ಮಧ್ಯಾಹ್ನ 2 ಗಂಟೆಗೆ ಕೋರ್ಟ್ಗೆ ಚಿದಂಬರಂ ಹಾಜರು
ನವದೆಹಲಿ, ಆಗಸ್ಟ್ 22: ಐಎನ್ಎಕ್ಸ್ ಮೀಡಿಯಾ ಹಗರಣದ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಲಿದೆ.
ಬುಧವಾರ ರಾತ್ರಿಯಿಡೀ ಸಿಬಿಐ ಕೇಂದ್ರ ಕಚೇರಿಯಲ್ಲಿ ಕಳೆದ ಚಿದಂಬರಂ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಜತೆಗೆ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಿದಂಬರಂ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡಿವಂತೆ ಅವರನ್ನು ತಮ್ಮ ವಶಕ್ಕೆ ನೀಡಲು ಸಿಬಿಐ ಅಧಿಕಾರಿಗಳು ಕೋರಲಿದ್ದಾರೆ.

ಚಿದಂಬರಂ ಅವರನ್ನು ವಿಚಾರಣೆ ನಡೆಸಲು ಕನಿಷ್ಠ ಮೂರು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಕೋರಲಿದೆ. ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ ಚಿದಂಬರಂ ಅವರ ವಕೀಲರು ಅವರ ಜಾಮೀನು ಅರ್ಜಿಗಾಗಿ ವಾದ ಮಂಡಿಸಲಿದ್ದಾರೆ. ಒಂದು ವೇಳೆ ಸುಪ್ರೀಂಕೋರ್ಟ್ ಚಿದಂಬರಂ ಅವರ ಪರವಾಗಿ ಒಲವು ತೋರಿ ಅವರಿಗೆ ಜಾಮೀನು ಮಂಜೂರು ಮಾಡಿದರೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ.
ಆದರೆ, ಸಿಬಿಐ ನ್ಯಾಯಾಲಯವು ಅವರ ವಶವನ್ನು ವಿಸ್ತರಿಸಲು ಒಪ್ಪಿಕೊಂಡರೆ ಚಿದಂಬರಂ ಅವರು ಸಿಬಿಐ ಲಾಕಪ್ನಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂದು ಸಿಬಿಐನ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ತನಿಖಾ ಸಂಸ್ಥೆಗಳಿಗೆ ತಮ್ಮ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲು ಗರಿಷ್ಠ 10 ದಿನಗಳ ಅವಕಾಶ ನೀಡಲಾಗುತ್ತದೆ. 10 ದಿನಗಳ ವಿಚಾರಣಾ ಅವಧಿ ಪೂರ್ಣಗೊಂಡ ಬಳಿಕ ಕೆಲವೊಂದು ಸಂದರ್ಭಗಳಲ್ಲಿ ಸಂಸ್ಥೆಗಳು 14 ದಿನಗಳ ಹೆಚ್ಚಿನ ನ್ಯಾಯಾಂಗ ಬಂಧನಕ್ಕೆ ಕೋರಬಹುದು.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಕಳೆದ ವರ್ಷದ ಏಪ್ರಿಲ್ನಲ್ಲಿ 23 ದಿನ ಸಿಬಿಐ ಮತ್ತು ನ್ಯಾಯಾಂಗ ಬಂಧನದಲ್ಲಿದ್ದರು.












Click it and Unblock the Notifications