ಸಮಿತಿಯಲ್ಲಿ ಇರಲು ಇಷ್ಟವಿಲ್ಲ ಎಂದು ಮೋದಿ, ಖರ್ಗೆಗೆ ತಿಳಿಸಿದ್ದ ನ್ಯಾಯಮೂರ್ತಿ
ನವದೆಹಲಿ, ಜನವರಿ 15: ಕೇಂದ್ರ ಸರ್ಕಾರ ನೀಡಿದ್ದ ಸಿಎಸ್ಎಟಿ ಅಧ್ಯಕ್ಷ ಹುದ್ದೆಯ ಆಫರ್ಅನ್ನು ತಿರಸ್ಕರಿಸಿದ್ದ ನ್ಯಾಯಮೂರ್ತಿ ಎ.ಕೆ. ಸಿಕ್ರಿ, ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಸ್ಥಾನದಿಂದ ವಜಾಗೊಳಿಸುವುದನ್ನು ನಿರ್ಧರಿಸುವ ಮೂವರು ಸದಸ್ಯರ ಆಯ್ಕೆ ಸಮಿತಿಯ ಭಾಗವಾಗಿರಲು ಬಯಸಿರಲಿಲ್ಲ ಎನ್ನಲಾಗಿದೆ.
ಸಮಿತಿಯ ಇನ್ನಿಬ್ಬರು ಸದಸ್ಯರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವೊಲಿಸಲು ಸಿಕ್ರಿ ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಲೋಕ್ ವರ್ಮಾ ಅವರ ವಜಾಗೊಳಿಸುವ ಅಥವಾ ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಶುದ್ಧ ಕಾರ್ಯಕಾರಿ ಕೆಲಸ ಎಂದು ಸಿಕ್ರಿ ಹೇಳಿದ್ದರು. ಹಿತಾಸಕ್ತಿ ಸಂಘರ್ಷ ಎದುರಾಗುವ ಸಾಧ್ಯತೆ ಇದ್ದಿದ್ದರೆ ಸಮಿತಿಯಲ್ಲಿ ಇರಲು ಏಕೆ ಒಪ್ಪಿಕೊಂಡಿದ್ದಿರಿ ಎಂದು ವಿರೋಧ ಪಕ್ಷದ ಮುಖಂಡರು ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.
ಲಂಡನ್ನಲ್ಲಿರುವ ಕಾಮನ್ವೆಲ್ತ್ ಸೆಕ್ರೆಟರಿಯಟ್ ಆರ್ಬಿಟ್ರಲ್ ಟ್ರಿಬ್ಯುನಲ್(ಸಿಎಸ್ಎಟಿ) ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಸರ್ಕಾರ ಮುಂದಾಗಿತ್ತು. 53 ಕಾಮನ್ವೆಲ್ತ್ ದೇಶಗಳ ನಡುವೆ ಉದ್ಭವಿಸುವ ವಿವಾದಗಳನ್ನು ಬಗೆಹರಿಸಲು ಈ ನ್ಯಾಯಮಂಡಳಿ ಸ್ಥಾಪಿಸಲಾಗಿದೆ.
ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ನ್ಯಾ.ಎ.ಕೆ.ಸಿಕ್ರಿ ನಯವಾಗಿ ತಿರಸ್ಕರಿಸಿದ್ದು, ಈ ಕುರಿತು ಅವರು ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದರು.

ಮುಂದೆ ಯಾರೂ ಬಯಸುವುದಿಲ್ಲ
'ಸಿಬಿಐ ನಿರ್ದೇಶಕರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಭವಿಷ್ಯದಲ್ಲಿ ಯಾವ ನ್ಯಾಯಮೂರ್ತಿಯೂ ಇಷ್ಟಪಡುವುದಿಲ್ಲ. ಎಲ್ಲ ನ್ಯಾಯಮೂರ್ತಿಗಳೂ ಈ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಾರೆ' ಎಂದು ಸಿಕ್ರಿ ಹೇಳಿದ್ದಾರೆ.
'ಇಲ್ಲಿ ವಿವಾದವನ್ನು ಎಳೆಯುವುದು ನನಗೆ ಇಷ್ಟವಿಲ್ಲ. ಅದು ಇಲ್ಲಿಯೇ ಸಾಯಬೇಕೆಂದು ಬಯಸುತ್ತೇನೆ' ಎಂದು ಸಿಕ್ರಿ ಹೇಳಿದ್ದಾರೆ.

ಸಂಭಾವನೆ ಇಲ್ಲದ ಗೌರವ
ಮಾರ್ಚ್ 6ರಂದು ಸಿಕ್ರಿ ಅವರು ನಿವೃತ್ತರಾಗಲಿದ್ದು, ಸಿಎಸ್ಎಟಿಗೆ ನೇಮಿಸುವ ಬಗ್ಗೆ ಕೇಂದ್ರ ಸರ್ಕಾರ ಕಳೆದ ತಿಂಗಳು ಆಫರ್ ನೀಡಿತ್ತು. ಇದು ವರ್ಷಕ್ಕೆ ಎರಡು ಅಥವಾ ಮೂರು ವಿಚಾರಣೆಗಳನ್ನು ಮಾತ್ರ ನಡೆಸಲಿದ್ದು, ಇದಕ್ಕೆ ಯಾವ ಸಂಭಾವನೆಯನ್ನೂ ನೀಡುವುದಿಲ್ಲ. ಹೀಗಾಗಿ ತಮಗೆ ಈ ಹುದ್ದೆಯ ಅವಕಾಶ ಬೇಡ ಎಂದು ಸಿಕ್ರಿ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ.

ಕೇಂದ್ರಕ್ಕೆ ನೆರವಾಗಿದ್ದ ಸಿಕ್ರಿ
ಅಲೋಕ್ ವರ್ಮಾ ಅವರನ್ನು ನಿರ್ದೇಶಕರ ಸ್ಥಾನದಿಂದ ವಜಾಗೊಳಿಸುವ ನಿರ್ಧಾರದಲ್ಲಿ ಸಿಕ್ರಿ ಅವರ ಮತ ನಿರ್ಣಾಯಕವಾಗಿತ್ತು.
ವರ್ಮಾ ಅವರನ್ನು ವಜಾಗೊಳಿಸಲು ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಸರ್ಕಾರದ ಪದಚ್ಯುತಿ ಕ್ರಮಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದ ಅಲೋಕ್ ವರ್ಮಾರನ್ನು ಹುದ್ದೆಯಿಂದ ವಜಾಗೊಳಿಸಿ ನ್ಯಾ. ಸಿಕ್ರಿ ಕೇಂದ್ರಕ್ಕೆ ನೆರವಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಲೋಕ್ ವರ್ಮಾ ಅವರ ವಜಾ ಪರವಾಗಿ ಮತ ಚಲಾಯಿಸಿದ್ದ ಸಿಕ್ರಿ ಅವರಿಗೆ ಕೇಂದ್ರ ಸರ್ಕಾರ ಇಂತಹ ಆಫರ್ ನೀಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
|
ಪ್ರಧಾನಿಯಲ್ಲಿ ಭಯ: ರಾಹುಲ್ ಟೀಕೆ
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನ್ಯಾಯದ ಮಾನದಂಡವನ್ನು ಹಾಳುಗೆಡವಿದಾಗ ಅರಾಜಕತೆ ಸೃಷ್ಟಿಯಾಗುತ್ತದೆ. ಈ ಪ್ರಧಾನಿ ಯಾವುದಕ್ಕೂ ನಿಲ್ಲಿಸುತ್ತಿಲ್ಲ. ರಫೇಲ್ ಹಗರಣವನ್ನು ಮುಚ್ಚಿ ಹಾಕಲು ಯಾವುದನ್ನು ಬೇಕಾದರೂ ಮುರಿಯುತ್ತಾರೆ ಎಲ್ಲವನ್ನೂ ನಾಶಪಡಿಸುತ್ತಾರೆ. ಅವರು ಭಯದಿಂದ ಇದ್ದಾರೆ. ಆ ಭಯವೇ ಅವರನ್ನು ಭ್ರಷ್ಟರನ್ನಾಗಿಸಿದೆ ಮತ್ತು ಪ್ರಮುಖ ಸಂಸ್ಥೆಗಳನ್ನು ನಾಶಪಡಿಸುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications