ರೋಹಿತ್ ವಿಡಿಯೋ : ನಾನೂ ಅವಳ ಬಳಿಗೆ ಹೋಗ್ತೇನೆ
ಪತ್ನಿ ಅಗಲಿಕೆಯಿಂದ ಅತೀವ ದುಃಖವಾಗಿದೆ. ಸತ್ಯ ಏನೆಂಬುದು ಜಗತ್ತಿಗೆ ತಿಳಿದ ನಂತರ ನಾನು ಈ ಭೂಮಿಯಲ್ಲಿ ಇರುವುದಿಲ್ಲ ನನ್ನ ಪತ್ನಿ ಬಳಿಗೆ ಹೋಗುತ್ತೇನೆ ಎಂದು ಕಬಡ್ಡಿ ಆಟಗಾರ ರೋಹಿತ್ ಕುಮಾರ್ ಹೇಳಿದ್ದಾರೆ.
ನವದೆಹಲಿ, ಅಕ್ಟೋಬರ್, 21: ಪ್ರೋ ಕಬಡ್ಡಿ ಲೀಗ್ ನಲ್ಲಿ ಬೆಂಗಳೂರು ಬುಲ್ಸ್ ಪರ ಆಡುವ ರಾಷ್ಟ್ರೀಯ ಕಬಡ್ಡಿ ಆಟಗಾರ ರೋಹಿತ್ ಕುಮಾರ್ ಅವರು ತಮ್ಮ ಪತ್ನಿ ಲಲಿತಾ ಅವರ ಆತ್ಮಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ್ದು, ನನ್ನ ಪತ್ನಿ ಅಗಲಿಕೆಯಿಂದ ಅತೀವ ದುಃಖವಾಗಿದೆ. ನಾನು ಅವಳ ಬಳಿಗೆ ಹೋಗುತ್ತೇನೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರೋಹಿತ್ ಕುಮಾರ್ ಅವರು ತಮ್ಮ ಅಧಿಕೃತ ಫೇಸ್ ಬುಕ್ ಪುಟದಲ್ಲಿ 4ನಿಮಿಷ 38ಸೆಕೆಂಡುಗಳ ಅವಧಿಯ ವಿಡಿಯೋವೊಂದನ್ನು ಅಪಲೋಡ್ ಮಾಡಿದ್ದು, ಅದರಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.[ಕಬಡ್ಡಿ ಆಟಗಾರನ ಪತ್ನಿ ಆತ್ಮಹತ್ಯೆ, ವಿಡಿಯೋ ಸಾಕ್ಷಿಯಲ್ಲಿ ಏನಿದೆ?]
'ನನ್ನ ಪತ್ನಿ ಈ ರೀತಿಯ ನಿರ್ಧಾರ ಏಕೆ ತೆಗೆದುಕೊಂಡಳು ಎಂದು ಈಗಲೂ ನನಗೆ ತಿಳಿಯುತ್ತಿಲ್ಲ. ಇಂತಹ ಕಠಿಣ ನಿರ್ಧಾರ ಹೇಗೆ ತಾಳಿದಳು ಎಂದು ಗೊತ್ತಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
'ಇಬ್ಬರೂ ಅನೋನ್ಯದಿಂದ ಬಾಳುತ್ತಿದ್ದೆವು, ನಮ್ಮಿಬ್ಬರಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ. ಇಬ್ಬರೂ ಒಟ್ಟಿಗೆ ಬದುಕಿ ಬಾಳುವ ನಿರ್ಧಾರವನ್ನು ತಾಳಿದ್ದೆವು' ಎಂದಿದ್ದಾರೆ.
'ಅವಳ ಸಾವಿನ ವಿಷಯ ನನಗೆ ತೀರಾ ತಡವಾಗಿ ತಿಳಿಯಿತು. ಅವಳೊಂದಿಗೆ ಸದಾ ಇರಬೇಕೆಂಬ ಬಯಕೆ ನನಗಿತ್ತು. ಆದರೆ ವೃತ್ತಿಯ ಒತ್ತಡದಿಂದ ಅವಳೊಂದಿಗೆ ಹೆಚ್ಚು ದಿನ ಕಳೆಯಲು ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ನನ್ನ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ಎಂದೂ ಅವಳಿಗೆ ವರದಕ್ಷಿಣೆಗಾಗಿ ಪೀಡಿಸಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ನನ್ನ ಪತ್ನಿಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವಳೆಂದಿಗೂ ನನ್ನ ಬಗ್ಗೆ ಆ ರೀತಿ ಹೇಳಿಕೆ ನೀಡಿರುವುದಿಲ್ಲ. ನನ್ನ ಪತ್ನಿಯ ಅಪ್ಪನಿಗೂ ನಾನು ಎಂಥವನು ಎಂದು ಗೊತ್ತು. ನಾನು ಎಂದಿಗೂ ಅವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಮಧ್ಯ ತರಗತಿ ಕುಟುಂಬದವನು. ನಮ್ಮದು ಪುಟ್ಟ ಸಂಸಾರ. ನಾನು ನನ್ನ ಪತ್ನಿ, ನಮ್ಮ ತಂದೆ ತಾಯಿ ಇರುತ್ತಿದ್ದೆವು. ನಮ್ಮಲ್ಲಿ ಯಾವುದೇ ಗೊಡವೆಗಳು ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ತಲೆಮರೆಸಿಕೊಂಡಿಲ್ಲ ಕೆಲಸದಲ್ಲೇ ಇದ್ದೇನೆ ಕಾರ್ಯದ ಒತ್ತಡವಿದ್ದು ನನಗೆ ಬರಲು ಆಗುತ್ತಿಲ್ಲ. ಕೊನೆಯ ಬಾರಿ ಅವಳ ಮುಖವನ್ನು ನೋಡಲು ನನಗೆ ಆಗಲಿಲ್ಲ ಇದರಿಂದ ಅತೀವ ದುಃಖವಾಗಿದೆ.
ಪ್ರಪಂಚಕ್ಕೆ ನಿಜಾಂಶ ಏನೆಂದು ಗೊತ್ತಾಗಬೇಕು ಆದ್ದರಿಂದಲೇ ನಾನು ಇನ್ನೂ ಬದುಕಿದ್ದೇನೆ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಇಡೀ ಪ್ರಪಂಚಕ್ಕೆ ಗೊತ್ತಾಗಬೇಕು. ನಿಜಾಂಶ ಹೊರಬಂದ ಮೇಲೆ ನಾನು ಪತ್ನಿ ಬಳಿಗೆ ಹೋಗಿಬಿಡುತ್ತೇನೆ ಎಂದು ದುಃಖಿಸಿದ್ದಾರೆ.
ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಅವರು ಯಾವ ಸಂದರ್ಭದಲ್ಲಿ ಕರೆದರೂ ನಾನು ಹೋಗುತ್ತೇನೆ. ಯಾವ ವಿಷಯವನ್ನೂ ಮುಚ್ಚಿಡದೇ ಎಲ್ಲವನ್ನು ವಿವರವಾಗಿ ಪೊಲೀಸರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ಕಾನೂನು ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನನಗೆ ಅನ್ಯಾಯವಾಗುವುದಿಲ್ಲ ಎಂದು ನನಗೆ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂದಾದರೆ ನನಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡಿದ್ದೇನೆ. ರಾಷ್ಟ್ರದ ಪರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲೂ ಯಾರಿಗೂ ನೋವುಂಟು ಮಾಡಿಲ್ಲ ಎಂದು ಹೇಳಿದ್ದಾರೆ.
ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಹೆಂಡತಿಯೇ ನನ್ನನ್ನು ಬಿಟ್ಟು ಹೋದ ಮೇಲೆ ನನಗೆ ಈ ಪ್ರಪಂಚಬೇಡವಾಗಿವಬಿಟ್ಟಿದೆ. ಸತ್ಯ ಏನೆಂದು ಜಗತ್ತಿಗೆ ತಿಳಿದ ನಂತತ ನಾನು ನನ್ನ ಹೆಂಡತಿ ಬಳಿಗೆ ಹೋಗಿಬಿಡುತ್ತೇನೆ ಎಂದು ಹೇಳಿದ್ದಾರೆ.
ರೋಹಿತ್ ಕುಮಾರ್ ಅವರ ಪತ್ನಿ ಲಲಿತಾ ಅವರು ಅಕ್ಟೋಬರ್ 18ರಂದು ದೆಹಲಿಯ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ನನ್ನ ಪತಿ ನನಗೆ ಹಿಂಸೆ ನೀಡುತ್ತಿದ್ದರು ಎಂದು ವಿವಿರವಾಗಿ ತಿಳಿಸಿದ್ದರು.