ಬಂದ್ ಆಯ್ತು ಭಾರತ; 1.37 ಲಕ್ಷ ನೌಕರರ ಖಾತೆಗೆ ಬಂತು ಪಿಎಫ್ ಹಣ
ನವದೆಹಲಿ, ಏಪ್ರಿಲ್.10: ಕೊರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕುವುದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಿಸಿದ್ದು ವ್ಯಾಪಾರ ವಹಿವಾಟುಗಳೆಲ್ಲ ಬಂದ್ ಆಗಿ ಬಿಟ್ಟಿವೆ. ಇದರಿಂದ ಜನರ ಕೈಯಲ್ಲಿ ಹಣವು ಓಡಾಡುತ್ತಿಲ್ಲ.
ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾ ಸ್ಥಿತಿ ನಿರ್ಮಾಣವಾಗಿದ್ದು, ಅಗತ್ಯ ಬಿದ್ದಲ್ಲಿ ನೌಕರರು ತಮ್ಮ ಭವಿಷ್ಯ ನಿಧಿಯನ್ನು ಭಾಗಶಃ ಪಡೆದುಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಅದರಂತೆ ದೇಶದಲ್ಲಿ 1 ಲಕ್ಷ 37 ಸಾವಿರ ನೌಕರರು ತಮ್ಮ ಭವಿಷ್ಯ ನಿಧಿಯನ್ನು ಬಿಡಿಸಿಕೊಂಡಿದ್ದಾರೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಿದೆ. ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತದಲ್ಲಿ 1 ಲಕ್ಷ 37 ಸಾವಿರ ಕಾರ್ಮಿಕರಿಗೆ 279 ಕೋಟಿ 65 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಬಡವರಿಗಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ:
ದೇಶದಲ್ಲಿರುವ ಬಡ ಕಾರ್ಮಿಕರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಭವಿಷ್ಯ ನಿಧಿಯ ಶೇ.75ರಷ್ಟು ಹಣವನ್ನು ಬಿಡಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ. ಇದರ ಮಧ್ಯೆ ನೌಕರರ ನಿಧಿ ಬಿಡಿಸಿಕೊಳ್ಳಲು ಎದುರಾಗುವ ಸಮಸ್ಯೆಗಳನ್ನು 72 ಗಂಟೆಗಳಲ್ಲೇ ನಿವಾರಿಸಲಾಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ತಿಳಿಸಿದೆ.












Click it and Unblock the Notifications