'ನಮ್ಮ ಸೈನಿಕರು ಹಿಂದೆ ಸರಿಯಲಿಲ್ಲ, ನಾವು ಹಿಂದೆ ಸರಿಯಲ್ಲ'- ಅರವಿಂದ್ ಕೇಜ್ರಿವಾಲ್
ದೆಹಲಿ, ಜೂನ್ 22: ನೆರೆ ರಾಷ್ಟ್ರ ಚೀನಾ ವಿರುದ್ಧ ಭಾರತ ಎರಡು ಯುದ್ಧ ಮಾಡುತ್ತಿದೆ. ಎರಡೂ ಯುದ್ಧದಲ್ಲೂ ನಾವು ಗೆಲ್ಲುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
Recommended Video
''ಇಂದು ನಾವು ಚೀನಾ ವಿರುದ್ಧ ಎರಡು ಯುದ್ಧಗಳನ್ನು ನಡೆಸುತ್ತಿದ್ದೇವೆ - ಒಂದು ಗಡಿಯಲ್ಲಿ ಮತ್ತು ಇನ್ನೊಂದು ಚೀನಾದ ವೈರಸ್ ವಿರುದ್ಧ. ಎಲ್ಲಾ ವೈದ್ಯರು ಮತ್ತು ದಾದಿಯರು ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ಗಡಿಯಲ್ಲಿ ಸೈನಿಕರು ಯುದ್ಧ ಮಾಡ್ತಿದ್ದಾರೆ. ನಮ್ಮ ಇಪ್ಪತ್ತು ಧೈರ್ಯಶಾಲಿ ಸೈನಿಕರು ಹಿಂದೆ ಸರಿಯಲಿಲ್ಲ, ನಾವು ಕೂಡ ಹಿಂದೆ ಸರಿಯುವುದಿಲ್ಲ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಕೊವಿಡ್ 19: ಗೃಹಬಂಧನದಲ್ಲಿರುವವರಿಗೆ ಪಲ್ಸ್ ಆಕ್ಸಿಮೀಟರ್ ವ್ಯವಸ್ಥೆ
"ಇಡೀ ದೇಶವು ವೈದ್ಯರು ಮತ್ತು ಸೈನಿಕರೊಂದಿಗೆ ನಿಂತಿದೆ. ಚೀನಾ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಾದ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ನಾವೆಲ್ಲರೂ ಒಟ್ಟಾಗಿ ಯುದ್ಧ ಮಾಡಬೇಕಾಗಿದೆ'' ಎಂದಿದ್ದಾರೆ ಕೇಜ್ರಿವಾಲ್.
ಪ್ರಸ್ತುತ ದೆಹಲಿಯಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 59,746ಕ್ಕೆ ತಲುಪಿದೆ. ಅವುಗಳಲ್ಲಿ 24,558 ಸಕ್ರಿಯ ಪ್ರಕರಣಗಳಿದ್ದು, 33,013 ಜನರು ಗುಣಮುಖರಾಗಿದ್ದಾರೆ. ಸುಮಾರು 12,000 ಜನರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಜೂನ್ 15 ರಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಮುಖಾಮುಖಿಯಾಯಲ್ಲಿ ಕರ್ನಲ್ ಸೇರಿದಂತೆ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.