"ಜೆಎನ್ ಯು ಹಿಂಸಾಚಾರದ ಹಿಂದೆ ಎಡಪಂಥೀಯ ವಿದ್ಯಾರ್ಥಿಗಳ ಕೈವಾಡ"
ನವದೆಹಲಿ, ಜನವರಿ.10: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಹಿಂದೆ ಎಡಪಂಥೀಯ ವಿದ್ಯಾರ್ಥಿಗಳ ಕೈವಾಡವಿರುವ ಶಂಕೆಯಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.
ಇಂದು ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಗಮಿಸಿದಾಗ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಜೆಎನ್ ಯುನಲ್ಲಿ ಹಿಂಸಾಚಾರವನ್ನು ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಜಾವ್ಡೇಕರ್ ಆರೋಪಿಸಿದ್ದಾರೆ.
ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ
ಇಷ್ಟುದಿನ ಭಾರತೀಯ ಜನತಾ ಪಕ್ಷ ಹಾಗೂ ಎಬಿವಿಸಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳ ವಿರುದ್ಧ ಬೊಟ್ಟು ಮಾಡಿ ತೋರಿಸಲಾಗುತ್ತಿತ್ತು. ಆದರೆ, ಇದೆಲ್ಲ ಎಡಪಂಥೀಯ ಸಂಘಟನೆಗಳ ಪೂರ್ವನಿಯೋಜಿತ ಹಿಂಸಾಚಾರ ಎಂದು ಜಾವ್ಡೇಕರ್ ದೂರಿದ್ದಾರೆ.
ಹಿಂಸಾಚಾರಕ್ಕೂ ಮೊದಲೇ ದಾಖಲೆ ನಾಶ ಯತ್ನ:
ಜನವರಿ.05ರಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ನಡೆಸಲು ಮೊದಲೇ ಸಂಚು ರೂಪಿಸಲಾಗಿತ್ತು. ಹೀಗಾಗಿ ವಿವಿಯಲ್ಲಿನ ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಲಾಗಿದೆ. ಸಾಕ್ಷ್ಯ ಸಿಗದಂತೆ ಮಾಡಲು ಮೊದಲೇ ಇಂಟರ್ ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ಗುಡುಗಿದ ಜಾವ್ಡೇಕರ್:
ಇನ್ನು, ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧವೂ ಸಚಿವ ಪ್ರಕಾಶ್ ಜಾವ್ಡೇಕರ್ ಕಿಡಿ ಕಾರಿದ್ದಾರೆ. ಜೆಎನ್ ಯು ಹಿಂಸಾಚಾರ ಪ್ರಕರಣದಲ್ಲಿ ಸುಖಾಸುಮ್ಮನೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆದು ತಂದಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.