ಜಯಾ ಸಾವಿನ ತನಿಖೆಗೆ ಸುಪ್ರೀಂಗೆ ದೂರಿತ್ತ ಸಂಘಟನೆ
ನವದೆಹಲಿ, ಡಿಸೆಂಬರ್ 15: ತಮಿಳುನಾಡಿನ ಅಮ್ಮ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವು ನಿಗೂಢವಾಗಿದೆ. ಸಾವಿನ ಕುರಿತು ತನಿಖೆಗಾಗಿ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಾಗಿದೆ.
ಜಯಲಲಿತಾ ಸಾವಿನ ಕೊನೆಯದಿನಗಳು, ಹಾಗು ಸಾವು ಹಲವು ಅನುಮಾನಗಳನ್ನು ಉಂಟುಮಾಡಿದ್ದು, ವೈದ್ಯಕೀಯ ದಾಖಲೆಗಳ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅರ್ಜಿಯೊಂದನ್ನು ತಮಿಳುನಾಡು ತೆಲುಗು ಯುವ ಶಕ್ತಿ ಎಂಬ ಸಂಘಟನೆ ಸುಪ್ರೀಂನಲ್ಲಿ ದಾಖಲಿಸಿದೆ.[ಜಯಲಲಿತಾ ಸಾವು: ತನಿಖೆಗಾಗಿ ಪ್ರಧಾನಿಗೆ ನಟಿ ಗೌತಮಿ ಪತ್ರ]

ಜಯಲಲಿತಾ ಅವರ ಚಿಕಿತ್ಸೆ, ಸಾವು ಮತ್ತು ಕೊನೆಯ 72 ದಿನಗಳಲ್ಲಿ ನಡೆದ ಹಲವು ವಿಚಾರಗಳನ್ನು ಗೋಪ್ಯವಾಗಿ ಇರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಯಾ ಆಪ್ತ ವರ್ಗ, ಸಂಬಂಧಿಕರು, ಗಣ್ಯರು ವ್ಯಕ್ತಪಡಿಸಿರುವ ಸಂಶಯಗಳ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಜಯಾ ಅವರಿಗೆ ನೀಡಲಾದ ಚಿಕಿತ್ಸೆಯ ದಾಖಲೆಯನ್ನು ಬಹಿರಂಗ ಪಡಿಸುವಂತೆ ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಸಂಘಟನೆ ವಿನಂತಿ ಮಾಡಿದೆ.[ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ಕಥೆ ಏನು?]
ದೂರಿನಲ್ಲಿ ಈ ಅರ್ಜಿ ಇತ್ಯರ್ಥವಾಗುವವರೆಗೆ ಮತ್ತು ಜಯಲಲಿತಾ ವಿರುದ್ಧ ಆಕ್ರಮ ಆಸ್ತಿ ಆರೋಪದ ತೀರ್ಪು ಬರುವವರೆಗೆ ಅವರ ಎಲ್ಲ ಆಸ್ತಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ಶಕ್ತಿ ಸಂಘಟನೆ ಮನವಿ ಮಾಡಿದೆ.

ಈ ಹಿಂದೆ ನಟಿ ಗೌತಮಿಯವರು ಜಯಾ ಸಾವಿನ ಹಿಂದೆ ಅಡಗಿರುವ ಸತ್ಯಾಂಶವನ್ನು ಬಯಲುಮಾಡುವಂತೆ ಪ್ರಧಾನಿ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದರು.












Click it and Unblock the Notifications