ರಾಹುಲ್ ನಾಯಕತ್ವ ನಕ್ಕೋ ನಕ್ಕೋ ಎನ್ನುತ್ತಿರುವ ಕಾಂಗ್ರೆಸ್ಸಿಗರು
ಕಾಂಗ್ರೆಸ್ ನಾಯಕತ್ವದಿಂದ ರಾಹುಲ್ ಗಾಂಧಿ ಕೆಳಗಿಳಿಯಬೇಕು ಎಂಬ ಧ್ವನಿ ದೊಡ್ಡದಾಗಿ ಕೇಳಿಬರುತ್ತಿದೆ. ಮಣಿಪುರ, ಗೋವಾದಲ್ಲಿ ಅಧಿಕಾರ ಹಿಡಿಯುವ ಅವಕಾಶ ಕೈ ಚೆಲ್ಲಿದ ಬಗ್ಗೆ ಕೂಡ ಆಯಾ ರಾಜ್ಯದಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿದೆ
ನವದೆಹಲಿ, ಮಾರ್ಚ್ 14: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಕಾಂಗ್ರೆಸ್ ನೊಳಗೆ ಪ್ರಶ್ನಿಸಲಾಗುತ್ತಿದೆ. ಗೋವಾದಲ್ಲಂತೂ ಶಾಸಕರು ಪಕ್ಷದಲ್ಲಿನ ಹಿರಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಇತರರ ಬೆಂಬಲ ಪಡೆದು, ಸರಕಾರ ರಚಿಸಲು ಪಕ್ಷ ವಿಫಲವಾದ ರೀತಿಗೆ ಯಾರ ಹೆಸರೂ ಹೇಳದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರಂತೂ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸುವ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು ಎನ್ನುತ್ತಿದ್ದಾರೆ. ಉತ್ತರಾಖಂಡ ಹಾಗೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ನೆಲ ಕಚ್ಚಿದೆ. ಇದರಿಂದ ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ನಿರಾಸೆ ಮೂಡಿದೆ. ಇನ್ನು ಮಣಿಪುರ ಹಾಗೂ ಗೋವಾದಲ್ಲಿ ಇತರ ಪಕ್ಷ ಹಾಗೂ ಶಾಸಕರ ಬೆಂಬಲ ಒಟ್ಟುಗೂಡಿಸುವಲ್ಲಿ ವಿಫಲವಾದ ರೀತಿಗಂತೂ ಭಾರೀ ಅಸಮಾಧಾನ ವ್ಯಕ್ತವಾಗಿದೆ.[2019ರ ಲೋಕಸಭೆ ಚುನಾವಣೆಯಲ್ಲಿ ಮೋದಿಯೇ ಫೇವರಿಟ್]
ಈ ಎಲ್ಲ ಕಾರಣಗಳಿಂದ ಪಕ್ಷದೊಳಗೆ ಆಂತರಿಕ ಕಚ್ಚಾಟ ಶುರುವಾಗಿದೆ. ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ರಾಹುಲ್ ಗಾಂಧಿ ಪಕ್ಷದ ನಾಯಕತ್ವದಲ್ಲಿ ಮುಂದುವರಿಯಬೇಕೇ ಎಂದು ಟಿವಿ ಚಾನಲ್ ವೊಂದರ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಸತ್ಯವ್ರತ ಚತುರ್ವೇದಿ, "ರಾಹುಲ್ ಗಾಂಧಿ ಅವರು ಪಕ್ಷಕ್ಕಾಗಿ ಸ್ವತಃ ನಿರ್ಧಾರ ಕೈಗೊಳ್ಳಬೇಕು" ಎಂದಿದ್ದಾರೆ.[ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]
ರಾಹುಲ್ ಗಾಂಧಿ ಪ್ರತಿಕ್ರಿಯಿಸಲಿ
ಪಕ್ಷದೊಳಗಿನ ಆಂತರಿಕ ಕಚ್ಚಾಟ ಹಾಗೂ ನಾಯಕತ್ವದ ಬಗ್ಗೆ ಏಳುತ್ತಿರುವ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಅವರೇ ಪ್ರತಿಕ್ರಿಯಿಸಬೇಕು ಎಂದು ಚತುರ್ವೇದಿ ಹೇಳಿದ್ದಾರೆ. 2014ರ ಲೋಕಸಭೆ ಚುನಾವಣೆಯ ವೈಫಲ್ಯವನ್ನು ರಾಹುಲ್ ಗಾಂಧಿ ಜತೆಗೆ ಸೋನಿಯಾ ಗಾಂಧಿ ಅವರು ಕೂಡ ಹೊತ್ತುಕೊಂಡರು.
ಪತ್ರಿಕಾಗೋಷ್ಠಿಯಲ್ಲೂ ಕಾಣಿಸಿಕೊಳ್ಳಲಿಲ್ಲ
ಆದರೆ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸಾರ್ವಜನಿಕವಾಗಿ ರಾಹುಲ್ ಕಾಣಿಸಿಕೊಂಡೇ ಇಲ್ಲ. ಅಖಿಲೇಶ್ ಯಾದವ್ ಜತೆಗೆ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ಗಾಂಧಿ, ಫಲಿತಾಂಶ ಬಂದ ನಂತರ ಸೋಲಿನ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಯಾದವ್ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲೂ ಕಾಣಿಸಿಕೊಳ್ಳಲಿಲ್ಲ.
ಕಾರ್ಯಕರ್ತರ ಪಾಲಿಗೆ ಸ್ಪಷ್ಟ ಸಂದೇಶ
ಕಾಂಗ್ರೆಸ್ ಪಾಲಿಗೆ ದೊಡ್ಡ ಮಟ್ಟದ ನಷ್ಟವಾಗಿದೆ. ಈ ಸನ್ನಿವೇಶ ಪಕ್ಷದ ಕಾರ್ಯಕರ್ತರ ಪಾಲಿಗೆ ಸ್ಪಷ್ಟ ಸಂದೇಶದಂತಿದೆ. ಇನ್ನು ಒಂದೆರಡು ವರ್ಷದಲ್ಲಿ ಚುನಾವಣೆ ಎದುರಾಗುವ ರಾಜ್ಯಗಳ ಪಾಲಿಗೆ ಇದು ಪಾಠದಂತೆ ಇದ್ದು, ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಗೊತ್ತಾಗಬೇಕಿದೆ.
ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಜಯ
ಇನ್ನು ಮಂಗಳವಾರ ಚುನಾವಣೆ ಸೋಲಿನ ಬಗ್ಗೆ ಮಾತನಾಡಿರುವ ರಾಹುಲ್, ಉತ್ತರಾಖಂಡ್ ಹಾಗೂ ಉತ್ತರಪ್ರದೇಶದಲ್ಲಿನ ಹೀನಾಯ ಸೋಲಿನ ಜವಾಬ್ದಾರಿ ಹೊರಲು ನಿರಾಕರಿಸಿದ್ದಾರೆ. ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಜಯ ಗಳಿಸಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜತೆ ನಮ್ಮ ಹೋರಾಟ ಸೈದ್ಧಾಂತಿಕವಾದದ್ದು
ಬಿಜೆಪಿ ಜತೆಗಿನ ನಮ್ಮ ಹೋರಾಟ ಸೈದ್ಧಾಂತಿಕವಾದದ್ದು. ನಾವು ಪಂಜಾಬ್, ಗೋವಾ ಹಾಗೂ ಮಣಿಪುರದಲ್ಲಿ ಗೆದ್ದಿದ್ದೇವೆ. ಅದು ಕೆಟ್ಟ ಫಲಿತಾಂಶವೇನಲ್ಲ ಎಂದಿದ್ದಾರೆ. ಗೋವಾ, ಮಣಿಪುರದಲ್ಲಿ ಬೆಂಬಲ ಕಲೆ ಹಾಕುವಲ್ಲಿ ಕಾಂಗ್ರೆಸ್ ನಿಧಾನ ಮಾಡಿತೇ ಎಂಬ ಪ್ರಶ್ನೆಗೆ, ಇಲ್ಲ ಎಂಬ ಉತ್ತರ ನೀಡಿದ್ದಾರೆ.
ಬಿಜೆಪಿ ಎಷ್ಟು ಹಣ ಖರ್ಚು ಮಾಡಿದೆ
ನಾವು ಕಾಂಗ್ರೆಸ್ ನಲ ಸ್ವರೂಪ ಹಾಗೂ ಸಂಘಟನೆಯಲ್ಲಿ ಕೆಲ ಬದಲಾವಣೆ ಮಾಡಬೇಕು. ಗೋವಾ ಹಾಗೂ ಮಣಿಪುರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಎಷ್ಟು ಹಣ ಖರ್ಚು ಮಾಡಿದೆ ಎಂದು ರಾಹುಲ್ ಪ್ರಶ್ನೆ ಮಾಡಿದರು. ಗೋವಾದಲ್ಲಿ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ.