'ಪಾಕ್ ರಾಷ್ಟ್ರೀಯ ದಿನಕ್ಕೆ ಭಾರತ ಪರವಾಗಿ ಯಾರೂ ಭಾಗವಹಿಸಲ್ಲ'
ನವದೆಹಲಿ, ಮಾರ್ಚ್ 21: ನವದೆಹಲಿಯಲ್ಲಿರುವ ಪಾಕಿಸ್ತಾನ ಮಿಷನ್ ನಲ್ಲಿ ಶುಕ್ರವಾರ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನ ಕಾರ್ಯಕ್ರಮಕ್ಕೆ ಯಾವುದೇ ಅಧಿಕಾರಿಗಳನ್ನು ಕಳುಹಿಸದಿರಲು ಭಾರತ ಸರಕಾರ ತೀರ್ಮಾನ ಮಾಡಿದೆ. ಈ ಕಾರ್ಯಕ್ರಮಕ್ಕೆ ಹುರಿಯತ್ ಕಾನ್ಫರೆನ್ಸ್ ನ ನಾಯಕರನ್ನು ಪಾಕಿಸ್ತಾನ ಆಹ್ವಾನಿಸಿದೆ. ಆದ್ದರಿಂದ ಭಾರತವು ಯಾವುದೇ ಅಧಿಕಾರಿಗಳನ್ನು ಕಳುಹಿಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷ ಮಾರ್ಚ್ ಇಪ್ಪತ್ಮೂರನೇ ತಾರೀಕು ಪಾಕಿಸ್ತಾನ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಪಾಕಿಸ್ತಾನ ಹೈ ಕಮಿಷನ್ ಈ ವರ್ಷ ಮಾರ್ಚ್ ಇಪ್ಪತ್ತೆರಡನೇ ತಾರೀಕು ಆಚರಿಸಲು ತೀರ್ಮಾನಿಸಿದೆ. ಈ ಕಾರ್ಯಕ್ರಮಕ್ಕೆ ಭಾರತದ ಪರವಾಗಿ ಒಬ್ಬರು ಸಚಿವರು ತೆರಳುತ್ತಿದ್ದರು. ಫೆಬ್ರವರಿಯಲ್ಲಿ ಪುಲ್ವಾಮಾ ಉಗ್ರಗಾಮಿ ದಾಳಿ ನಡೆದ ನಂತರ ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ.

ಇನ್ನು ಪಾಕಿಸ್ತಾನದಲ್ಲಿರುವ ಭಾರತದ ರಾಜತಾಂತ್ರಿಕರಿಗೆ, ಅಧಿಕಾರಿಗಳಿಗೆ ಇಸ್ಲಾಮಾಬಾದ್ ನಲ್ಲಿ ಭದ್ರತಾ ಸಿಬ್ಬಂದಿಯಿಂದ ಹಿಂಸೆ ಆಗುತ್ತಿರುವ ಬಗ್ಗೆ ಕೂದ ದೂರಲಾಗಿತ್ತು. ಪಾಕಿಸ್ತಾನದ ವಿದೇಶಿ ಸಚಿವಾಲಯಕ್ಕೆ ಮಾರ್ಚ್ ಹದಿನೆಂಟರಂದು ಭಾರತ ಹೈಕಮಿಷನ್ ಘಟನೆ ವಿವರಗಳನ್ನು ತಿಳಿಸಿದ್ದು, ಕಳೆದ ವಾರ ನಡೆದ ಘಟನೆ ಬಗ್ಗೆ ತಿಳಿದಿರುವ ವ್ಯಕ್ತಿಗಳ ವಿಚಾರಣೆ ನಡೆಸುವಂತೆ ಕೇಳಿಕೊಂಡಿದೆ.












Click it and Unblock the Notifications