West Bengal: 2016ರಲ್ಲಿ 3, 2021ರಲ್ಲಿ 77 ಆಗಿದ್ದ ಬಿಜೆಪಿ ಈ ಬಾರಿ 100ಕ್ಕೂ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಹೇಗೆ?
ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಸೋಮವಾರ (ಮೇ 4) ಶುರುವಾಗಿದೆ. ಈ ವೇಳೆ ಇಡೀ ದೇಶದ ಕಣ್ಣುಗಳು ಪಶ್ಚಿಮ ಬಂಗಾಳ ಫಲಿತಾಂಶದ ಮೇಲೆ ನೆಟ್ಟಿದ್ದವು. ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲ ಸಮೀಕ್ಷಕರು ಈ ರಾಜ್ಯದಲ್ಲಿ ಟಿಎಂಸಿ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಾಳಗ ಏರ್ಪಡಲಿದೆ ಎಂಬ ಭವಿಷ್ಯವನ್ನು ನುಡಿದಿದ್ದರು. ಬಿಜೆಪಿ ಸಹ ಇದೇ ಮೊದಲ ಬಾರಿಗೆ ಈ ರಾಜ್ಯದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದೆ. ಹಾಗಿದ್ದರೆ ಬಂಗಾಳದಲ್ಲಿ ಕಮಲ ಅರಳಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಚುನಾವಣೆಗಳ ದಿನಾಂಕಗಳು ಆರಂಭವಾದಾಗಿನಿಂದಲೂ ಬಿಜೆಪಿ ಮಿಕ್ಕ ನಾಲ್ಕು ರಾಜ್ಯಗಳಿಗೆ ಅರ್ಧ ಪ್ರಾಮುಖ್ಯತೆ ನೀಡಿದ್ದರೆ, ಇನ್ನ ಅರ್ಧ ಪ್ರಾಮುಖ್ಯತೆಯನ್ನು ಬಂಗಾಳಕ್ಕೆ ನೀಡಿತ್ತು. ಬಿಜೆಪಿ ಸ್ಟಾರ್ ಪ್ರಚಾರಕರು ಬಂಗಾಳದಲ್ಲಿ ಬೀಡು ಬಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಮತದಾರರನ್ನು ಓಲೈಸಲು ಸುಮಾರು 12ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಕಾಣಿಸಿಕೊಂಡರು. ಈ ವೇಳೆ ಮೋದಿ ವಿಕಸಿತ್ ಬಂಗಾಳ, ಮಹಿಳೆಯರ ಸುರಕ್ಷತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡುತ್ತಲೇ ಬಂದರು. ತಮ್ಮ ವಾಗ್ಝರಿ ಉದ್ದಕ್ಕೂ ದಿದಿಯನ್ನು ಕುಟುಕುತ್ತಲೇ ಬಂದಿದ್ದ ಬಿಜೆಪಿ ಹಾಗೂ ಮೋದಿ ಮತದಾರರನ್ನು ಸೆಳೆಯಲು ವಿಶೇಷ ಯೋಜನೆಯನ್ನು ಮಾಡಿಕೊಂಡಿದ್ದರು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರವನ್ನು ದಶಕಗಳ ಕಾಲ ನಡೆಸಿತು. ಈ ವೇಳೆ ಪಕ್ಷದ ಮುಖವಾಗಿದ್ದ ಮಮತಾ ಬ್ಯಾನರ್ಜಿ (ದಿದಿ) ಆಡಳಿತ ಮತದಾರರಿಗೆ ಬೇಸರ ಉಂಟುಮಾಡಿತ್ತು. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ವಿರೋಧಿ ಅಲೆಯ ಕೂಗ ಕೇಳಿ ಬಂದಿತ್ತು. ಅಲ್ಲದೆ ಮಮತಾ ಸಾಲು ಸಾಲು ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾದರು. ಅಲ್ಲದೆ ಬಿಜೆಪಿ ಇದನ್ನೇ ತನ್ನ ಚುನಾವಣಾ ಪ್ರಚಾರ ಸಭೆಯಲ್ಲೂ ಪದೇ ಪದೇ ಹೇಳುತ್ತಲೇ ಸಾಗಿತು. ಶಿಕ್ಷಕರ ನೇಮಕಾತಿ ಹಗರಣ, ಪಡಿತರ ಹಗರಣ ಮತ್ತು ಸ್ಥಳೀಯ ನಾಯಕರ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡು ಮತ ಬೇಟೆ ಮುಂದಾಯಿತು.
ಅಧಿಕಾರ ವಿರೋಧಿ ಅಲೆ
ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನರು ನೀಡಬೇಕಾದ ಕಮಿಷನ್ ವಿರುದ್ಧದ ಆಕ್ರೋಶವು ಬಿಜೆಪಿಗೆ ವರದಾನವಾದಂತೆ ಕಂಡುಬರುತ್ತಿದೆ. ಎಡಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್ಗೆ ಬಿಜೆಪಿ ಕೈ ಹಾಕಿತು. ಪರಿಣಾಮ ಚುನಾವಣೆಯಲ್ಲಿ ಭಿನ್ನ ವಿಭಿನ್ನ ತಂತ್ರದೊಂದಿಗೆ ಕಣಕ್ಕೆ ಇಳಿಯಿತು. ಬಾಂಗ್ಲಾದೇಶದಿಂದ ಬರುವ ಅಕ್ರಮ ನುಸುಳುಕೋರರ ಬಗ್ಗೆ ಬಿಜೆಪಿ ರ್ಯಾಲಿಗಳಲ್ಲಿ ಗುರಿಯಾಗಿಸುತ್ತಲೇ ಇತ್ತು. ಇದು ಗಡಿ ಭಾಗದಲ್ಲಿ ಬಿಜೆಪಿ ಮತದಾರರನ್ನು ಓಲೈಸಲು ಸಹಾಯಕವಾದಂತೆ ಕಂಡು ಬಂದಿದೆ.
ಕೆಳ ಮಟ್ಟದಲ್ಲಿ ಕಾರ್ಯಕರ್ತರ ಪರಿಶ್ರಮ
ಈ ಚುನಾವಣೆಯಲ್ಲಿ ಬಿಜೆಪಿ ಬುಡಕಟ್ಟು ಹಾಗೂ ಸ್ಥಳೀಯ ಸಮುದಾಯಗಳ ಮನವೊಲಿಸಲು ಕಸರತ್ತು ನಡೆಸಿತು. ಬಂಕುರಾ ಮತ್ತು ಪುರುಲಿಯಾದಂತಹ ಪ್ರದೇಶಗಳಲ್ಲಿ ಬಿಜೆಪಿ ತನ್ನ ಬೇರುಗಳನ್ನು ಇನ್ನಷ್ಟು ಆಳವಾಗಿ ಬೀರುವತ್ತ ಕಾರ್ಯಕರ್ತರು ಸಹ ಶ್ರಮಿಸಿದರು. ಆರ್ಎಸ್ಎಸ್ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರು ಬಂಗಾಳದ ಹಳ್ಳಿ ಹಳ್ಳಿಗಳಲ್ಲಿ ಸಂಘಟನೆಯನ್ನು ಬಲಪಡಿಸಿರುವುದು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸುತ್ತಿದೆ.

ಬಿಜೆಪಿ ಪರ ಮತ ಯಾಚನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಹಲವು ಬಾರಿ ಮಾತನಾಡಿದ್ದರು. ಅಲ್ಲದೆ ಎರಡೂ ಕಡೆಗಳಲ್ಲಿ (ಕೇಂದ್ರ ಹಾಗೂ ರಾಜ್ಯ) ಒಂದೇ ಪಕ್ಷ ಅಧಿಕಾರದಲ್ಲಿ ಇದಲ್ಲಿ ಅಭಿವೃದ್ಧಿ ವೇಗ ಪಡೆಯುತ್ತದೇ ಎಂದು ಹೇಳುತ್ತಲೇ ಬಂದಿದ್ದರು. ಬಿಜೆಪಿ ವರ್ಷದಿಂದಲೇ ಮಾಡಿದ್ದ ಹಾರ್ಡ್ ವರ್ಕ್ಗೆ ಸೋಮವಾರ ಉತ್ತರ ಸಿಕ್ಕಂತೆ ಕಾಣುತ್ತಿದೆ.
ಪಶ್ಚಿಮ ಬಂಗಾಳದಲ್ಲಿ 293 ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಬಿಜೆಪಿ 156 (ಬೆಳಗ್ಗೆ 10.30ರ ವೇಳೆಗೆ) ಮುನ್ನಡೆ ಸಾಧಿಸಿದೆ.












Click it and Unblock the Notifications