ಹನುಮ ಜಯಂತಿಯ ಮೆರವಣಿಗೆ ವೇಳೆ ಹಿಂಸಾಚಾರ ಪ್ರಕರಣದಲ್ಲಿ ಮೂವರ ಬಂಧನ
ದೆಹಲಿ ಮೇ 8: ಕಳೆದ ಏಪ್ರಿಲ್ 16 ರಂದು ಹನುಮ ಜಯಂತಿಯ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಜಹಾಂಗೀರ್ಪುರಿ ಹಿಂಸಾಚಾರ ಪ್ರಕರಣದ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇದರೊಂದಿಗೆ ಇದುವರೆಗೆ ಪೊಲೀಸರಿಂದ ಮೂವರು ಬಾಲಾಪರಾಧಿಗಳು ಸೇರಿದಂತೆ 36 ಜನರನ್ನು ಬಂಧಿಸಲಾಗಿದೆ.
ಜಹೀರ್ ಖಾನ್ ಅಲಿಯಾಸ್ ಜಲೀಲ್ (48) ಮತ್ತು ಅನಾಬುಲ್ ಅಲಿಯಾಸ್ ಶೇಖ್ (32) ಅವರನ್ನು ಶುಕ್ರವಾರ ಜಹಾಂಗೀರ್ಪುರಿಯಿಂದ ಬಂಧಿಸಲಾಗಿದ್ದರೆ, ಮೂರನೇ ಆರೋಪಿ ತಬ್ರೇಜ್ (40) ಅವರನ್ನು ಶನಿವಾರ ಅದೇ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯ ದಿನದಿಂದ ಜಹೀರ್ ಖಾನ್ ಮತ್ತು ಅನಾಬುಲ್ ಇಬ್ಬರೂ ತಲೆಮರೆಸಿಕೊಂಡಿದ್ದರು. ಸಿಸಿಟಿವಿ ದೃಶ್ಯಗಳ ಮೂಲಕ ಅವರನ್ನು ಗುರುತಿಸಿ, ಇಬ್ಬರೂ ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಆರೋಪಿಸಿ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಇವರನ್ನು ಬಂಧಿಸಲಾಗಿದೆ.

ಘಟನೆಯ ಬಳಿಕೆ ಇಬ್ಬರು ಆರೋಪಿಗಳು ತಮ್ಮ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಜೊತೆಗೆ ಅವರ ಸ್ಥಳಗಳನ್ನು ಹಲವು ಬಾರಿ ಬದಲಾಯಿಸಿದ್ದರು. ಅವರು ತಮ್ಮ ಮನೆಗಳಿಗೆ ಹಿಂದಿರುಗಿದಾಗ ಜಹಾಂಗೀರ್ಪುರಿಯಲ್ಲಿ ಅವರನ್ನು ಪತ್ತೆಹಚ್ಚಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲೀಲ್ ಘನಟೆ ವೇಳೆ ಪಿಸ್ತೂಲ್ ಝಳಪಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದ್ದು, ಆತ ಗುಂಡು ಹಾರಿಸಿದನೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನೂ ಅನಾಬುಲ್ ಘರ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ತಬ್ರೇಜ್ ಕೂಡ ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತಾಂತ್ರಿಕ ಪುರಾವೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಇವರನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್ 16 ರಂದು ರಾಷ್ಟ್ರ ರಾಜಧಾನಿಯ ಜಹಾಂಗೀರ್ಪುರಿಯಲ್ಲಿ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು, ಎಂಟು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಗಾಯಗೊಂಡಿದ್ದಾರೆ.












Click it and Unblock the Notifications