Heatwave : ತಾಪಮಾನದಿಂದ ತತ್ತರಿಸಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ವಾರ ಮಳೆ ಸಾಧ್ಯತೆ
ನವದೆಹಲಿ, ಏಪ್ರಿಲ್ 29 : ಗರಿಷ್ಠ ತಾಪಮಾನನಿಂದ ತತ್ತರಿಸಿರುವ ಉತ್ತರ ಭಾರತದ ಹಲವು ರಾಜ್ಯಗಳಿಗೆ ಕೊಂಚ ರಿಲೀಫ್ ಸಿಗಲಿದ್ದು, ಮುಂದಿನ ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ 4 ರಿಂದ 7ರವರೆಗೆ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿಯ ಸಫ್ದರ್ ಜಂಗ್ನಲ್ಲಿ ಬುಧವಾರ ಒಂದೇ ದಿನ 43.5 ಡಿಗ್ರಿ ಸೆಲ್ಸಿಯಸ್ ಗರಿಷ್ಟ ತಾಪಮಾನವನ್ನು ದಾಖಲಿಸಿದ್ದು, ಇದು 12 ವರ್ಷಗಳ ನಂತರ ಏಪ್ರಿಲ್ ತಿಂಗಳಲ್ಲಿ ದಾಖಲಾದ ಗರಿಷ್ಟ ತಾಪಮಾನವಾಗಿದೆ. ಇದರ ಜೊತೆಗೆ ರಿಡ್ಜ್ ಪ್ರದೇಶದಲ್ಲಿ 45.1 ಡಿಗ್ರಿ ಸೆಲ್ಸಿಯಸ್, ಮುಂಗೇಶ್ಪುರ 45.8 ಡಿಗ್ರಿ ಸೆಲ್ಸಿಯಸ್, ನಜಾಫ್ಗಢ 45.4 ಡಿಗ್ರಿ ಸೆಲ್ಸಿಯಸ್ ಮತ್ತು ಪಿತಾಂಪುರದಲ್ಲಿ 45.2 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಟ ತಾಪಮಾನ ದಾಖಲಾಗಿದೆ.
ರಾಜಸ್ಥಾನದ ಚುರು, ಬಾರ್ಮರ್, ಬಿಕಾನೇರ್ ಮತ್ತು ಶ್ರೀಗಂಗಾನಗರ ಸ್ಥಳಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಗರಿಷ್ಟ ತಾಪಮಾನ ದಾಖಲಾಗಿದ್ದು, ಬಿಸಿಗಾಳಿ ಹೆಚ್ಚಾಗಿದೆ. ಹೀಗಾಗಿ ಹವಮಾನ ಇಲಾಖೆ ರಾಜಸ್ಥಾನಕ್ಕೆ ಅರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಶುಕ್ರವಾರ ಕೂಡ ನಗರದಲ್ಲಿ ಬಿಸಿಗಾಳಿ ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚನೆ ನೀಡಿದೆ.

ಸದ್ಯಕ್ಕೆ ದೆಹಲಿಯಲ್ಲಿ ಮುಂದಿನ ವಾರ ಮಳೆಯಾಗುವ ಸಾಧ್ಯತೆ ಇದೆ, ಈ ಮೂಲಕ ಬಿಸಿಲ ಬೇಗೆಗೆ ಕೆಂಡದಂತಾಗಿರುವ ಭೂಮಿಗೆ ವರುಣ ತಂಪರೆಯಲಿದ್ದು, ಜನರಿಗೂ ಕೂಡ ಬಿಸಿಗಾಳಿಯಿಂದ ಕೊಂಚ ರಿಲೀಫ್ ಸಿಗುವ ಸಾಧ್ಯತೆ ಇದೆ. ಆದ್ರೆ ಅಲ್ಲಿಯವರೆಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಗಾಳಿ ಪ್ರಮಾಣ ಹೆಚ್ಚಿರಲಿದ್ದು, ಅದರಲ್ಲೂ ಪ್ರಮುಖವಾಗಿ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಹೆಚ್ಚಾಗಿ ಬಿಸಿಗಾಳಿ ವಾತವರಣ ಇರಲಿದೆ. ಈಗಾಗಲೇ ಹವಮಾನ ಇಲಾಖೆ ಕೂಡ ಉತ್ತರ ಭಾರತದ 5 ರಾಜ್ಯಗಳಿಗೆ ಅರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಸದ್ಯ ಈ ತಾಪಮಾನ ಹೆಚ್ಚಳದ ನಡುವೆಯೂ ಉತ್ತರ ಭಾರತದ ರಾಜ್ಯಗಳಲ್ಲಿ ಮುಂದಿನ ವಾರ ಮಳೆಯಾಗುವುದರಿಂದ ವಾತಾವರಣ ತಂಪಿನಿಂದ ಇರುವ ಸಾಧ್ಯತೆ ಇದೆ.












Click it and Unblock the Notifications