ವಿದೇಶದಿಂದ ಬರುವ ಭಾರತೀಯರ ಟಿಕೆಟ್ ಲೆಕ್ಕಾಚಾರ: ಸರ್ಕಾರ ಹೇಳಿದ್ದೇನು?
ದೆಹಲಿ, ಮೇ 5: ಕೊರೊನಾ ವೈರಸ್ ಲಾಕ್ಡೌನ್ನಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಬಹುದೊಡ್ಡ ಏರ್ಲಿಫ್ಟ್ಗೆ ಮುಂದಾಗಿದೆ. ವಿದೇಶದಲ್ಲಿರುವ ಸುಮಾರು 2 ಲಕ್ಷ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಅಂದಾಜಿದೆ.
ಇದರ ಮೊದಲನೇ ಹಂತವಾಗಿ ಸುಮಾರು 13 ದೇಶಗಳಿಂದ 14 ಸಾವಿರ ಭಾರತೀಯರನ್ನು ವಿಮಾನದಲ್ಲಿ ವಾಪಸ್ ಕರೆಸಿಕೊಳ್ಳುವ ಸಿದ್ಧತೆ ನಡೆದಿದೆ. ಇಷ್ಟು ದೊಡ್ಡ ಆಪರೇಷನ್ಗಾಗಿ ಕೇಂದ್ರ ಸರ್ಕಾರ ಎಷ್ಟು ಕೋಟಿ ಖರ್ಚು ಮಾಡುತ್ತಿದೆ, ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರ ಟಿಕೆಟ್ ಶುಲ್ಕವನ್ನು ಸರ್ಕಾರವೇ ಭರಿಸುತ್ತಾ ಎಂಬ ಚರ್ಚೆ ಆಗುತ್ತಿದೆ.
ಈ ಕುರಿತು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಸ್ಪಷ್ಟನೆ ನೀಡಿದ್ದಾರೆ. ವಿದೇಶದಿಂದ ಭಾರತಕ್ಕೆ ಹಿಂತಿರುಗುವ ಎಲ್ಲರೂ ಕಡ್ಡಾಯವಾಗಿ ಕ್ವಾರೆಂಟೈನ್ಗೆ ಒಳಗಾಗಬೇಕು. ಜೊತೆಗೆ ಅವರ ಟಿಕೆಟ್ ವೆಚ್ಚ ಅವರೇ ಭರಿಸಬೇಕು ಎಂದು ತಿಳಿಸಿದ್ದಾರೆ. ಮುಂದೆ ಓದಿ...

ಟಿಕೆಟ್ ಶುಲ್ಕ ಸರ್ಕಾರ ಭರಿಸಲ್ಲ
ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರು ತಮ್ಮ ಟಿಕೆಟ್ ಶುಲ್ಕವನ್ನು ತಾವೇ ಭರಿಸಬೇಕು. ಈ ವಿಚಾರದಲ್ಲಿ ಸರ್ಕಾರದ ನೆರವು ಇಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಸ್ಪಷ್ಟಪಡಿಸಿದ್ದಾರೆ. ಲಾಕ್ಡೌನ್ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ದೇಶಕ್ಕೆ ಕರೆತರಲು ಸರ್ಕಾರ ಮುಂದಾಗಿದ್ದರಿಂದ ಟಿಕೆಟ್ ಶುಲ್ಕವನ್ನು ಸರ್ಕಾರವೇ ಭರಿಸಬಹುದು ಎಂಬ ಅನುಮಾನ ಕಾಡುತ್ತಿತ್ತು.

ಲಂಡನ್ ಟು ಬೆಂಗಳೂರಿಗೆ ಟಿಕೆಟ್ ಎಷ್ಟು?
ವಿಶೇಷ ವಿಮಾನಗಳನ್ನು ಸರ್ಕಾರ ನಿಯೋಜಿಸಿದ್ದು, ಸುಮಾರು 13 ದೇಶಗಳಿಂದ ಮೊದಲ ಹಂತದಲ್ಲಿ 14 ಸಾವಿರ ಜನರು ಭಾರತಕ್ಕೆ ಮರಳಲಿದ್ದಾರೆ. ಈ ಪೈಕಿ ಲಂಡನ್ನಿಂದ ಮುಂಬೈ, ಬೆಂಗಳೂರು ಅಥವಾ ದೆಹಲಿ ಬರುವ ಪ್ರಯಾಣಿಕರಿಗೆ 500 ಸಾವಿರ ಟಿಕೆಟ್ ಶುಲ್ಕ ಎಂದು ಸಚಿವರು ಅಂದಾಜು ತಿಳಿಸಿದ್ದಾರೆ. ಅದೇ ನೆವಾರ್ಕ್, ಚಿಕಾಗೊ ಅಥವಾ ಸ್ಯಾನ್ ಫ್ರಾನ್ಸಿಸ್ಕೊನಿಂದ ಬರುವವರಿಗೆ ಒಂದು ಲಕ್ಷ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದುಬೈ ಟು ದೆಹಲಿ
ಇನ್ನು ದುಬೈ ಮತ್ತು ಅಬುದಾಬಿಯಿಂದ ಬರುವ ಪ್ರಯಾಣಿಕರಿಗೆ ಕ್ರಮವಾಗಿ 13 ಸಾವಿರ ಮತ್ತು 15 ಸಾವಿರ ನಿಗದಿಯಾಗಿದೆ. ಸಿಂಗಾಪುರದಿಂದ ದೆಹಲಿ ಅಥವಾ ಅಹಮದಬಾದ್ಗೆ ಬರುವ ಪ್ರಯಾಣಿಕರಿಗೆ 20 ಸಾವಿರ ಹಾಗೂ ಬೆಂಗಳೂರಿಗೆ ಬರುವವರಿಗೆ 18 ಸಾವಿರ ಶುಲ್ಕ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಕ್ವಾರೆಂಟೈನ್ ಕಡ್ಡಾಯ
ಇಂಗ್ಲೆಂಡ್, ಸೌದಿ ಅರೇಬಿಯಾ, ಕತಾರ್, ಅಮೆರಿಕ, ಓಮನ್, ಬಹರೇನ್, ಕುವೈತ್, ಮಲೇಷಿಯಾ ಹಾಗೂ ಇಂಡೋನೇಷಿಯಾದಿಂದ ಭಾರತೀಯರನ್ನು ಕರೆ ತರಲಾಗುತ್ತದೆ. ಭಾರತಕ್ಕೆ ಬರುವ ಎಲ್ಲರೂ ಕಡ್ಡಾಯವಾಗಿ ಕ್ವಾರೆಂಟೈನ್ಗೆ ಒಳಪಡಿಸುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದು ಕೇಂದ್ರ ತಿಳಿಸಿದೆ. ಇವರನ್ನು ಕ್ವಾರೆಂಟೈನ್ಗೆ ಒಳಪಡಿಸುವ ವಸತಿಗೃಹ, ಹೋಟೆಲ್ ಶುಲ್ಕದ ಕುರಿತು ಕೆಲವು ಜಿಲ್ಲಾಡಳಿತ ನಿರ್ಧಾರ ತೆಗೆದುಕೊಂಡಿದೆ. ಪ್ರಯಾಣಿಕರೇ ವೆಚ್ಚ ಭರಿಸಬೇಕು ಎಂದು ಸೂಚಿಸಿದೆ.












Click it and Unblock the Notifications