ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!
ನವದೆಹಲಿ, ಮಾರ್ಚ್ 12 : ಬಾಲಕೋಟ್, ಮುಜಾಫರಾಬಾದ್ ಮತ್ತು ಚಾಕೋಟಿ ಮೇಲೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಎಂಬುದರ ಲೆಕ್ಕ ಇನ್ನೂ ಸಿಕ್ಕಿಲ್ಲ. ಆದರೆ, ಆ ತರಬೇತಿ ಕ್ಯಾಂಪ್ ಗಳಲ್ಲಿ ಎಷ್ಟು ಜನರು ದಾಳಿಗೆ ಕೆಲವೇ ದಿನಗಳ ಹಿಂದೆ ಇದ್ದರು ಎಂಬುದರ ಬಗ್ಗೆ ಮಾಹಿತಿಗಳು ಬರಲು ಆರಂಭಿಸಿವೆ.
ಭಾರತೀಯ ವಾಯು ಸೇನೆ ಫೆಬ್ರವರಿ 26ರಂದು ನಡೆಸಿದ ವೈಮಾನಿಕ ದಾಳಿಗೂ ಕೇವಲ ಐದು ದಿನಗಳ ಹಿಂದೆ, ಬಾಲಕೋಟ್ ಒಂದರಲ್ಲಿಯೇ 263 ಉಗ್ರರು ತರಬೇತಿ ಪಡೆಯುತ್ತಿದ್ದರು ಎಂಬುದಕ್ಕೆ ಸಾಕ್ಷ್ಯ ದೊರೆತಿದೆ ಎಂದು ಟೈಮ್ಸ್ ನೌ ಹೇಳಿದೆ. ಇದರಿಂದ ಹಲವು ಗೊಂದಲಗಳಿಗೆ ಕೊನೆ ಹಾಡುವ ಸಾಧ್ಯತೆಯಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯು ಸೇನೆ ನಡೆಸಿದ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷ್ಯ ಕೊಡಿ ಎಂದು ಕಾಂಗ್ರೆಸ್ ನಾಯಕರು ಕೇಂದ್ರವನ್ನು ಒಂದೇ ಸವನೆ ಒತ್ತಾಯಿಸುತ್ತಲೇ ಇದ್ದರು. ನವಜೋತ್ ಸಿಂಗ್ ಸಿಧು, ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್, ಸುರ್ಜೇವಾಲಾ, ಮಮತಾ ಬ್ಯಾನರ್ಜಿ ಮುಂತಾದವರು ದಾಳಿ ಮಾಡಿದ್ದಕ್ಕೆ ಸಾಕ್ಷ್ಯ ಕೇಳುತ್ತಿದ್ದರು.
ನವಜೋತ್ ಸಿಂಗ್ ಸಿಧುವಂತೂ, ದಾಳಿ ಆಗಿರುವುದು ಉಗ್ರರ ಮೇಲೋ ಅಲ್ಲಿರುವ ಗಿಡಗಳ ಮೇಲೋ ಎಂದು ವ್ಯಂಗ್ಯವಾಡಿದ್ದರು. ಮೂರು ತಾಣಗಳಲ್ಲಿ 250ಕ್ಕೂ ಹೆಚ್ಚು ಉಗ್ರರನ್ನು ಬೇಟೆಯಾಡಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಕ್ಕೆ ಕಾಂಗ್ರೆಸ್ ನವರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದರು.

ತರಬೇತಿ ಪಡೆಯುತ್ತಿದ್ದ ಉಗ್ರರು ಎಲ್ಲಿ?
ದಾಳಿ ನಡೆಸಿದ ಸಂದರ್ಭದಲ್ಲಿ ಎಲ್ಲ ಉಗ್ರರ ಬಳಿ ಮೊಬೈಲ್ ಗಳಿದ್ದವು ಮತ್ತು ಆ ಮೊಬೈಲ್ ಸಿಗ್ನಲ್ ಗಳನ್ನು ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಷನ್ (ಎನ್ಟಿಆರ್ಓ) ಟ್ರಾಕ್ ಮಾಡಿ ಭಾರತೀಯ ವಾಯು ಸೇನೆಗೆ ಮಾಹಿತಿ ನೀಡಿತ್ತು. ಭಾರತೀಯ ವಾಯು ಸೇನೆ ನಡೆಸಿದ ದಾಳಿಯ ನಂತರ ಎಲ್ಲ ಸಿಗ್ನಲ್ ಗಳು ನಾಪತ್ತೆಯಾಗಿವೆ ಎಂದು ಎನ್ಆರ್ಟಿಓ ಹೇಳಿದೆ. ಹಾಗಿದ್ದರೆ ಅವರೆಲ್ಲ ಸತ್ತಿದ್ದಾರೆಯೆ ಎಂಬ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಆದರೆ, ಭಾರತದ ದಾಳಿಯ ಉದ್ದೇಶವನ್ನು ಈ ಮಾಹಿತಿ ಇನ್ನಷ್ಟು ಬಲಪಡಿಸಿದೆ ಮತ್ತು ಟೀಕಾಕಾರರ ಬಾಯಿಯನ್ನೂ ಮುಚ್ಚಿದೆ.

ಜೈಷ್ ನ 18 ಕಮಾಂಡರ್ ಗಳು ಎಲ್ಲಿ?
ಫೆಬ್ರವರಿ 26ರಂದು ಬೆಳಗಿನ ಜಾವ 3.45ರ ಸುಮಾರಿಗೆ ನಡೆಸಿದ ಭರ್ಜರಿ ದಾಳಿಯ ಸಮಯದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ 18 ಹಿರಿಯ ಕಮಾಂಡರ್ ಗಳು ಕೂಡ ಅಲ್ಲಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಿದ್ದ ಆ ಎಲ್ಲ ಹಿರಿಯ ಕಮಾಂಡರ್ ಗಳು ಎಲ್ಲರೂ ನಾಪತ್ತೆಯಾಗಿದ್ದು, ಎಲ್ಲರೂ ಏರ್ ಸ್ಟ್ರೈಕ್ ನಲ್ಲಿ ಹತ್ಯೆಯಾಗಿದ್ದಾರೆ ಎಂದು ಭಾವಿಸಲಾಗಿದೆ. ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ಉಗ್ರರ ನೆಲೆಗಳ ಮೇಲೆ ಭಾರೀ ದಾಳಿ ನಡೆಸಿತ್ತು. ಪುಲ್ವಾಮಾದಲ್ಲಿ ಜೈಷ್ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್ಪಿಎಫ್ ಜವಾನರು ಹುತಾತ್ಮರಾಗಿದ್ದರು.

ಉಗ್ರ ಮಸೂದ್ ಅಜರ್ ಗೆ ಆಪ್ತರು
ಮಫ್ತಿ ಉಮರ್, ಮೌಲಾನಾ ಜಾವೇದ್, ಅಸ್ಲಮ್, ಮೌಲಾನಾ ಅಜ್ಮಲ್, ಮೌಲಾನಾ ಜುಬೇರ್, ಮೌಲಾನಾ ಅಬ್ದುಲ್ ಗಫೂರ್ ಕಾಶ್ಮೀರಿ, ಮೌಲಾನಾ ಕುದ್ರಾತುಲ್ಲಾ, ಮೌಲಾನಾ ಕಾಸಿಮ್, ಮೌಲಾನಾ ಜುನೇದ್ ಎಂಬ ಹೆಸರಿನ ಉಗ್ರರೆಲ್ಲರೂ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖಂಡ ಮಸೂದ್ ಅಜರ್ ಗೆ ಆಪ್ತರಾಗಿದ್ದರು. ಇಂಥ ಉಗ್ರ ಸಂಘಟನೆಯ ಮುಖಂಡ, ಭಾರತದ ವಿರೋಧಿಗೆ 'ಮಸೂದ್ ಅಜರ್ ಜೀ' ಎಂದು ಕಾಂಗ್ರೆಸ್ ನಾಯಕರು ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

'ಜಿಹಾದಿ'ಗಳಿಗೆ ವಿಶೇಷ ತರಬೇತಿ
ತರಬೇತಿ ಪಡೆಯುತ್ತಿದ್ದವರಲ್ಲಿ ಕೆಲವರು ಆರಂಭಿಕರಾಗಿದ್ದರೆ, ಕೆಲವರು ಉನ್ನತ ಮಟ್ಟದ ತರಬೇತಿಯಲ್ಲಿ ನಿರತರಾಗಿದ್ದರು. ಆ 263 ಉಗ್ರರಲ್ಲಿ ಸುಮಾರು 25 ಭಯೋತ್ಪಾದಕರಿಗೆ ಆತ್ಮಾಹುತಿ ದಾಳಿ ನಡೆಸಲು 'ಜಿಹಾದಿ'ಗಳಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇವರೆಲ್ಲರ ಜೊತೆ ಅಡುಗೆ ಮಾಡುವವರು, ಭದ್ರತಾ ಸಿಬ್ಬಂದಿಗಳು ಕೂಡ ಇದ್ದರು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಎಲ್ಲ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡೇ ಭಾರತದ ವಾಯು ಸೇನೆ ಎಲ್ಲ ನೆಲೆಗಳನ್ನು ಧ್ವಂಸ ಮಾಡಿತ್ತು. ಇದಾದ ಮರುದಿನವೇ ಪಾಕಿಸ್ತಾನದ ವಾಯು ಸೇನೆ ಭಾರತದ ಮೇಲೆ ದಾಳಿ ನಡೆಸಿತ್ತು.

ಬಾಯಿ ಬಂದ್ ಮಾಡುವಂತೆ ಸಾಕ್ಷ್ಯ
ಈ ಮಾಹಿತಿ ಹೊರಬಿದ್ದಿರುವುದು ಕೇಂದ್ರ ಸರಕಾರಕ್ಕೆ ಮತ್ತು ತಾವು ಗುರಿಯನ್ನು ಅತ್ಯಂತ ಯಶಸ್ವಿಯಾಗಿ ಹೊಡೆದಿದ್ದೇವೆ ಎಂದು ಹೇಳಿರುವ ಭಾರತೀಯ ವಾಯು ಸೇನೆಗೆ ಆನೆ ಬಲ ಬಂದಂತಾಗಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಹಲವಾರು ನಾಯಕರು ಭಾರತೀಯ ವಾಯು ಸೇನೆ ನಡೆಸಿದ ಈ ಏರ್ ಸ್ಟ್ರೈಕ್ ಗೆ ಸಾಕ್ಷಿ ನೀಡಬೇಕೆಂದು ಕೇಳುತ್ತಿದ್ದರು. ಅವರೆಲ್ಲರ ಬಾಯಿ ಬಂದ್ ಮಾಡುವಂತೆ ಈ ಸಾಕ್ಷ್ಯಗಳು ಹೊರಬಿದ್ದಿವೆ.












Click it and Unblock the Notifications