ಜೆಎನ್ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾ
ನವದೆಹಲಿ, ಜನವರಿ 06 : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ರಾತ್ರಿ ಗಲಭೆ ನಡೆದಿದೆ. ಮುಸುಕು ಧಾರಿಗಳು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಘಟನೆ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಅವರು ಸೂಚನೆ ನೀಡಿದ್ದಾರೆ. ಜೆಎನ್ಯುಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸೋಮವಾರದ ಕಾರ್ಯಕ್ರಮಗಳು; ಜೆಎನ್ಯುನತ್ತ ಎಲ್ಲರ ಚಿತ್ತ
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ದೊಣ್ಣೆ, ರಾಡ್ ಹಿಡಿದು ವಿಶ್ವವಿದ್ಯಾಲಯ ಆವರಣಕ್ಕೆ ನುಗ್ಗಿದ ಗುಂಪು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?
ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್ ಘೋಷ್ ಮತ್ತು ಇತರ ವಿದ್ಯಾರ್ಥಿಗಳು ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?
ಜೆಎನ್ಯುಗೆ ಬಿಗಿ ಪೊಲೀಸ್ ಭದ್ರತೆ
ಜೆಎನ್ಯುನಲ್ಲಿ ವಿದ್ಯಾರ್ಥಿಗಳ ಹಲ್ಲೆ ನಡೆದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿವಿ ಆವರಣದ ಪ್ರಸ್ತುತ ಪರಿಸ್ಥಿತಿ ಬಗ್ಗೆ ತಕ್ಷಣ ವರದಿ ನೀಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜೆಎನ್ಯು ರಿಜಿಸ್ಟ್ರಾರ್ಗೆ ಸೂಚನೆ ನೀಡಿತು. ಗೃಹ ಸಚಿವ ಅಮಿತ್ ಶಾ ಸಹ ವರದಿ ಕೇಳಿದರು. ಪ್ರಸ್ತುತ ವಿವಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಎಬಿವಿಪಿ ವಿರುದ್ಧ ಆರೋಪ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹೊರಗಿನಿಂದ ಬಂದವರು ಎಬಿವಿಪಿಗೆ ನೆರವು ನೀಡಿದ್ದಾರೆ ಎಂಬುದು ಆರೋಪ. ಎಡಪಕ್ಷದ ವಿದ್ಯಾರ್ಥಿಗಳನ್ನು ಗುರುತಿಸಿ, ಹಲ್ಲೆ ಮಾಡಿ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಕೆಲವು ಪ್ರಾಧ್ಯಪಕರ ಮೇಲೂ ಹಲ್ಲೆ ನಡೆಸಲಾಗಿದೆ.
ಸಾಮಾಜಿಕ ತಾಲತಾಣದಲ್ಲಿ ವೈರಲ್
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕೈಯಲ್ಲಿ ದೊಣ್ಣೆ, ರಾಡ್ ಹಿಡಿದು ಜೆಎನ್ಯು ಆವರಣದಲ್ಲಿ ಮೂವರು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 20ಕ್ಕೂ ಅಧಿಕ ಜನರು ಗುಂಪು ವಿವಿ ಆವರಣಕ್ಕೆ ನುಗ್ಗಿತ್ತು ಎಂದು ಆರೋಪಿಸಲಾಗುತ್ತಿದೆ. ಇವರು ಯಾರು? ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.
ಎಬಿಪಿಪಿ ಆರೋಪ
ಜೆಎನ್ಯುನಲ್ಲಿ ಎಡಪಂಥೀಯ ಒಲವಿನ ವಿದ್ಯಾರ್ಥಿ ಸಂಘನೆಯ ಸದಸ್ಯರು ತಮ್ಮ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಸಹ ದೂರಿದೆ. ತಮ್ಮ ಸಂಘಟನೆಯ 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 11 ಜನರು ನಾಪತ್ತೆಯಾಗಿದ್ದಾರೆ ಎಂದು ಎಡಪಂಥೀಯ ಗೂಂಡಾಗಳು ಹಾಸ್ಟೆಲ್ನಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.