ಐಎನ್ಎಕ್ಸ್ ಮೀಡಿಯಾ ಹಗರಣ: ಇ.ಡಿಗೆ ನೋಟಿಸ್
ನವದೆಹಲಿ, ಜುಲೈ 24: ಐಎನ್ಎಕ್ಸ್ ಮೀಡಿಯಾ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಕೋರ್ಟ್ ನೋಟಿಸ್ ನೀಡಿದೆ.
ಪಿ.ಚಿದಂಬರಂ ಅರ್ಜಿ ಆಧರಿಸಿ ಕೋರ್ಟ್ ನೋಟಿಸ್ ನೀಡಿದೆ. ದಾಖಲೆಗಳ ಪುಟಸಂಖ್ಯೆಗಳ ಗೊಂದಲ ಬಗೆಹರಿಸಬೇಕು, ನಾಪತ್ತೆಯಾಗಿರುವ ದಾಖಲೆಗಳನ್ನು ಹಾಜರುಪಡಿಸಬೇಕು ಎಂದೂ ಇ.ಡಿಗೆ ಸೂಚಿಸಲಾಗಿದೆ.
ವಿಶೇಷ ನ್ಯಾಯಾಧೀಶರಾದ ಎಂ.ಕೆ. ನಾಗಪಾಲ್ ಅವರು, ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಚಿದಂಬರಂ ಪರವಾಗಿ ವಕೀಲ ಅರ್ಶ್ ದೀಪ್ ಸಿಂಗ್ ಖುರಾನಾ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ಸಂಬಂಧ ಚಿದಂಬರಂ ಅವರನ್ನು ಆಗಸ್ಟ್ 21, 2009ರಂದು ಸಿಬಿಐ ಬಂಧಿಸಿದ್ದು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅದೇ ವರ್ಷ ಅಕ್ಟೋಬರ್ 16ರಂದು ಇ.ಡಿ ಬಂಧಿಸಿತ್ತು.
ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿ, ಪೂರಕ ದಾಖಲೆಗಳನ್ನು ಹಾಜರುಪಡಿಸಲು ಇ.ಡಿಗೆ ಸೂಚಿಸಬೇಕು ಎಂದು ಅವರು ಕೋರಿದ್ದರು.
ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ, ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯು 305 ರೂ ಕೋಟಿ ವಿದೇಶಿ ಹೂಡಿಕೆಯನ್ನು ಸ್ವೀಕರಿಸಲು ಐಎನ್ಎಕ್ಸ್ ಮೀಡಿಯಾಕ್ಕೆ ಅನುಮತಿ ನೀಡಿತ್ತು.
ಈ ರೀತಿ ಅನುಮತಿ ನೀಡುವ ವೇಳೆ ಭಾರಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮೇ 15 2017ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ನಂತರ, ಜಾರಿ ನಿರ್ದೇಶನಾಲಯವು (ಇ.ಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿತು.












Click it and Unblock the Notifications