ಕೇರಳ ಚುನಾವಣೆ ಫಲಿತಾಂಶ 2026: 'ಮತ್ತೆ ತಿರುಗಿದ ಅಧಿಕಾರದ ಚಕ್ರ'; ಇಂದು ಯುಡಿಎಫ್ಗೆ ಒಲಿಯಲಿದೆಯೇ ಅದೃಷ್ಟ?
ಸುಮಾರು 35 ವರ್ಷಗಳ ಹಿಂದಿನಿಂದ ಕೇರಳದ ಮತದಾರರು ಪ್ರತಿ ಚುನಾವಣೆಯಲ್ಲೂ ಸರ್ಕಾರವನ್ನು ಬದಲಾಯಿಸುವ ಮಾದರಿಯನ್ನು ಅನುಸರಿಸಿಕೊಂಡು ಬಂದಿದ್ದರು. 2016ರ ವೇಳೆಗೆ ಈ 'ಪರ್ಯಾಯ ಸರ್ಕಾರದ' ವ್ಯವಸ್ಥೆ ಬಹುತೇಕ ಖಚಿತ ಎಂಬಂತಾಗಿತ್ತು. ಆದರೆ 2021ರಲ್ಲಿ ಎಲ್ಡಿಎಫ್ (LDF) ಸತತ ಎರಡನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಕೇರಳದ ಚುನಾವಣಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು. ಅಂದಿನ ಆ ಗೆಲುವು ಸರ್ಕಾರದ ಸದೃಢ ಆಡಳಿತದ ಪ್ರತಿಫಲವೋ ಅಥವಾ ದುರ್ಬಲ ವಿರೋಧ ಪಕ್ಷಗಳ ಕಾರಣವೋ ಎಂಬ ಪ್ರಶ್ನೆ ಎದ್ದಿತ್ತು. ಇದೀಗ 2026ರ ಚುನಾವಣೆಯ ಮತ ಎಣಿಕೆ ಇಂದು (ಮೇ 4) ನಡೆಯುತ್ತಿದ್ದು, ಸತತ ಮೂರನೇ ಅವಧಿಗೆ ಎಡಪಕ್ಷಗಳು ಅಧಿಕಾರಕ್ಕೇರುತ್ತವೆಯೇ ಎಂಬ ಕುತೂಹಲ ಮೂಡಿದೆ.
2021ರಲ್ಲಿ ಕೋವಿಡ್ ಬಿಕ್ಕಟ್ಟಿನ ನಿರ್ವಹಣೆಯನ್ನು ಎಲ್ಡಿಎಫ್ ತನ್ನ ಗೆಲುವಿಗೆ ಪ್ರಮುಖ ಅಸ್ತ್ರವಾಗಿ ಬಳಸಿತ್ತು. ಆದರೆ, ಈ ಭಾರಿ ಕೇರಳದ ಮತದಾರರ ಸಹಜ ಪ್ರವೃತ್ತಿಗೆ ಮತ್ತೆ ಮರಳಿದ್ದಾರೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯುತ್ತಿರುವ ಯುಡಿಎಫ್ ಮುನ್ನಡೆ ಸಾಧಿಸುವ ಸುಳಿವು ಲಭ್ಯವಾಗಿದೆ. ಎಕ್ಸಿಟ್ ಪೋಲ್ಗಳಲ್ಲಿ 140 ಸ್ಥಾನಗಳಿರುವ ಕೇರಳದಲ್ಲಿ ಯುಡಿಎಫ್ 78 ರಿಂದ 90 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಎಲ್ಡಿಎಫ್ 49-62 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಹಾಗೆಯೇ ಇಂದಿನ 11 ಗಂಟೆಯ ಒಳಗಿನ ಮತ ಏಣಿಕೆಯಲ್ಲಿ ಯುಡಿಎಫ್ 96 ಸ್ಥಾನಗಳನ್ನು ಪಡೆದು ಮುನ್ನಡೆಯಿದ್ದರೆ, ಎಲ್ಡಿಎಫ್ 43 ಸ್ಥಾನಕ್ಕೆ ಕುಸಿದಿದೆ. ಇನ್ನೂ ಬಿಜೆಪಿ ತೀರಾ ಕುಸಿತ ಕಂಡಿದ್ದು 1 ಸ್ಥಾನವನ್ನು ಪಡೆದಿದೆ.

ಯುಡಿಎಫ್ನ ಬಲವೃದ್ಧಿ
ಈ ಚುನಾವಣೆಯಲ್ಲಿ ಯುಡಿಎಫ್ ಐದು ಪ್ರಮುಖ ಅಸ್ತ್ರಗಳನ್ನು ನೆಚ್ಚಿಕೊಂಡಿದೆ. ವಿಪಕ್ಷ ನಾಯಕ ವಿ.ಡಿ. ಸತೀಶನ್ ಸರ್ಕಾರದ ವಿರುದ್ಧ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದ್ದು ಮೊದಲನೇ ಕಾರಣ. ಎರಡನೆಯದಾಗಿ, ಮುಷ್ಕರ ಅಥವಾ ಬಂದ್ಗಳಿಗೆ ಮೊರೆಹೋಗದೆ ಅಂಕಿ-ಅಂಶಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದು. ಮೂರನೆಯದಾಗಿ, ವಿರೋಧ ಪಕ್ಷದ ನಾಯಕರು ಸದನದಲ್ಲಿ ತೋರಿದ ಅತ್ಯುತ್ತಮ ಕಾರ್ಯವೈಖರಿ. ನಾಲ್ಕನೆಯದಾಗಿ, ಮಲಬಾರ್ ಭಾಗದಲ್ಲಿ ಮುಸ್ಲಿಂ ಲೀಗ್ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿರುವುದು. ಅಂತಿಮವಾಗಿ, 2021ರಲ್ಲಿ ಎಡಪಕ್ಷಗಳತ್ತ ವಾಲಿದ್ದ ಅಲ್ಪಸಂಖ್ಯಾತರು (ವಿಶೇಷವಾಗಿ ಮಧ್ಯ ಕೇರಳದ ಕ್ರಿಶ್ಚಿಯನ್ ಮತದಾರರು) ಮತ್ತೆ ಯುಡಿಎಫ್ ಕಡೆಗೆ ಮುಖ ಮಾಡಿರುವುದು.
ಎಲ್ಡಿಎಫ್ಗೆ ಹಿನ್ನಡೆ ಏಕೆ?
ಕೋವಿಡ್ ಸಂಕಷ್ಟದ ಸಮಯ ಮುಗಿದ ಬಳಿಕ ಆಡಳಿತ ವಿರೋಧಿ ಅಲೆ ಭಾರಿ ಪ್ರಮಾಣದಲ್ಲಿ ಪಕ್ಷವನ್ನು ಕಾಡತೊಡಗಿದೆ. ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2001-02ರಲ್ಲಿದ್ದ 3.22 ಲಕ್ಷ ಹೆಕ್ಟೇರ್ ಭತ್ತದ ಬೆಳೆಯ ಪ್ರದೇಶ 2021-22ರ ವೇಳೆಗೆ 1.95 ಲಕ್ಷ ಹೆಕ್ಟೇರ್ಗೆ ಕುಸಿದಿದೆ. ನಿರುದ್ಯೋಗ ಸಮಸ್ಯೆ ಮಿತಿಮೀರಿದ್ದು, 15-29 ವರ್ಷದ ಯುವಜನರಲ್ಲಿ ಶೇ.27.7ರಷ್ಟು ನಿರುದ್ಯೋಗವಿದೆ. ಪಿಂಚಣಿ ವಿತರಣೆಯಲ್ಲಿ ವಿಳಂಬ, ಆರೋಗ್ಯ ವಲಯದಲ್ಲಿನ ಕೊರತೆ ಹಾಗೂ ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ ಎಡಪಕ್ಷಗಳ ವರ್ಚಸ್ಸಿಗೆ ಭಾರಿ ಪೆಟ್ಟು ನೀಡಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಸಿಎಂ ಪಿಣರಾಯಿ ವಿಜಯನ್ ಅವರ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವುದು ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ.
ಒಗ್ಗಟ್ಟಿನಲ್ಲಿ ವಿಪಕ್ಷ, ವಿಭಜಿತ ಆಡಳಿತಾರೂಢ ಒಕ್ಕೂಟ
'ಟುಡೇಸ್ ಚಾಣಕ್ಯ' ಸಮೀಕ್ಷೆಯ ಪ್ರಕಾರ ಯುಡಿಎಫ್ 69 ಹಾಗೂ ಎಲ್ಡಿಎಫ್ 64 ಸ್ಥಾನಗಳನ್ನು ಪಡೆಯುವ ಮೂಲಕ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಬಿಜೆಪಿ ಕೂಡ 7 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ನೆಲೆ ವಿಸ್ತರಿಸುವ ನಿರೀಕ್ಷೆಯಿದೆ. ಯುಡಿಎಫ್ ನಾಯಕರು ಒಗ್ಗಟ್ಟಿನಿಂದ ಪ್ರಚಾರ ನಡೆಸಿದರೆ, ಎಲ್ಡಿಎಫ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಜಿ. ಸುಧಾಕರನ್ ಅವರಂತಹ ಹಿರಿಯ ನಾಯಕರು ಬಂಡಾಯವೆದ್ದಿದ್ದಾರೆ. ಕೆ.ಕೆ. ಶೈಲಜಾ ಅವರಂತಹ ಜನಪ್ರಿಯ ನಾಯಕಿಯನ್ನು ಅವರ ತವರು ಕ್ಷೇತ್ರ ಮಟನ್ನೂರಿನಿಂದ ಪೆರಾವೂರ್ಗೆ ಬದಲಾಯಿಸಿದ್ದು ಪಕ್ಷದೊಳಗಿನ ಬಿರುಕನ್ನು ಎತ್ತಿತೋರಿಸಿದೆ.
ಒಟ್ಟಿನಲ್ಲಿ ಕೇರಳದ 'ಬದಲಾವಣೆಯ ಚಕ್ರ' ಮತ್ತೆ ತಿರುಗುತ್ತಿರುವಂತೆ ಕಂಡರೂ, ಹಿಂದಿನಂತೆ ಅದು ಸುಗಮವಾಗಿಲ್ಲ ಎನ್ನಬಹುದು. ಎನ್ಡಿಎ ಪಡೆಯುತ್ತಿರುವ ಮತಗಳು ಹಾಗೂ ಯುವ ಮತದಾರರ ಬದಲಾದ ಒಲವು ಈ ಚುನಾವಣೆಯನ್ನು ಇನ್ನಷ್ಟು ರೋಚಕಗೊಳಿಸಿದೆ. ಎಡಪಕ್ಷಗಳ ಸಿದ್ಧಾಂತ ಇನ್ನೂ ಕೇರಳದ ನೆಲದಲ್ಲಿ ಜೀವಂತವಾಗಿದ್ದರೂ, ವಿರೋಧ ಪಕ್ಷಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಮತದಾರರು ಇಂದು ನೀಡುವ ತೀರ್ಪು ಸ್ಪಷ್ಟಪಡಿಸಲಿದೆ.












Click it and Unblock the Notifications