ದೆಹಲಿ ಎಲ್ಜಿ ಸಕ್ಸೇನಾ ವಿರುದ್ಧ 1400 ಕೋಟಿ ರು ನೋಟು ಬದಲಾವಣೆ ಆರೋಪ
ನವದೆಹಲಿ, ಆಗಸ್ಟ್ 30: ನವದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ 2016ರಲ್ಲಿ ಕೆವಿಐಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 1400 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ತಮ್ಮ ಉದ್ಯೋಗಿಗಳಿಗೆ ಒತ್ತಡ ಹೇರಿದ್ದರು ಎಂದು ಆಪ್ ಆರೋಪಿಸಿದೆ.
ಸೋಮವಾರ ದೆಹಲಿ ವಿಧಾನಸಭೆಯಲ್ಲಿ ಈ ಕುರಿತು ಎಎಪಿ ಶಾಸಕ ದುರ್ಗೇಶ್ ಪಾಠಕ್ ಉಲ್ಲೇಖಿಸಿದರು. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಜಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳೆದ ತಿಂಗಳು ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಆಡಳಿತ ಪಕ್ಷ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಜಿದ್ದಾಜಿದ್ದಿ ಜೋರಾಗಿದೆ.
"ಅವರು ಕೆವಿಐಸಿ ಅಧ್ಯಕ್ಷರಾಗಿದ್ದಾಗ, ನೋಟು ಅಮಾನ್ಯೀಕರಣವನ್ನು ಮಾಡಲಾಗಿದ್ದು, ಅದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಷಿಯರ್ ಸೇರಿದಂತೆ ಸಿಬ್ಬಂದಿಗೆ ನೋಟುಗಳ ವಿನಿಮಯ ಮಾಡುವಂತೆ ಒತ್ತಡ ಹೇರಿದ್ದರು. ಈ ಕುರಿತು ಲಿಖಿತ ದೂರು ನೀಡಿದ ಸಿಬ್ಬಂದಿಯನ್ನೇ ಅಮಾನತು ಮಾಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದ್ದು, ಆರೋಪಕ್ಕೆ ಸಂಬಂಧಿಸಿದ ವರದಿ ಮತ್ತು ಉದ್ಯೋಗಿಗಳ ಹೇಳಿಕೆಗಳೂ ಇವೆ," ಎಂದು ಹೇಳಿದ್ದಾರೆ.
ದೆಹಲಿ ಸದನದ ಬಾವಿಗಿಳಿದು ಆಪ್ ಧಿಕ್ಕಾರ:
ನವದೆಹಲಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ನಡುವೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಆಪ್ ಸದಸ್ಯರು, ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಉಪ ಸ್ಪೀಕರ್ ರಾಖಿ ಬಿರ್ಲಾ 15 ನಿಮಿಷಗಳ ಕಾಲ ವಿಧಾನಸಭೆ ಕಲಾಪವನ್ನು ಸ್ಥಗಿತಗೊಳಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಸಕ್ಸೇನಾ ಅನ್ನು ವಜಾಗೊಳಿಸಬೇಕೆಂದು ಆಪ್ ಶಾಸಕರು ಒತ್ತಾಯಿಸಿದರು.
"ಅವರು ಕೆವಿಐಸಿ ಅಧ್ಯಕ್ಷರಾಗಿದ್ದಾಗ ತಮ್ಮ ಕ್ಯಾಷಿಯರ್ನ ಮೇಲೆ ಒತ್ತಡ ಹೇರಿ ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸಿಕೊಂಡರು. ದೆಹಲಿ ಶಾಖೆಯೊಂದರಲ್ಲೇ 22 ಲಕ್ಷ ರೂಪಾಯಿ ವಿನಿಮಯವಾಗಿದೆ. ದೇಶಾದ್ಯಂತ ಇಂತಹ 7000 ಶಾಖೆಗಳಿವೆ ಎಂದರೆ 1400 ಕೋಟಿ ಹಗರಣ ನಡೆದಿದೆ ಎಂದು ಆಡಳಿತ ಪಕ್ಷ ಆಪ್ ಉಲ್ಲೇಖಿಸಿದೆ.
ಎಎಪಿ ಶಾಸಕರು ಈ ವಿಚಾರದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇಡಿ ತನಿಖೆಗೆ ಒತ್ತಾಯಿಸಿದರು. ಸಕ್ಸೇನಾ ರಾಜೀನಾಮೆಗೆ ಆಗ್ರಹಿಸಿದ ಆಪ್, ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. 'ಎಲ್ಜಿ ವಿಕೆ ಸಕ್ಸೇನಾ ಚೋರ್ ಹೈ', 'ವಿ ಕೆ ಸಕ್ಸೇನಾ ಕೋ ಅರೆಸ್ಟ್ ಕರೋ' ಎಂಬ ಫಲಕಗಳನ್ನು ಹಿಡಿದು ವಿಧಾನಸಭೆ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಆಪ್ ಶಾಸಕರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಡಿಸಿದ ವಿಶ್ವಾಸಮತಯಾಚನೆಗೆ ಮುನ್ನ ಪ್ರತಿಪಕ್ಷ ಬಿಜೆಪಿ ಶಾಸಕರನ್ನು ಸೋಮವಾರ ದೆಹಲಿ ವಿಧಾನಸಭೆಯಿಂದ ಮಾರ್ಷಲ್ ಮಾಡಲಾಗಿತ್ತು. ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ತರಗತಿ ಕೊಠಡಿಗಳ ನಿರ್ಮಾಣದ ವರದಿ ಮತ್ತು ಅಬಕಾರಿ ನೀತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಗಮನ ಸೆಳೆಯುವ ಮತ್ತು ಕಿರು ಚರ್ಚೆಗೆ ಬಿಜೆಪಿ ಶಾಸಕರು ಒತ್ತಾಯಿಸಿದರು.
ಉಪ ಸ್ಪೀಕರ್ ರಾಖಿ ಬಿರ್ಲಾ ಅವರು ಗಮನ ಸೆಳೆಯುವ ಮನವಿಯನ್ನು ತಿರಸ್ಕರಿಸಿದ ನಂತರ ಅವರು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ನಂತರ ಅವರು ಇಡೀ ದಿನ ಸದನದಿಂದ ಹೊರಹೋಗುವಂತೆ ಕೇಳಿಕೊಂಡರು. ''ಗಂಭೀರ ವಿಚಾರಗಳ ಚರ್ಚೆಗೆ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ವಿರೋಧ ಪಕ್ಷದ ಸದಸ್ಯರು ಸದನವನ್ನು ಗೌರವಿಸಲಿಲ್ಲ ಹೀಗಾಗಿ ಮಾರ್ಷಲ್ ಔಟ್ ಮಾಡಬೇಕಾಯಿತು," ಎಂದು ಬಿರ್ಲಾ ಹೇಳಿದರು.
ನವದೆಹಲಿಯಲ್ಲಿ- ಆಪರೇಷನ್ ಕಮಲ ಫೇಲ್:
ನವದೆಹಲಿಯಲ್ಲಿ ವಿಶ್ವಾಸಮತಯಾಚನೆ ಅನ್ನು ಮಂಡಿಸುವಾಗ ಕೇಜ್ರಿವಾಲ್ ಮಾತನಾಡಿದರು. ಆಮ್ ಆದ್ಮಿ ಪಕ್ಷದ ಯಾವುದೇ ಶಾಸಕರನ್ನು ಬೇಟೆಯಾಡಲು ಸಾಧ್ಯವಾಗದ ಕಾರಣ ತಮ್ಮ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷದ "ಆಪರೇಷನ್ ಕಮಲ" ವಿಫಲವಾಗಿದೆ ಎಂದು ಆರೋಪಿಸಿದರು. ರೋಹಿಣಿಯ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ, ಸರ್ಕಾರಿ ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣದ ಕುರಿತು ಸಿವಿಸಿ ವರದಿಯ ಮೇಲೆ ಗಮನ ಸೆಳೆಯುವ ಪ್ರಸ್ತಾಪವನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.