ಐಸಿಎಂಆರ್ ಮುಖ್ಯಸ್ಥ ಬಲರಾಂ ಭಾರ್ಗವ ಅವರಿಗೆ ಕೊರೊನಾ ಸೋಂಕು
ನವದೆಹಲಿ, ಡಿಸೆಂಬರ್ 18: ಐಸಿಎಂಆರ್ ಮಹಾನಿರ್ದೇಶಕ, ಮುಖ್ಯಸ್ಥ ಬಲರಾಂ ಭಾರ್ಗವ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಏಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಪ್ರೊ, ಭಾರ್ಗವ ಅವರ ಆರೋಗ್ಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರೊ. ಭಾರ್ಗವ ಅವರು ಐಸಿಎಂಆರ್ನ ಮುಖ್ಯಸ್ಥರಾಗಿದ್ದಾರೆ. ರೋಗದ ಚಿಕಿತ್ಸೆ, ನಿರ್ವಹಣೆ ಮತ್ತು ಲಸಿಕೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಆರೋಗ್ಯ ಸಂಶೋಧನಾ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ.
ಪ್ರೊ. ಭಾರ್ಗವ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇಶದಲ್ಲಿ ಗುರುವಾರ 22,889 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಇದರಿಂದ ದೇಶದಲ್ಲಿ ಇದುವರೆಗೂ ವರದಿಯಾದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 99,79,447ಕ್ಕೆ ಏರಿಕೆಯಾಗಿದ್ದು, ಒಂದು ಕೋಟಿಯ ಗಡಿ ತಲುಪುವತ್ತ ಸಾಗಿದೆ.

ಕಳೆದ 24 ಗಂಟೆಗಳಲ್ಲಿ 338 ಮಂದಿ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 1,44,789ಕ್ಕೆ ತಲುಪಿದೆ. ಸಾವಿನ ಪ್ರಮಾಣ ಕೆಲವು ವಾರಗಳಿಂದ 300ರಿಂದ 400ರ ಗಡಿಯೊಳಗೆ ಇದೆ.
ವೈರಸ್ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವವರ ಸಂಖ್ಯೆ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಗುರುವಾರ ಒಂದೇ ದಿನ 31,087 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 95,20,827ಕ್ಕೆ ತಲುಪಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 3,13,831ಕ್ಕೆ ಇಳಿಕೆಯಾಗಿದೆ.












Click it and Unblock the Notifications