ನಮ್ಮ ಮೇಲೆ ನಡೆದದ್ದು ಸಂಘಟಿತ ದಾಳಿ: ಜೆಎನ್ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆರೋಪ
ನವದೆಹಲಿ, ಜನವರಿ 6: ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ರಾತ್ರಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಷ್ ಘೋಶ್, ಅದು ಸಂಘಟಿತ ದಾಳಿ ಎಂದು ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಷ್ ಘೋಶ್, 'ಇದು ಒಂದು ಸಂಘಟಿತ ದಾಳಿಯಾಗಿದೆ. ಅವರು ಒಬ್ಬೊಬ್ಬರನ್ನೇ ಹುಡುಕಿ ದಾಳಿ ನಡೆಸುತ್ತಿದ್ದರು' ಎಂದು ಆರೋಪಿಸಿದರು.
ಜೆಎನ್ಯು ಭದ್ರತೆಗೂ ದಾಳಿಕೋರರಿಗೂ ನಂಟು ಇದೆ. ಹಿಂಸಾಚಾರ ನಡೆಯುವಾಗ ಅವರು ತಡೆಯಲು ಪ್ರಯತ್ನವನ್ನೇ ಮಾಡಲಿಲ್ಲ. ಕಳೆದ 4-5 ದಿನಗಳಿಂದ ಆರೆಸ್ಸೆಸ್ ನಂಟು ಹೊಂದಿರುವ ಪ್ರೊಫೆಸರ್ಗಳು ನಮ್ಮ ಚಳವಳಿಯನ್ನು ತಡೆಯಲು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದರು. ಜೆಎನ್ಯು ಮತ್ತು ದೆಹಲಿ ಪೊಲೀಸರಿಂದ ನಾವು ರಕ್ಷಣೆ ಕೋರುವುದೇ ತಪ್ಪಾ? ಎಂದು ಪ್ರಶ್ನಿಸಿದರು.

ಜೆಎನ್ಯು ಉಪ ಕುಲಪತಿಯ ರಾಜೀನಾಮೆಗೆ ಆಗ್ರಹಿಸಿದ ಅವರು, ಅವರು ಅಸಮರ್ಥರಾಗಿದ್ದಾರೆ ಎಂದು ದೂರಿದರು.
ಜೆಎನ್ಯುದ ಪ್ರಜಾಪ್ರಭುತ್ವ ಸಂಸ್ಕೃತವನ್ನು ಹತ್ತಿಕ್ಕುವ ಪ್ರಯತ್ನ ಸಫಲವಾಗುವುದಿಲ್ಲ. ವಿದ್ಯಾರ್ಥಿಗಳ ಮೇಲೆ ಬಳಸುವ ಪ್ರತಿ ಕಬ್ಬಿಣದ ರಾಡ್ಗೆ ಪ್ರತಿಯಾಗಿ ಚರ್ಚೆ ಮತ್ತು ಸಂವಾದದಿಂದ ತಕ್ಕ ಉತ್ತರ ನೀಡಲಾಗುತ್ತದೆ. ಜೆಎನ್ಯು ಸಂಸ್ಕೃತಿಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಜೆಎನ್ಯು ತನ್ನ ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದರು.
ಅಗತ್ಯದ ಸಂದರ್ಭದಲ್ಲಿ ತಮಗೆ ಭದ್ರತೆ ಸಿಗಲಿಲ್ಲ ಎಂದು ಜೆಎನ್ಯುಎಸ್ಯು ಉಪಾಧ್ಯಕ್ಷ ಸಾಕೇತ್ ಮೂನ್ ಆರೋಪಿಸಿದರು. 'ಮೊದಲು ದೆಹಲಿ ಪೊಲೀಸರಿಗೆ ಎರಡು ಗಂಟೆ ಕರೆ ಮಾಡಿದೆವು. ಆದರೆ ಅವರಿಂದ ಯಾವ ಸಹಾಯವೂ ಸಿಗಲಿಲ್ಲ' ಎಂದು ಹೇಳಿದರು.












Click it and Unblock the Notifications