಯೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 200ಕ್ಕೆ ಏರಿಸಲಾಗಿತ್ತು. ಈಗ ಅದನ್ನು ಹಿಂಪಡೆದಿದ್ದು, 50 ಜನರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ' ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ಕೊವಿಡ್-19 ನಿಯಂತ್ರಣ ಕಳೆದುಕೊಂಡ ನಗರಗಳ ಪಟ್ಟಿಯಲ್ಲಿ ನವದೆಹಲಿ!
'ದೆಹಲಿಯಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ದೆಹಲಿ ಸರ್ಕಾರವು ಅಗತ್ಯಬಿದ್ದರೆ ನಿಯಮಾಳಿಗಳನ್ನು ಪಾಲಿಸದ ಮತ್ತು ಕೋವಿಡ್ 19 ಹಾಟ್ಸ್ಪಾಟ್ಗಳಾಗಿರುವ ಮಾರುಕಟ್ಟೆಗಳನ್ನು ಕೆಲವು ದಿನಗಳವರೆಗೆ ಮುಚ್ಚಲು ನಾವು ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಪ್ರಸ್ತಾವವನ್ನು ಕಳುಹಿಸುತ್ತಿದ್ದೇವೆ' ಎಂದು ತಿಳಿಸಿದ್ದರು.