Analysis: ಕೇರಳದಲ್ಲಿ ಯುಡಿಎಫ್ ಮುನ್ನಡೆ; ಕಾಂಗ್ರೆಸ್ಗೆ ಮರುಜೀವ, ಸಿಪಿಎಂಗೆ ಪೆಟ್ಟು, ಬಿಜೆಪಿ ಕನಸು ಮತ್ತೊಮ್ಮೆ ಭಗ್ನ
"ರಾಜಕೀಯ ಪ್ರಯೋಗಾಲಯ" (Political Laboratory) ಎನ್ನುವುದು ಕೇರಳದ ಮತದಾರರ ಪ್ರಜ್ಞಾವಂತಿಕೆಯನ್ನು ಗುರುತಿಸುವ ಪದ. ಭಾರತದ ಗರಿಷ್ಠ ಸಾಕ್ಷರತೆಯ ಪ್ರಮಾಣ ಪಡೆದಿರುವ ಕೇರಳವನ್ನು 'ದೇವರ ಸ್ವಂತ ನಾಡು' (God's Own Country) ಎಂದು ಅಲ್ಲಿನವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸುದೀರ್ಘ ಕರಾವಳಿ, ಕಾಡು, ಬೆಳೆ ವೈವಿಧ್ಯ, ಜಾಗೃತ ಮತದಾರರು, ಪ್ರಜ್ಞಾವಂತ ಜನ, ಹಿಂದೂಗಳ ಜೊತೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರೂ ಗಣನೀಯ ಪ್ರಮಾಣದಲ್ಲಿರುವ ರಾಜ್ಯ ಕೇರಳ. ಹೀಗಾಗಿಯೇ ಇಲ್ಲಿನ ರಾಜಕೀಯ ಲೆಕ್ಕಾಚಾರಗಳು ಭಾರತದ ಉಳಿದ ರಾಜ್ಯಗಳಲ್ಲಿ ಇರುವಂತೆ ಇರುವುದಿಲ್ಲ. ಜಾತಿಯ ಜೊತೆಗೆ ಧರ್ಮ, ಅಭಿವೃದ್ಧಿಯ ಜೊತೆಗೆ ಆದ್ಯತೆಗಳೂ ಲೆಕ್ಕಾಚಾರದ ಭಾಗವಾಗಿಯೇ ಇರುತ್ತವೆ.
ಇತ್ತೀಚೆಗಷ್ಟೇ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡನೆ ಪ್ರಯತ್ನದ ಮೂಲಕ ಶಕ್ತಿ ಪರೀಕ್ಷೆ ಮಾಡಿಕೊಂಡಿದ್ದ ಬಿಜೆಪಿಗೆ ಪಂಚರಾಜ್ಯ ಚುನಾವಣೆಗಳ ಮಹತ್ವ ಅರಿವಾಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಪಾರಮ್ಯ ಮೆರೆದಿರುವ ಬಿಜೆಪಿ ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸು ರಾಷ್ಟ್ರೀಯ ನಾಯಕರಿಗೆ ಇಲ್ಲ. ಆದರೆ ಒಂದಿಷ್ಟು ಸ್ಥಾನಗಳಿಸಿದರೆ ಈ ರಾಜ್ಯಗಳಲ್ಲಿಯೂ ಅಸ್ತಿತ್ವ ತೋರಿಸಬಹುದು ಎನ್ನುವ ಇರಾದೆಯೂ ಇಲ್ಲದಿಲ್ಲ. ಕೇರಳ ಚುನಾವಣಾ ಫಲಿತಾಂಶವನ್ನು ಈ ಎಲ್ಲ ಹಿನ್ನೆಲೆಗಳಿಂದಲೂ ನಾವು ಪರಿಶೀಲಿಸಬೇಕಾಗುತ್ತದೆ.

ಈ ಹೊತ್ತಿನ (ಮೇ 4 ಬೆಳಿಗ್ಗೆ 10 ಗಂಟೆ) ಘೋಷಿತ ಮತಎಣಿಕೆ ದಾಖಲೆಗಳ ಪ್ರಕಾರ ಕೇರಳದಲ್ಲಿ ಯುಡಿಎಫ್ 86 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಎಲ್ಡಿಎ 44, ಬಿಜೆಪಿ 06 ಕ್ಷೇತ್ರಗಳಲ್ಲಿ ಮುಂದಿವೆ. ಈ ಮೂರೂ ಪಕ್ಷಗಳ ಮೇಲೆ ಈ ಫಲಿತಾಂಶದ ಪರಿಣಾಮಗಳೇನಾಗಬಹುದು ಎನ್ನುವ ಚುಟುಕು ವಿಶ್ಲೇಷಣೆ ಇಲ್ಲಿದೆ.
ಸಿಪಿಎಂ -ಕೊನೆಯ ಭದ್ರಕೋಟೆ
ಕೇರಳವು ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಅಧಿಕಾರ ಇದ್ದ ಕೊನೆಯ ರಾಜ್ಯ. ರಾಷ್ಟ್ರಮಟ್ಟದಲ್ಲಿ ಎಡಪಕ್ಷಗಳ ಅಸ್ತಿತ್ವಕ್ಕೆ ಕೇರಳದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಸಿಪಿಎಂ ನೇತೃತ್ವದ ಎಲ್ಡಿಎಫ್ ಮೈತ್ರಿಕೂಟಕ್ಕೆ ಅತ್ಯಗತ್ಯವಾಗಿತ್ತು. ಎಲ್ಡಿಎಫ್ ಪಾಲಿಗೆ ಇದು ಉಳಿವಿನ ಹೋರಾಟ ಎನ್ನುವಂತೆ ಬಿಂಬಿತವಾಗಿತ್ತು. ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿಗೆ 'ಗುಜರಾತ್ ಮಾದರಿ' ಹೊರತುಪಡಿಸಿದರೆ ಪ್ರಸ್ತಾಪವಾಗುತ್ತಿದ್ದ ಮತ್ತೊಂದು ಸುಸ್ಥಿರ ಅಭಿವೃದ್ಧಿ ಮಾದರಿಯಾಗಿ ಕೇರಳ ಚರ್ಚೆಗೆ ಬರುತ್ತಿತ್ತು. ಅಲ್ಲಿನ ಎಲ್ಡಿಎಫ್ ಮೈತ್ರಿಯ ಚುಕ್ಕಾಣಿ ಹಿಡಿದಿದ್ದ ಪಿಣರಾಯಿ ವಿಜಯನ್ ಆಡಳಿತ ಇದಕ್ಕೆ ಕಾರಣ.
ಕಾಂಗ್ರೆಸ್ - ದೆಹಲಿ ದನಿಗೆ ಕೇರಳದ ಶಕ್ತಿ
ಸದ್ಯ ಕಾಂಗ್ರೆಸ್ ಕೂಡ ಕಳಾಹೀನ ಸ್ಥಿತಿಯಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದೆಯಾದರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳ ಕಚ್ಚಾಟದಿಂದಷ್ಟೇ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯ ಡಿಎಂಕೆ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಾಲಿಗೆ ಅಲ್ಲೇನು ಹೆಚ್ಚು ಸ್ವಾತಂತ್ರ್ಯ ಸಿಗದು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವಕಾಶವಿರುವ ಮತ್ತೊಂದು ಮುಖ್ಯ ರಾಜ್ಯವೆಂದರೆ ಅದು ಕೇರಳ ಮಾತ್ರ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ನ ಧ್ವನಿಗೆ ಶಕ್ತಿ ತುಂಬಲೂ ಕೇರಳ ನೆರವಾದೀತು. ಹೀಗಾಗಿಯೇ ಕೇರಳದಲ್ಲಿ ಕಾಂಗ್ರೆಸ್ನ ಮುನ್ನಡೆಯನ್ನು ಎಲ್ಲರೂ ಗಂಭೀರವಾಗಿ ಗಮನಿಸುತ್ತಿದ್ದಾರೆ.
ಬಿಜೆಪಿ -ದಕ್ಷಿಣದಲ್ಲಿ ಕಮಲಕ್ಕೆ ಕಸುವು
ಕೇರಳದ ಮತದಾರರು ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿಯ ಬಗ್ಗೆ ಗಮನ ಹರಿಸಿದಷ್ಟು ಬಿಜೆಪಿಯನ್ನು ಗಮನಿಸುವುದಿಲ್ಲ. ಕೇರಳದಲ್ಲಿ ಅಧಿಕಾರ ಸಿಗುವುದೇ ಇಲ್ಲ ಎನ್ನುವಷ್ಟು ಹತಾಶೆಗೆ ಒಳಗಾಗಿದ್ದ ಕೆಲ ಸಂಘಟನೆಗಳು ಸಿನಿಮಾ, ಟ್ರೋಲ್ ಪೇಜ್ಗಳ ಮೂಲಕ ಇಡೀ ರಾಜ್ಯದ ಬಗ್ಗೆಯೇ ಅಪಪ್ರಚಾರ ಆರಂಭಿಸಿದ್ದವು. ಚುನಾವಣೆಯಲ್ಲಿ ಇದು ಹೊಡೆತ ಕೊಟ್ಟೀತು ಎಂದು ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಜಾಣತನದಿಂದ ಕಾರ್ಯತಂತ್ರ ಬದಲಿಸಿದರು. ಮುಸ್ಲಿಂ-ಕ್ರಿಶ್ಚಿಯನ್ ಮತದಾರರ ನಡುವೆ ಇರುವ ಅಂತರವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ನಿರ್ಧರಿಸಿ ಕ್ರಿಶ್ಚಿಯನ್ ಮತಗಳ ಕ್ರೋಢೀಕರಣಕ್ಕೆ ಮುಂದಾದರು. ಅಭಿವೃದ್ಧಿಯ ಜೊತೆಗೆ ಅಭದ್ರತೆಯನ್ನೂ ಪ್ರಸ್ತಾಪಿಸಿ ಚುನಾವಣಾ ಕಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ಸಲ ಕೇರಳದಲ್ಲಿ ಬಿಜೆಪಿ ಎರಡಂಕಿ ತಲುಪುವ ಸಾಧ್ಯತೆ ಕಾಣಿಸುತ್ತಿದೆ. 2024 ರಲ್ಲಿ ತ್ರಿಶೂರ್ನಲ್ಲಿ ತನ್ನ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದಿದ್ದ ಬಿಜೆಪಿ ರಾಜ್ಯದಲ್ಲಿ ಶೇ 20 ರಷ್ಟು ಮತಗಳಿಕೆಯನ್ನು ತನ್ನದಾಗಿಸಿಕೊಂಡಿತ್ತು.













Click it and Unblock the Notifications