ಸಿದ್ದಿಕ್ ಕಪ್ಪನ್ ಬಿಡುಗಡೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಪತ್ರಕರ್ತರ ಪ್ರತಿಭಟನೆ
ನವದೆಹಲಿ, ಅಕ್ಟೋಬರ್ 06: ಉತ್ತರ ಪ್ರದೇಶದ ಪೊಲೀಸರು ಭಯೋತ್ಪಾದಕ ಕೃತ್ಯದ ಆರೋಪದಲ್ಲಿ ಬಂಧನ ಮಾಡಿರುವ ಕೇರಳ ಪತ್ರಕರ್ತ ಸಿದ್ಧಿಕ್ ಕಪ್ಪನ್ರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದ (ಪಿಸಿಐ) ಪತ್ರಕರ್ತರು ನವದೆಹಲಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ವರ್ಷ ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ರನ್ನು ಉತ್ತರ ಪ್ರದೇಶ ಪೊಲೀಸರು ಬಂಧನ ಮಾಡಿದ್ದು, ಈಗ ಭಯೋತ್ಪಾದಕ ಕೃತ್ಯದ ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದ (ಪಿಸಿಐ) ಪತ್ರಕರ್ತರು ಸಿದ್ಧಿಕ್ ಕಪ್ಪನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. "ಪತ್ರಕರ್ತ ಸಿದ್ಧಿಕ್ ಕಪ್ಪನ್ ಜೈಲಿನಲ್ಲಿ ಇದ್ದು ಒಂದು ವರ್ಷ ಆದ ಹಿನ್ನೆಲೆಯಲ್ಲಿ ನಾವು ಈ ಪ್ರತಿಭಟನೆಯನ್ನು ನಡೆಸಿದ್ದೇವೆ. ಅತ್ಯಾಚಾರ ಸಂತ್ರಸ್ತೆಯ ಮನೆಗೆ ಹೋಗುವುದಕ್ಕೂ ಮುನ್ನವೇ ಸಿದ್ಧಿಕ್ ಕಪ್ಪನ್ರನ್ನು ಬಂಧನ ಮಾಡಲಾಗಿದೆ. ಈವರೆಗೂ ಜೈಲಿನಲ್ಲೇ ಇದ್ದಾರೆ. ಅವರ ಬಿಡುಗಡೆಗಾಗಿ ನಾವು ಹೋರಾಟ ನಡೆಸುತ್ತೇವೆ. ಯಾವುದೇ ಘಟನೆ ನಡೆದ ಸ್ಥಳಕ್ಕೆ ಮಾಧ್ಯಮಗಳು ಹೋಗುವುದಕ್ಕೆ ಯಾವುದೇ ರೀತಿಯ ನಿಷೇಧವಿಲ್ಲ," ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾದ (ಪಿಸಿಐ) ಅಧ್ಯಕ್ಷ ಉಮಾಕಾಂತ್ ಲಖೇರ ಹೇಳಿದ್ದಾರೆ.

"ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ವರದಿ ಮಾಡುವುದಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಕಾರಣದಿಂದಾಗಿ ದಿನ ಕಳೆಯುತ್ತಿದ್ದಂತೆ ಈ ವಸ್ತುನಿಷ್ಠ ವರದಿಯು ಕಡಿಮೆ ಆಗುತ್ತಿದೆ. ಆದ್ದರಿಂದ ಪತ್ರಕರ್ತ ಸಿದ್ದಿಕ್ ಕಪ್ಪನ್ರನ್ನು ಬಿಡುಗಡೆ ಮಾಡುವಂತೆ ನಾವು ಉನ್ನತ ನ್ಯಾಯಾಲಯಕ್ಕೆ ಆಗ್ರಹ ಮಾಡುತ್ತೇವೆ. ಹಾಗೆಯೇ ಅವರ ವಿರುದ್ದದ ಪ್ರಕರಣಗಳನ್ನು ರದ್ಧು ಮಾಡಬೇಕು ಎಂದು ಉನ್ನತ ನ್ಯಾಯಾಲಯಕ್ಕೆ ಆಗ್ರಹ ಮಾಡುತ್ತೇವೆ," ಎಂದು ಕೂಡಾ ಉಮಾಕಾಂತ್ ಲಖೇರ ಉಲ್ಲೇಖ ಮಾಡಿದ್ದಾರೆ.
ಈ ಪ್ರತಿಭಟನೆಯನ್ನು ಕೇರಳದ ಪತ್ರಕರ್ತನಿರತರ ಒಕ್ಕೂಟ, ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹಾಗೂ ದೆಹಲಿ ಪತ್ರಕರ್ತರ ಸಂಘವು ಜೊತೆಯಾಗಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಹೊರಗಡೆ ನಡೆಸಿದೆ.
ಕಳೆದ ವರ್ಷ ಅಕ್ಟೋಬರ್ 5 ರಂದು ಸಿದ್ದಿಕ್ ಕಪ್ಪನ್ ಹಾಗೂ ಮೂವರನ್ನು ಮಥುರಾ ಪೊಲೀಸರು ಉತ್ತರ ಪ್ರದೇಶದ ಹತ್ರಾಸ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಂಧನ ಮಾಡಿದ್ದಾರೆ. ಹತ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೃತ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಬಂಧನವನ್ನು ಮಾಡಲಾಗಿದ್ದು, ಒಂದು ವರ್ಷವಾದರೂ ಬಿಡುಗಡೆ ಮಾಡಿಲ್ಲ.
ಈ ನಾಲ್ವರನ್ನು ಕೂಡಾ ಶಾಂತಿಗೆ ಧಕ್ಕೆ ತರುವ ಆರೋಪದಲ್ಲಿ ಬಂಧನ ಮಾಡಲಾಗಿದೆ. ಬಳಿಕ ದೇಶದ್ರೋಹ ಹಾಗೂ ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಲಾಗಿದೆ. ಈ ವಿಚಾರದಲ್ಲಿ ಮಾತನಾಡಿದ ದೆಹಲಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಸುಜಾತ ಮಾಧುಕ್, "ಕಪ್ಪನ್ ಹಾಗೂ ಇತರರನ್ನು ಬಂಧನ ಮಾಡಿ ಇಂದಿಗೆ (ಅಕ್ಟೋಬರ್ 5) ಒಂದು ವರ್ಷವಾಗಿದೆ ಎಂಬ ನಿಟ್ಟಿನಲ್ಲಿ ನಾವು ಇಲ್ಲಿ ಸೇರಿದ್ದೇವೆ. ಈ ವಿಚಾರದಲ್ಲಿ ನ್ಯಾಯಾಂಗವು ಕ್ರಮ ಕೈಗೊಳ್ಳಬೇಕು. ನೀವು ಯಾರನ್ನೇ ಆದರೂ ವಿನಾಕಾರಣ ಅನಿರ್ದಿಷ್ಟವಾಗಿ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ವಿರುದ್ದ ಉತ್ತರ ಪ್ರದೇಶ ಪೊಲೀಸರು ಸುಮಾರು 5000 ಪುಟಗಳ ಚಾರ್ಜ್ ಶೀಟ್ ಅನ್ನು ಸಿದ್ದಪಡಿಸಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ಪತ್ರಕರ್ತ ಸಿದ್ದಿಕ್ ಕಪ್ಪನ್ "ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನ ಮಾಡಿದ್ದ," ಎಂದು ಆರೋಪ ಮಾಡಿದ್ದಾರೆ. ಕಳೆದ ಎಪ್ರಿಲ್ನಲ್ಲಿ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ ಚಾರ್ಜ್ಶೀಟ್ ಅನ್ನು ಮಾಡಿದ್ದು ಅದನ್ನು ಮಥುರಾ ಕೋರ್ಟ್ನ ಮುಂದೆ ಹಾಜರುಪಡಿಸಿತ್ತು. ಆದರೆ "ಈವರೆಗೂ ಸಿದ್ದಿಕ್ ಕಪ್ಪನ್ ಆಗಲಿ, ಅವರ ಕಾನೂನು ಪ್ರತಿನಿಧಿ ಅಥವಾ ವಕೀಲರಿಗೆ ಆಗಲಿ ನೀಡಿಲ್ಲ," ಎಂದು ಸಿದ್ದಿಕ್ ಕಪ್ಪನ್ ಪರ ವಕೀಲರು ವಾದ ಮಾಡಿದ್ದಾರೆ.
ಸಿದ್ದಿಕ್ ಕಪ್ಪನ್ ಬರೆದಿರುವ ಸುಮಾರು 36 ಲೇಖನಗಳು ಯೋಗಿ ಸರ್ಕಾರ ಬ್ಯಾನ್ ಮಾಡಲು ಯೋಜಿಸುತ್ತಿರುವ ಪಿಎಫ್ಐ ಅಥವಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಲಿಂಕ್ ಅನ್ನು ಹೊಂದಿದೆ ಎಂದು ಕೂಡಾ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಈ ಪೈಕಿ 2019 ರಲ್ಲಿ ಸರ್ಕಾರ ಜಾರಿ ಮಾಡಿದ ಪೌರತ್ವ ಕಾನೂನಿನ ವಿರುದ್ದದ ಪ್ರತಿಭಟನೆಯದ್ದು ಆಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications