'ನವ ಭಾರತ' ನೀವೇ ಇಟ್ಕೊಳ್ಳಿ, ನಮ್ಮ ಹಳೆಯ ಭಾರತ ನಮಗೆ ಕೊಡಿ: ಗುಲಾಮ್ ನಬಿ ಆಜಾದ್
ನವದೆಹಲಿ, ಜೂನ್ 24: ಜಾರ್ಖಂಡ್ನಲ್ಲಿ ನಡೆದ ಮುಸ್ಲಿಂ ವ್ಯಕ್ತಿಯೊಬ್ಬನ ಗುಂಪು ಹತ್ಯೆ ಪ್ರಕರಣ ಸಂಸತ್ನಲ್ಲಿ ಸೋಮವಾರ ಕೋಲಾಹಲ ಸೃಷ್ಟಿಸಿತು. ರಾಜ್ಯಸಭೆಯಲ್ಲಿ ಈ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಯಿತು.
ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮಾತನಾಡಿ, 'ಹಳೆಯ ಭಾರತದಲ್ಲಿ (ಕಾಂಗ್ರೆಸ್ ಆಡಳಿತ) ಯಾವುದೇ ದ್ವೇಷ, ಕೋಪ ಅಥವಾ ಗುಂಪು ಹತ್ಯೆ ಇರಲಿಲ್ಲ. ನವ ಭಾರತದಲ್ಲಿ ಮನುಷ್ಯರು ಒಬ್ಬರಿಗೊಬ್ಬರು ಶತ್ರುಗಳಾಗುತ್ತಿದ್ದಾರೆ. ಕಾಡಿನಲ್ಲಿರುವ ಪ್ರಾಣಿಗಳ ಬಗ್ಗೆ ನಿಮಗೆ ಹೆದರಿಕೆಯಾಗುವುದಿಲ್ಲ. ಆದರೆ, ಕಾಲೊನಿಯಲ್ಲಿರುವ ಮನುಷ್ಯರ ಬಗ್ಗೆ ಭಯಪಡುವಂತಾಗಿದೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಒಬ್ಬರಿಗೊಬ್ಬರು ಬದುಕುತ್ತಿದ್ದ ನಮ್ಮ ಭಾರತವನ್ನು ನಮಗೆ ಕೊಡಿ' ಎಂದು ಹೇಳಿದರು.
'ನಿಮ್ಮ 'ನವ ಭಾರತ'ವನ್ನು ನಿಮ್ಮಲ್ಲಿಯೇ ಇರಿಸಿಕೊಳ್ಳಿ. ನಮಗೆ ಪ್ರೀತಿ ಮತ್ತು ಸಂಸ್ಕೃತಿ ಹೊಂದಿದ್ದ ನಮ್ಮ ಹಳೆಯ ಭಾರತವನ್ನು ಕೊಡಿ. ಮುಸ್ಲಿಮರು ಮತ್ತು ದಲಿತರು ಘಾಸಿಗೆ ಒಳಗಾದಾಗ ಹಿಂದೂಗಳಿಗೆ ನೋವುಂಟಾಗುತ್ತಿತ್ತು. ಹಿಂದೂಗಳ ಕಣ್ಣಿನೊಳಗೆ ಏನಾದರೂ ಹೋದರೆ ಮುಸ್ಲಿಮರು ಮತ್ತು ದಲಿತರು ಅವರಿಗಾಗಿ ಕಣ್ಣೀರಿಡುತ್ತಿದ್ದರು' ಎಂದು ಅವರು ಹೇಳಿದರು.

'ಜಾರ್ಖಂಡ್ ಗುಂಪು ಹತ್ಯೆ ಮತ್ತು ಹಿಂಸಾಚಾರದ ಕಾರ್ಖಾನೆಯಾಗಿ ಪರಿಣಮಿಸಿದೆ. ದಲಿತರು ಮತ್ತು ಮುಸ್ಲಿಮರನ್ನು ಪ್ರತಿ ವಾರ ಕೊಲ್ಲಲಾಗುತ್ತಿದೆ. ಪ್ರಧಾನಿ ಮೋದಿ, 'ಸಬ್ಕಾ ಸಾಥ್ ಸಬ್ ಕಾ ವಿಕಾಸ್' ಹೋರಾಟದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ. ಆದರೆ, ಜನರಿಗೆ ಕಾಣುವ ಮಟ್ಟಕ್ಕೆ ಅದು ಇರಬೇಕು. ಅದನ್ನು ನಾವು ಎಲ್ಲಿಯೂ ನೋಡುತ್ತಿಲ್ಲ' ಎಂದರು.
ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಒಂದು ಕಡೆ ಸರ್ಕಾರ ಗಾಂಧೀಜಿ ಅವರ ಜನ್ಮದಿನ ಆಚರಿಸಲು ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಮಹಾತ್ಮ ಗಾಂಧಿ ಅವರ ಕೊಲೆಗಡುಕನನ್ನು ಸಾರ್ವಜನಿಕವಾಗಿ ವೈಭವೀಕರಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದು ಹೇಗೆ ಸಾಧ್ಯ? ಇದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?' ಎಂದು ಪ್ರಶ್ನಿಸಿದರು.












Click it and Unblock the Notifications