ಮೋದಿ ವಿರುದ್ಧ ಸಾಕ್ಷ್ಯವಿದ್ದರೆ ರಾಹುಲ್ ಬಯಲು ಮಾಡಿ: ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 14: ಒಂದು ವೇಳೆ ಸಾಕ್ಷ್ಯ ಇದ್ದರೆ ಸಂಸತ್ ನ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರವನ್ನು ಬಯಲು ಮಾಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆ. "ರಾಹುಲ್ ಗಾಂಧಿ ಬಳಿ ಮೋದಿ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾದ ದಾಖಲೆ ಇದ್ದರೆ ಸಂಸತ್ ಹೊರಗೆ ಏಕೆ ಬಯಲಿಗೆ ಎಳೆಯಬಾರದು" ಎಂದು ಟ್ವೀಟ್ ಮಾಡಿದ್ದಾರೆ.
ಆಮ್ ಆದ್ಮಿ ಪಾರ್ಟಿ ಮುಖಂಡ ಆಶಿಷ್ ಖೇತಾನ್ ಟ್ವೀಟ್ ನಲ್ಲಿ, ರಾಹುಲ್ ಗಾಂಧಿಯವರನ್ನು ಸಂಸತ್ ಒಳಗೆ ಮಾತನಾಡಲು ಬಿಡ್ತಿಲ್ಲ ಅಂದರೆ ಮೋದಿ ಅವರ ಬಗ್ಗೆ ರಾಹುಲ್ ಬಳಿ ಇರುವ ಮಾಹಿತಿಯನ್ನು ಸಂಸತ್ ಹೊರಭಾಗದಲ್ಲಿ ಬಯಲು ಮಾಡಲಿ ಎಂದಿದ್ದಾರೆ. ಅದಕ್ಕೆ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.[ಭ್ರಷ್ಟಾಚಾರದಲ್ಲಿ ಸ್ವತಃ ಪ್ರಧಾನಿ ಭಾಗಿ, ನನ್ನ ಹತ್ರ ಸಾಕ್ಷ್ಯ ಇದೆ: ರಾಹುಲ್]
ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಒಪ್ಪಂದವಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. "ಇದೊಂಥರ ಫ್ರೆಂಡ್ಲಿ ಮ್ಯಾಚ್. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಅಗಸ್ಟಾ ವೆಸ್ಟ್ ಲ್ಯಾಂಡ್ ಅಂದರೆ, ಕಾಂಗ್ರೆಸ್ ನವರು ಬಿಜೆಪಿ ವಿರುದ್ಧ ಸಹಾರಾ ಮತ್ತು ಬಿರ್ಲಾ ಅಂತಾರೆ. ಆದರೆ ಇಬ್ಬರೂ ಏನೂ ಹೊರಹಾಕಲ್ಲ" ಎಂದು ಕೇಜ್ರಿವಾಲ್ ಟಾಂಗ್ ನೀಡಿದ್ದಾರೆ.[ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್]
ಈ ಹಿಂದೆ ಅರವಿಂದ್ ಕೇಜ್ರಿವಾಲ್ ಪ್ರಧಾನಿ ವಿರುದ್ಧ ಆರೋಪ ಮಾಡಿದ್ದರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹಾರ ಮತ್ತು ಬಿರ್ಲಾ ಅವರಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು.