ಇತಿಹಾಸ ಈ ಪ್ರಾಣಿಯ ಮುಖಕ್ಕೆ ಉಗಿಯಲಿದೆ: ಅಮಿತ್ ಶಾ ವಿರುದ್ಧ ಅನುರಾಗ್ ಕಶ್ಯಪ್ ವಾಗ್ದಾಳಿ
ನವದೆಹಲಿ, ಜನವರಿ 27: ಕೇಂದ್ರ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸುತ್ತಿರುವ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರನ್ನು 'ಪ್ರಾಣಿ' ಎಂದು ವ್ಯಂಗ್ಯವಾಡಿರುವ ಅವರು, ಚರಿತ್ರೆಯು ಅವರ ಮುಖದ ಮೇಲೆ ಉಗಿಯಲಿದೆ ಎಂದು ಟೀಕಿಸಿದ್ದಾರೆ.
ಪzರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟ ಮತ್ತು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಬೆಂಬಲ ನೀಡಿದ್ದ ಅನುರಾಗ್ ಕಶ್ಯಪ್, ಭಾನುವಾರ ರಾಜಧಾನಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ ವಿರುದ್ಧ ಟ್ವಿಟ್ಟರ್ನಲ್ಲಿ ಹರಿಹಾಯ್ದಿದ್ದಾರೆ.
ಇತಿಹಾಸ ಪ್ರಾಣಿಯ ಮೇಲೆ ಉಗಿಯಲಿದೆ
'ನಮ್ಮ ಗೃಹ ಸಚಿವ ಒಬ್ಬ ಹೇಡಿ. ಅವರು ಪೊಲೀಸರನ್ನು ನಿಯಂತ್ರಿಸುತ್ತಾರೆ, ಗೂಂಡಾಗಳನ್ನು ನಿಯಂತ್ರಿಸುತ್ತಾರೆ. ತಮ್ಮ ಸ್ವಂತ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ನಿಶಸ್ತ್ರ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿಸುತ್ತಾರೆ. ಅಮಿತ್ ಶಾ ನಡವಳಿಕೆ ಕಳಪೆ ಮತ್ತು ಕೀಳುಮಟ್ಟದ್ದು. ಇತಿಹಾಸ ಅವರಂತಹ ಪ್ರಾಣಿಯ ಮೇಲೆ ಉಗಿಯಲಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಸಮಾವೇಶದಲ್ಲಿ ಪ್ರತಿಭಟನೆ
ಫೆ. 8ರಂದು ದೆಹಲಿಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಾಗಿ ಭಾನುವಾರ ಅಮಿತ್ ಶಾ ಚುನಾವಣಾ ಪ್ರಚಾರ ಸಮಾವೇಶ ನಡೆಸಿದ್ದರು. ಈ ವೇಳೆ ಅವರ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಜನರು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಅನುರಾಗ್ ಕಶ್ಯಪ್, ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.
ಯುವಕನಿಗೆ ಥಳಿಸಿದ ಜನರು
ಭಾನುವಾರದ ಸಮಾವೇಶದ ವೇಳೆ ಸೇರಿದ್ದ ಸಣ್ಣ ಗುಂಪೊಂದು ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿತ್ತು. ಆಗ ಅಮಿತ್ ಶಾ ಬೆಂಬಲಿಗರು ಈ ಪ್ರತಿಭಟನಾಕಾರರಲ್ಲಿ ಒಬ್ಬನನ್ನು ಹಿಡಿದು ಥಳಿಸಿದ್ದರು. ಬಳಿಕ ಅಮಿತ್ ಶಾ, ಆ ಯುವಕನನ್ನು ಸುರಕ್ಷಿತವಾಗಿ ಕರೆದೊಯ್ಯುವಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು.
ಮೌನವಾಗಿರಲು ಸಾಧ್ಯವಿಲ್ಲ
ಸುಮಾರು ನಾಲ್ಕು ತಿಂಗಳ ಬಳಿಕ 2019ರ ಡಿ. 16ರಂದು ಟ್ವಿಟ್ಟರ್ಗೆ ಮರಳಿದ್ದ ಅನುರಾಗ್ ಕಶ್ಯಪ್, 'ಇದು ತುಂಬಾ ದೂರ ಸವೆದಿದೆ. ಇನ್ನು ಮುಂದೆಯೂ ಮೌನವಾಗಿರಲು ಸಾಧ್ಯವಿಲ್ಲ. ಈ ಸರ್ಕಾರ ಸ್ಪಷ್ಟವಾಗಿ ಫ್ಯಾಸಿಸ್ಟ್ ಆಗಿದೆ. ಬದಲಾವಣೆ ಮಾಡಿಸುವಷ್ಟು ಶಕ್ತವುಳ್ಳ ಧ್ವನಿಗಳು ಸುಮ್ಮನಿರುವುದು ನನಗೆ ವಾಸ್ತವವಾಗಿ ಕೋಪ ತರಿಸುತ್ತಿದೆ' ಎಂದು ಹೇಳಿದ್ದರು.