ಸುಮಲತಾ ಬಗ್ಗೆ ಹೇಳಿಕೆ: ಸ್ಪಷ್ಟನೆ ಕೊಟ್ಟ ಸಚಿವ ರೇವಣ್ಣ, ಕ್ಷಮೆ ಕೇಳಲ್ಲವಂತೆ
ನವದೆಹಲಿ, ಮಾರ್ಚ್ 08: ಸುಮಲತಾ ಅಂಬರೀಶ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ, ಬಿಜೆಪಿ ನಾಯಕರುಗಳಿಂದ ಮೂದಲಿಕೆಗೆ ಒಳಗಾಗಿರುವ ರೇವಣ್ಣ ಅವರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಹಿಂದೂ ಸಂಸ್ಕೃತಿ ಅನ್ವಯಿಸಿ ಆ ಹೇಳಿಕೆ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಪತಿ ಸತ್ತ ಕೆಲವು ತಿಂಗಳು ಪತ್ನಿ ಮನೆಯಿಂದ ಹೊರಬರಬಾರದು ಎಂಬ ನಿಯಮ ಹಿಂದೂ ಸಂಸ್ಕೃತಿಯಲ್ಲಿ ಪಾಲಿಸಲಾಗುತ್ತದೆ. ಅದೇ ನಿಯಮದ ಹಿನ್ನೆಲೆಯಲ್ಲಿ ನಾನು ಆ ಹೇಳಿಕೆ ನೀಡಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ. ನನ್ನ ಹೇಳಿಕೆ ಕೆಟ್ಟ ಅರ್ಥ ಕಲ್ಪಿಸುವುದು ಬೇಡ, ಕೆಟ್ಟ ಭಾವದಿಂದ ನಾನು ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.

ಕ್ಷಮೆ ಕೇಳುವುದಿಲ್ಲ: ರೇವಣ್ಣ
ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಬೇಕು ಎಂಬ ಕೂಗು ಕೇಳಿಬರುತ್ತಿರುವ ಬಗ್ಗೆ ಮಾತನಾಡಿರುವ ಅವರು, ಆ ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ, ಕ್ಷಮೆ ಕೇಳಲು ನನಗೇನು ಹುಚ್ಚು ಹಿಡಿದಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಿಖಿಲ್ ಸ್ಪರ್ಧೆ ಮಾಡಲಿ ಎನ್ನುವುದು ಕಾರ್ಯಕರ್ತರ ಬಯಕೆ
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಎಂಬುದು ಮಂಡ್ಯ ಕಾರ್ಯಕರ್ತರ ಒತ್ತಾಯ, ಹಾಗಾಗಿ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆ. ಮಂಡ್ಯಕ್ಕೆ ನಿಖಿಲ್ ಕೊಡುಗೆ ಏನು ಎಂದು ಪ್ರಶ್ನಿಸುವುದಾದರೆ, ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ನಮ್ಮದೊಂದೆ ರಾಜಕಾರಣ ಕುಟುಂಬವೇ?
ದೇಶದಲ್ಲಿ ನಮ್ಮದೊಂದೆ ಕುಟುಂಬ ರಾಜಕಾರಣದ ಪಕ್ಷವೇ? ಮೊಮ್ಮಕ್ಕಳು ಚುನಾವಣೆಗೆ ನಿಂತರೆ ತಪ್ಪೆ. 1978 ರಿಂದಲೂ ದೇವೇಗೌಡ ಅವರ ಹಿಂದೆ ಚೀಲ ಹಿಡಿದುಕೊಂಡು ಸುತ್ತಿ ರಾಜಕಾರಣ ಕಂಡಿದ್ದೇನೆ ಎಂದು ರೇವಣ್ಣ ಖಾರವಾಗಿಯೇ ಉತ್ತರಿಸಿದ್ದಾರೆ.

ರೇವಣ್ಣ ಹೇಳಿಕೆ ವಿರುದ್ಧ ಆಕ್ರೋಶ
ರೇವಣ್ಣ ಅವರು ಸುಮಲತಾ ಅವರ ಬಗ್ಗೆ ನೀಡಿದ ಹೇಳಿಕೆಗೆ ರಾಜ್ಯದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿಯಹ ಹಲವು ಮುಖಂಡರು ರೇವಣ್ಣ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಕ್ಷಮಾಪಣೆಗೆ ಒತ್ತಾಯಿಸಿದ್ದಾರೆ.












Click it and Unblock the Notifications