ಡ್ರೋನ್ ಬಳಸಿ ದೆಹಲಿ ಸ್ಫೋಟಕ್ಕೆ ಲಷ್ಕರ್ ಸಂಚು
ನವದೆಹಲಿ, ಏ.28: ಭೂಕಂಪದ ಆತಂಕದಿಂದ ಸುಧಾರಿಸಿಕೊಳ್ಳುತ್ತಿರುವ ದೆಹಲಿ ಜನತೆಗೆ ಇನ್ನೊಂದು ಎಚ್ಚರಿಕೆ ಗಂಟೆ ಕೇಳಿಸಿದೆ. ಉಗ್ರ ಸಂಘಟನೆಗಳಾದ ಲಷ್ಕರ್ ಇ ತೋಯ್ಬಾ ಹಾಗೂ ಜೈಷ್ ಇ ಮೊಹಮ್ಮದ್ ಡ್ರೋನ್ ಬಳಸಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ವಾಯುದಾಳಿ ಮೂಲಕ ದೆಹಲಿ ನಗರವನ್ನು ಧ್ವಂಸಗೊಳಿಸಲು ಲಷ್ಕರ್ ಉಗ್ರರು ಯೋಜನೆ ಹಾಕಿಕೊಂಡಿದ್ದಾರೆ. ಅತ್ಯಾಧುನಿಕ ಡ್ರೋನ್ ಸಾಧನಗಳನ್ನು ಬಳಸಿಕೊಂಡು ತಮ್ಮ ಕಾರ್ಯ ಸಾಧಿಸಲು ಹೊಂಚು ಹಾಕುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ. ಇದರ ಬೆನ್ನಲ್ಲೇ ದೆಹಲಿ ಸುತ್ತಾ ಮುತ್ತಾ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಮಾನವ ರಹಿತ ಡ್ರೋನ್ ಗಳನ್ನು ಬಳಸಿ ಉಗ್ರರು ವಾಯು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ತೀವ್ರ ಕಟ್ಟೆಚ್ಚರ ವಹಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಹೇಳಿದ್ದಾರೆ.
ಮುಂಬೈ 26/11 ಉಗ್ರರ ದಾಳಿ ರುವಾರಿ ಝಕಿ ಉರ್ ರೆಹಮಾನ್ ಲಖ್ವಿ ಇತ್ತೀಚೆಗೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ವಿಶ್ವದೆಲ್ಲೆಡೆ ಅನೇಕ ಭಯೋತ್ಪಾದನಾ ಕೃತ್ಯಗಳನ್ನು ಎಸಗಿರುವ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾನೆ. ಭಾರತದ ಮೇಲೆ ಸದಾ ವಿಷಕಾರುವ ಇವರಿಬ್ಬರು ವಾಯು ದಾಳಿಯ ಸಂಚು ರೂಪಿಸಲು ನೆರವಾಗುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ದಕ್ಷಿಣ ಭಾರತದ ದೇಗುಲಗಳ ಮೇಲೆ ಉಗ್ರರ ಕರಿನೆರಳು ಬಿದ್ದ ಬೆನ್ನಲ್ಲೇ ದೆಹಲಿ ಮೇಲೆ ಡ್ರೋನ್ ದಾಳಿ ಭೀತಿ ಎದುರಾಗಿದೆ. ಅದರೆ, ಉಗ್ರರ ಸಂಚನ್ನು ಛಿದ್ರಗೊಳಿಸಿ ಸೂಕ್ತ ಭದ್ರತೆ ಒದಗಿಸಲು ಪೊಲೀಸರು ಸಜ್ಜಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications