ದೆಹಲಿ ಅಸೆಂಬ್ಲಿ ಚುನಾವಣೆ : ಹೊರಬಿತ್ತು ಮತ್ತೊಂದು ಸಮೀಕ್ಷೆ
ನವದೆಹಲಿ, ಜ 13: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅಸೆಂಬ್ಲಿ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಅಭಿಯಾನ ದೆಹಲಿಯಲ್ಲೂ ಮುಂದುವರಿಯಲಿದೆ ಎನ್ನುತ್ತದೆ ಲೇಟೆಸ್ಟ್ ಸಮೀಕ್ಷೆ.
ಇಂಡಿಯಾ ಟುಡೆ ಮತ್ತು CICERO ನಡೆಸಿದ ತಾಜಾ ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಹದಿನಾರು ವರ್ಷದ ನಂತರ ಬಿಜೆಪಿ ಸರಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. (ಎಬಿಪಿ ನೀಲ್ಸನ್ ಸಮೀಕ್ಷೆ)
ಜನವರಿ 2 ರಿಂದ 6ರ ಅವಧಿಯಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಬ್ರಾಹ್ಮಣ, ರಜಪೂತ್, ಬನ್ನಾ ಜೈನ್, ಪಂಜಾಬಿ ಖತ್ರಿ, ಜಾಟ್ ಮತ್ತು ಗುಜ್ಜರ್ ಸಮುದಾಯದ ಮತಗಳು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಹಂಚಿಹೋಗಲಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿರುವ ಏಕೈಕ ಆಸರೆಯೆಂದರೆ ಮುಸ್ಲಿಂ ಸಮುದಾಯ. ಆದರೂ, ಆಮ್ ಆದ್ಮಿ ಪಕ್ಷ ಮುಸ್ಲಿಂ ಮತಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವುದು.
ದೆಹಲಿ ಗ್ರಾಮೀಣ ಮತ್ತು ಕೊಳಚೆ ಪ್ರದೇಶದ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ.
ಸೂಕ್ತ ಮುಖ್ಯಮಂತ್ರಿಯ ವಿಚಾರದಲ್ಲಿ ತಿಂಗಳ ಹಿಂದೆ ಇಂಡಿಯಾ ಟುಡೆ ಸಮೀಕ್ಷೆಗೂ, ಈಗಿನ ಸಮೀಕ್ಷೆಗೂ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನೇ ಜನತೆ ಸೂಕ್ತ ಸಿಎಂ ಅಭ್ಯರ್ಥಿ ಎಂದು ಪರಿಗಣಿಸುತ್ತಿದ್ದಾರೆ.
ನಂತರದ ಸ್ಥಾನ ಡಾ. ಹರ್ಷವರ್ಧನ್ ಮತ್ತು ಶೀಲಾ ದೀಕ್ಷಿತ್ ಅವರಿಗೆ. (ಇಂಡಿಯಾ ಟುಡೆ ಹಿಂದಿನ ಸಮೀಕ್ಷೆ)
ತಿಂಗಳ ಹಿಂದಿನ ಸಮೀಕ್ಷೆಗೂ, ಈಗಿನ ಸಮೀಕ್ಷೆಯ ನಡುವಿನ ಅವಧಿಯಲ್ಲಿ ಬಿಜೆಪಿ ಶೇ. 6.9 ಹೆಚ್ಚು ಮತವನ್ನು ಮತ್ತು ಆಮ್ ಆದ್ಮಿ ಶೇ 6.4ರಷ್ಟು ಹೆಚ್ಚಿನ ಮತವನ್ನು ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಇಂಡಿಯಾ ಟುಡೆ, CICERO ತಾಜಾ ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಪಕ್ಷಗಳು ಗೆಲ್ಲಬಹುದಾದ ಅಂದಾಜು ಸೀಟುಗಳು ಇಂತಿದೆ:
ಒಟ್ಟು ಸ್ಥಾನ : 70 (ಆವರಣದಲ್ಲಿ 2013ರಲ್ಲಿನ ಬಲಾಬಲ)
ಬಿಜೆಪಿ : 34 ರಿಂದ 40 (31)
ಆಮ್ ಆದ್ಮಿ ಪಾರ್ಟಿ : 24 ರಿಂದ 31 (28)
ಕಾಂಗ್ರೆಸ್ : 3 ರಿಂದ 5 (8)
ಇತರರು : 0 ದಿಂದ 2 (3)












Click it and Unblock the Notifications