ಆಮ್ಲಜನಕ ಕೊರತೆ: ಕೇಂದ್ರಕ್ಕೆ ಚಾಟಿ ಬೀಸಿದ ದೆಹಲಿ ಹೈಕೋರ್ಟ್
ನವದೆಹಲಿ, ಮೇ 04: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವಲ್ಲಿ ಏಕೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.
ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ನೇತೃತ್ವದ ಪೀಠವು ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿದೆ. "ನೀವು ಬೇಕಿದ್ದರೆ ಉಷ್ಣಪಕ್ಷಿಯಂತೆ ಮರಳಿನಲ್ಲಿ ತಲೆಯನ್ನು ಇಟ್ಟುಕೊಂಡು ಕೂರಬಹುದು, ಆದರೆ ನಮ್ಮಿಂದ ಅದು ಸಾಧ್ಯವಾಗುವುದಿಲ್ಲ" ಎಂದಿದೆ.
ದೆಹಲಿಯಲ್ಲಿ ಆಕ್ಸಿಜನ್ ಸಾಂದ್ರಕಗಳ ವಿವರಣೆ ಕೋರಿದ ಹೈಕೋರ್ಟ್
ದೆಹಲಿಯಲ್ಲಿ ಪ್ರಸ್ತುತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇದೀಗ ಹೈಕೋರ್ಟ್ ಕೂಡಾ ಅದನ್ನೇ ಪುನರುಚ್ಚರಿಸುತ್ತದೆ. ನೀವೂ ಕೂಡಾ ಇದೇ ನಗರದಲ್ಲಿ ವಾಸವಾಗಿದ್ದು, ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡುತ್ತಿಲ್ಲವೇ, ನೀವೇನು ದಂತ ಗೋಪುರದ ಮೇಲೆ ವಾಸವಾಗಿದ್ದೀರಾ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿತ್ತು?:
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕವನ್ನು ಪೂರೈಸುವಂತೆ ಸುಪ್ರೀಂಕೋರ್ಟ್ ಕೂಡಾ ಈ ಹಿಂದೆ ನಿರ್ದೇಶನ ನೀಡಿತ್ತು. ಕಳೆದ ಏಪ್ರಿಲ್ 30ರಂದು ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು ನವದೆಹಲಿಯಲ್ಲಿ ಪ್ರತಿನಿತ್ಯ ಕೊವಿಡ್-19 ರೋಗಿಗಳ ಚಿಕಿತ್ಸೆ 490 ಮೆಟ್ರಿಕ್ ಟನ್ ಆಮ್ಲಜನಕಕ್ಕಿಂತ 700 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ದಿನವೂ 700 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಕಾರಣ ಕೇಳುವುದಕ್ಕೆ ಆಗುವುದಿಲ್ಲ ಎಂದ ಹೈಕೋರ್ಟ್:
ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾಗಿರುವ ಆಮ್ಲಜನಕದ ಕೊರತೆ ನೀಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಪ್ರತಿನಿತ್ಯ 700 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡುವಂತೆ ಈ ಹಿಂದೆಯೇ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ನಾವೂ ಕೂಡಾ ಈಗ ಅದನ್ನೇ ಹೇಳುತ್ತಿದ್ದೇವೆ. ದಿನವೂ 700 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಕೆ ಮಾಡಲೇಬೇಕು. ಇದರ ಹೊರತಾಗಿ ನಾವು ಬೇರೆ ಯಾವ ಕಾರಣವನ್ನೂ ಕೇಳಲು ಸಿದ್ಧವಿಲ್ಲ" ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.